Asianet Suvarna News Asianet Suvarna News

ಕಾಂಗ್ರೆಸ್‌ ಗ್ಯಾರಂಟಿಗಳನ್ನು ಜನ ನಂಬಲ್ಲ: ಸಿಎಂ ಬೊಮ್ಮಾಯಿ

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಪಕ್ಷದಿಂದ ಘೋಷಿಸಿರುವ ನಾಲ್ಕನೇ ಗ್ಯಾರಂಟಿಯಾದ ನಿರುದ್ಯೋಗ ಭತ್ಯೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಕಿಡಿಕಾರಿದ್ದಾರೆ. 

CM Basavaraj Bommai Slams On Congress At Hubballi gvd
Author
First Published Mar 22, 2023, 11:04 AM IST

ಹುಬ್ಬಳ್ಳಿ (ಮಾ.22): ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಪಕ್ಷದಿಂದ ಘೋಷಿಸಿರುವ ನಾಲ್ಕನೇ ಗ್ಯಾರಂಟಿಯಾದ ನಿರುದ್ಯೋಗ ಭತ್ಯೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಕಿಡಿಕಾರಿದ್ದಾರೆ. ಮೊದಲು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರಿಗೇ .3000 ಭತ್ಯೆ ಕೊಡಬೇಕು ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ, ಇವರ ಗ್ಯಾರಂಟಿಗಳನ್ನೆಲ್ಲ ನಂಬಲು ಇದು ರಾಜಸ್ಥಾನ, ಛತ್ತೀಸ್‌ಗಡ ಅಲ್ಲ. ಕರ್ನಾಟಕದ ಜನ ಬುದ್ಧಿವಂತರಿದ್ದಾರೆ ಎಂದು ಕಾಲೆಳೆದರು.

ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಸುದ್ದಿಗಾರರ ಜತೆಗೆ ಮಂಗಳವಾರ ಮಾತನಾಡಿದ ಅವರು, ಬಿಜೆಪಿಗೆ ನಮ್ಮ ಕೆಲಸಗಳೇ ಗ್ಯಾರಂಟಿ, ಸುಳ್ಳು ಹೇಳೋದು, ಸುಳ್ಳು ಆಶ್ವಾಸನೆ ಕೊಡೋದು ಗ್ಯಾರಂಟಿ ಅಲ್ಲ, ಕಾಂಗ್ರೆಸ್‌ನವರು ಇನ್ನೂ ನಾಲ್ಕು ಗ್ಯಾರಂಟಿ ಕಾರ್ಡ್‌ ಬಿಡುಗಡೆ ಮಾಡಲಿ. ಅದರಿಂದ ಏನೂ ಪ್ರಯೋಜನ ಇಲ್ಲ ಎಂದರು. ಕಾಂಗ್ರೆಸ್‌ನವರು ಯಾವ ವ್ಯಾವ ಘೋಷಣೆ ಮಾಡಿದ್ದಾರೆ. ಎಷ್ಟುಘೋಷಣೆಗಳನ್ನು ಈಡೇರಿಸಿದ್ದಾರೆ ಎಂಬ ಟ್ರ್ಯಾಕ್‌ರೆಕಾರ್ಡ್‌ ಇದೆ. ಒಂದರ ಮೇಲೊಂದು ಬೋಗಸ್‌ ಗ್ಯಾರಂಟಿ ಕಾರ್ಡ್‌ಗಳನ್ನು ನೀಡುತ್ತಿರುವ ಕಾಂಗ್ರೆಸ್‌ ಪಕ್ಷ, ಮಹಿಳೆಯರು ಮತ್ತು ಯುವಕರಿಗೆ ಯಾಮಾರಿಸುವುದು ಗ್ಯಾರಂಟಿ. 

ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿ: ಮನದಾಸೆ ವ್ಯಕ್ತಪಡಿಸಿದ ಬೊಮ್ಮಾಯಿ

