ಸಿದ್ದರಾಮಯ್ಯರಿಂದ ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ: ತೇಲ್ಕೂರ
ಸಿದ್ದರಾಮಯ್ಯ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಹೋಗಬಹುದು ಎಂದು ಹೇಳಿದ್ದಾರೆ. ಇದೆಷ್ಟು ಸರಿ? ಎಂದ ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ ಪಾಟೀಲ್ ತೇಲ್ಕೂರ
![CM Siddaramaiah Dividing Society on the Basis of Caste and Religion Says Rajkumar Telkur grg CM Siddaramaiah Dividing Society on the Basis of Caste and Religion Says Rajkumar Telkur grg](https://static-ai.asianetnews.com/images/01gddsnezf7gchk3gf8pjntgwy/rajkumar-patil-telkur_363x203xt.jpg)
ಕಲಬುರಗಿ(ಡಿ.24): ಬ್ರಿಟಿಷರು ದೇಶ, ರಾಜ್ಯ ವಿಭಜಿಸಿ ಆಳಿದ ಮಾದರಿಯಲ್ಲಿಯೇ ಸಿಎಂ ಸಿದ್ದರಾಮಯ್ಯನವರು ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಷಯ ಇದೀಗ ಸುಪ್ರೀಂ ಕೋರ್ಟಿನಲ್ಲಿದೆ. ಇಂಥ ಸಂದರ್ಭದಲ್ಲಿ ಹಿಜಾಬ್ಗೆ ಅನುಮತಿ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ವಿಷಯ ಹಿಂದೆ ಬಿಜೆಪಿ ಆಡಳಿತದ ಸಂದರ್ಭದಲ್ಲಿ ಹೈಕೋರ್ಟ್ಗೆ ಹೋಗಿ ಹಿಜಾಬ್ ಬೇಕೇ ಬೇಡವೇ ಎಂಬುದು ಸಾಕಷ್ಟು ಚರ್ಚೆ ಆಗಿತ್ತು. ಬಳಿಕ ಹಿಜಾಬ್ ಧರಿಸಬಾರದು, ಸಮವಸ್ತ್ರ ಧರಿಸಿ ಹೋಗಬೇಕೆಂದು ತೀರ್ಪು ಬಂದಿತ್ತು. ಆದರೆ, ಸಿದ್ದರಾಮಯ್ಯ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಹೋಗಬಹುದು ಎಂದು ಹೇಳಿದ್ದಾರೆ. ಇದೆಷ್ಟು ಸರಿ? ಎಂದು ತೇಲ್ಕೂರ ಕೇಳಿದ್ದಾರೆ.
ರೈತರಿಗೆ ಸಾಲ ವಸೂಲಾತಿ ನೋಟಿಸ್ ಶೂಲ: ಕಂಗಾಲಾದ ಅನ್ನದಾತ..!
ಶಾಲಾ ಕಾಲೇಜಿನಲ್ಲಿ ಟಿಪ್ಪು ಜಯಂತಿ ಆಚರಣೆ, ಹಿಜಾಬ್ ಧರಿಸಲು ಅವಕಾಶ, ಪಿಎಫ್ಐ ಭಯೋತ್ಪಾದಕರ 175 ಕೇಸ್ ವಾಪಸ್ ಪಡೆದಿದ್ದಾರೆ ಎಂದು ಖಂಡಿಸಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತ ಇದೆಯೇ ಅಥವಾ ಟಿಪ್ಪು ಸುಲ್ತಾನ್ ಆಡಳಿತ ಇದೆಯೇ? ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಇವರು 2ನೇ ಟಿಪ್ಪುಸುಲ್ತಾನನ ಆಡಳಿತ ಕೊಡುತ್ತಿದ್ದಾರೆಂದು ತೇಲ್ಕೂರ್ ದೂರಿದ್ದಾರೆ.
ಕಾನೂನು- ಸುವ್ಯವಸ್ಥೆ ಹಾಳಾಗಿದ್ದು, ವಿದ್ಯಾರ್ಥಿಗಳನ್ನು ಶೌಚಗುಂಡಿಗೆ ಇಳಿಸಿ ಸ್ವಚ್ಛಗೊಳಿಸುವಂತೆ ಮಾಡುತ್ತಿದ್ದಾರೆ. ಇದು ಟಿಪ್ಪುಸುಲ್ತಾನ್ ಆಡಳಿತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ನೀತಿ ವಾಪಸ್ ಪಡೆಯದೆ ಇದ್ದಲ್ಲಿ ದೊಡ್ಡ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.