ಡಿಕೆಶಿ, ಸಿದ್ದರಾಮಯ್ಯಗೆ ಬಿಎಸ್ವೈ ಬುಲಾವ್: ಕುತೂಹಲ ಮೂಡಿಸಿದ ರಾಜಕೀಯ ನಾಯಕರ ಭೇಟಿ...!
ಕೊರೋನಾ ವೈರಸ್ ಅಟ್ಟಹಾಸದ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಹಾಗೂ ಸಚಿವ ಅಶೋಕ್ ನಡುವೆ ರಾಜಕೀಯ ಕಿತ್ತಾಟ ಜೋರಾಗಿದೆ. ಇದರ ನಡುವೆ ಸಿಎಂ ಬಿಎಸ್ವೈ, ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಬುಲಾವ್ ನೀಡಿದ್ದಾರೆ.
ಬೆಂಗಳೂರು, (ಮೇ.07): ರಾಜ್ಯದಲ್ಲಿ ಲಾಕ್ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವವರಿಗೆ ಸಿಎಂ ಯಡಿಯೂರಪ್ಪ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ವಿಶೇಷ ಅಧಿವೇಶನ ಆಹ್ವಾನಿಸಿ ಎಂಬ ಒತ್ತಾಯದ ಹಿನ್ನೆಲೆ ನಾಳೆ (ಶುಕ್ರವಾರ) ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭೇಟಿಗೆ ಸಿಎಂ ಬಿಎಸ್ವೈ ಸಮಯ ನಿಗದಿಪಡಿಸಿದ್ದಾರೆ.
'ಡಿಕೆಶಿಯವರೇ ಸ್ಮಾರ್ಟ್ ಆಗಿ, ಓವರ್ ಸ್ಮಾರ್ಟ್ ಬೇಡ, ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ'
ಶುಕ್ರವಾರ ಬೆಳಗ್ಗೆ 11:30 ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಗೆ ಸಮಯ ಫಿಕ್ಸ್ ಆಗಿದೆ.
ಬುಧವಾರ ಸರ್ಕಾರ ವತಿಯಿಂದ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆ ಇಲ್ಲ. ವಿಪಕ್ಷ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದಾರೆ. ಅದಕ್ಕೆ ನಾನು ಸಮಯ ನಿಗದಿಪಡಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದರು.
ಅದರಂತೆ ವಿಪಕ್ಷ ನಾಯಕರ ಭೇಟಿಗೆ ಸಿಎಂ ಯಡಿಯೂರಪ್ಪ ಸಮಯ ನಿಗದಿ ಮಾಡಿದ್ದು, ಏನೆಲ್ಲಾ ಚರ್ಚೆ ನಡೆಸಲಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.