ಅವರದು ಗ್ಯಾರಂಟಿ ಕಾರ್ಡ್‌ ಅಲ್ಲ, ಬರೇ ವಿಸಿಟಿಂಗ್‌ ಕಾರ್ಡ್‌. ಹಾಗಾಗಿ ಕಾಂಗ್ರೆಸ್‌ನಂತೆ ನಾವು (ಬಿಜೆಪಿ) ಗ್ಯಾರಂಟಿ ಕಾರ್ಡ್‌ಗಳನ್ನು ಕೊಡಲ್ಲ. ಬದಲಾಗಿ ನಮ್ಮ ಕೆಲಸಗಳೇ ಗ್ಯಾರಂಟಿ ಕಾರ್ಡ್‌ ಇದ್ದಂತೆ ಎಂದು ವ್ಯಾಖ್ಯಾನಿಸಿದರು. ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನಮಗೆ ಮತ್ತು ಜನಕ್ಕೆ ಗ್ಯಾರಂಟಿ. ಅವುಗಳನ್ನು ಜನರಿಗೆ ಮುಟ್ಟಿಸುವುದೂ ನಮ್ಮ ಗ್ಯಾರಂಟಿ. ಸದ್ಯ ಬೋಗಸ್‌ ಗ್ಯಾರಂಟಿಗಳು ಯಾವುವು ಎಂಬುದನ್ನು ಜನತೆ ನಿತ್ಯ ನೋಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಅಭಿವೃದ್ದಿ ನಿಗಮ ಸ್ಥಾಪನೆಗೆ ಅಭಿನಂದನೆ: ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾರ ಕರ್ನಾಟಕ ತಿಗಳ ಸಮೂದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದಕ್ಕೆ ಪಟ್ಟಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಪಟ್ಟಣದ ಹೊಸಪೇಟೆಯಲ್ಲಿ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ತಿಗಳರ ಚಾರಿಸ್ಟಬಲ್‌ ಟ್ರಸ್ವ್‌ ವತಿಯಿಂದ ಸಿಹಿ ಹಂಚಿ ಮಾತನಾಡಿದ ತಿಗಳ ಸಮೂದಾಯದ ಹಿರಿಯ ಮುಖಂಡ ನಾರಾಯಣಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ನಿಗಮ ಸ್ಥಾಪಿಸಿರುವುದಕ್ಕೆ ಅಭಿನಂದಿಸುತ್ತೇವೆ. ಹಲವು ವರ್ಷಗಳ ಬೇಡಿಕೆಯಾಗಿದ್ದ ನಿಗಮ ಸ್ಥಾಪನೆ ಮಾಡಿರುವುದಕ್ಕೆ ಅಭಾರಿಯಾಗಿರುತ್ತೇವೆ ಎಂದರು.

ಬಿಜೆಪಿ ಪಕ್ಷವು ನಮ್ಮ ಸಮುದಾಯದ 10 ಮಂದಿಗೆ ವಿಧಾನಸಭೆ ಟಿಕೆಟ್‌ ಹಾಗೂ ಲೋಕಸಭೆಯಲ್ಲಿ 5 ಮಂದಿಗೆ ಟಿಕೆಚ್‌ ನೀಡ​ಬೇಕು. ಆ ಮೂಲಕ ನಮ್ಮ ಸಮುದಾಯದ ಅಭಿವೃದ್ಧಿಗೆ ಒತ್ತು ಕೊಡಬೇಕು. ಇಲ್ಲವಾದರೆ ಸಮುದಾಯದ ವತಿಯಿಂದ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿ​ದರು. ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್‌.ಬಸವರಾಜು, ವಿ​ಧಾನ ಪರಿ​ಷತ್‌ ಸದಸ್ಯ ಪಿ.ಆರ್‌.ರ​ಮೇಶ್‌, ಮಾಜಿ ಶಾಸಕ ನರೇಂದ್ರ ಬಾಬು ರವರ ಪರಿಶ್ರಮದಿಂದ ನಿಗಮ ಸ್ಥಾಪನೆ ಮಾಡಲಾಗಿದೆ. ಇದರಿಂದ ನಮ್ಮ ಸಮುದಾಯ ಅಭಿವೃದ್ಧಿ ಕಾಣಬಹುದು ಎಂದು ತಿಳಿಸಿದರು.

ಸಿದ್ದು ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಬಾರುಕೋಲಲ್ಲಿ ಹೊಡೆದುಕೊಂಡು ಧರಣಿ!

ತಿಗಳ ಸಮುದಾಯದ ಮುಖಂಡ ಕೆಂಪಣ್ಣ ಮಾತನಾಡಿ, ನಿಗಮ ಸ್ಥಾಪನೆಯಿಂದ ನಮ್ಮ ಸಮುದಾಯ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ದಿ ಕಾಣಬಹುದು ಮುಂದೆ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ ನಮ್ಮ ಸಮೂದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ಕೆಲಸವನ್ನು ಸರ್ಕಾರ ಮಾಡಬೇಕಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

Follow Us:
Download App:
  • android
  • ios