ಬಳ್ಳಾರಿಯಲ್ಲಿ ಗೆದ್ದು ಅಲ್ಲಿ ಜನರಿಗೆ ಸೋನಿಯಾ ಮೋಸ, 4 ಕಿ.ಮೀ. ನಡೆಯಲು ಸವಾಲ್‌ ಹಾಕಿದ ಸಿದ್ದು 100 ವರ್ಷ ಬಾಳಲಿ: ಬೊಮ್ಮಾಯಿ ತಿರುಗೇಟು

ಬೆಂಗಳೂರು(ಅ.16):  ಭಾರತ ದೇಶ ಒಗ್ಗಟ್ಟಿನಿಂದ ಬಲಿಷ್ಠವಾಗಿ ಬೆಳೆಯುತ್ತಿರುವಾಗ ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆಯ ಅರ್ಥ ಏನು? ಭಾರತ ಈಗಾಗಲೇ ಒಕ್ಕೂಟವಾಗಿ, ಒಗ್ಗಟ್ಟಾಗಿ ಮುನ್ನಡೆಯುತ್ತಿದೆ. ಇದನ್ನು ಮತ್ತೆ ಜೋಡಿಸುವ ಪ್ರಮೇಯ ಇಲ್ಲ. ಇಡೀ ದೇಶ ಒಗ್ಗಟ್ಟಾಗಿ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಯನ್ನು ಸಾಧಿಸುತ್ತಿದೆ. ಪ್ರಸ್ತುತ ಇಡೀ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಅಮೆರಿಕ ಸೇರಿದಂತೆ ಜಿ 7 ದೇಶಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಭಾರತ ದೇಶ ಕನಿಷ್ಠ ಶೇ.7ರ ಅಭಿವೃದ್ಧಿಯನ್ನು ಕಾಯ್ದುಕೊಂಡು ಬಂದಿದೆ. ಕಾಂಗ್ರೆಸ್ಸಿನ ರಾಹುಲ… ಗಾಂಧಿ ಅವರ ಮೊದಲ ಮಿಸೈಲ… ವಿಫಲಗೊಂಡಿದ್ದು, ಈಗ ಮತ್ತೊಮ್ಮೆ ಲಾಂಚ್‌ ಮಾಡುವ ಪ್ರಯತ್ನದಲ್ಲಿದ್ದಾರೆ. ಅದು ಬಿಟ್ಟರೆ ಇವರ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳ್ಳಾರಿ ಜನರಿಗೆ ಕಾಂಗ್ರೆಸ್‌ ಮೋಸ:

ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್‌ನ ಭಾರತ್‌ ಜೋಡೋ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಈ ಹಿಂದೆ ಬಳ್ಳಾರಿಯಲ್ಲಿ ಲೋಕಸಭಾ ಚುನಾವಣೆಗೆ ನಿಂತು, ಗೆದ್ದರೆ ಕ್ಷೇತ್ರದಲ್ಲೇ ಮುಂದುವರಿಯುವುದಾಗಿ ನಿರ್ಣಯಿಸಿದ್ದರು. ಗೆದ್ದ ನಂತರ ರಾಯಬರೇಲಿ ಕ್ಷೇತ್ರ ಆಯ್ಕೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಮತ ಹಾಕಿದ ಜನರಿಗೆ ಕೃತಜ್ಞತೆಯನ್ನೂ ಸಲ್ಲಿಸಲಿಲ್ಲ. ಅಂದು ಮೂರು ಸಾವಿರ ಕೋಟಿ ರು. ಬಜೆಟ್‌ ನಿಗದಿಪಡಿಸಿ ಒಂದು ಪೈಸೆಯನ್ನೂ ಬಿಡುಗಡೆ ಮಾಡಲಿಲ್ಲ. ಈಗ ಯಾವ ಮುಖ ಇರಿಸಿಕೊಂಡು ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದೀರಿ. ಅಲ್ಲಿನ ಜನಕ್ಕೆ ನೀವು ಮೋಸ ಮಾಡಿದಂತಲ್ಲವೇ ಎಂದು ಕಾಂಗ್ರೆಸ್‌ ಪಕ್ಷವನ್ನು ಪ್ರಶ್ನಿಸಿದರು.

ಶೀಘ್ರವೇ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ

150ರ ಗುರಿ ಮುಟ್ಟುವ ವಿಶ್ವಾಸ:

ರಾಜ್ಯ ಬಿಜೆಪಿಯಿಂದ ಸಂಕಲ್ಪ ಯಾತ್ರೆಯನ್ನು ಪ್ರಾರಂಭ ಮಾಡಿದ್ದು, ಮೂರು ದಿನಗಳ ಕಾಲ ನಾಲ್ಕು ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಬಂದಿದೆ. ಬಿಜೆಪಿ ಬಗ್ಗೆ ಜನರಲ್ಲಿಯೂ ವಿಶ್ವಾಸ ಹೆಚ್ಚಿದೆ. ಸಂಕಲ್ಪಯಾತ್ರೆಯು ವಿಜಯ ಸಂಕಲ್ಪ ಯಾತ್ರೆ ಆಗುವುದರಲ್ಲಿ ಸಂಶಯವಿಲ್ಲ. 2023ರಲ್ಲಿ 150ರ ಗುರಿಯನ್ನು ಮುಟ್ಟುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯನವರ ನಾಲ್ಕು ಕಿ.ಮೀ. ನಡೆಯುವ ಸವಾಲಿನ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ನನ್ನ ಬಗ್ಗೆ ವೈಯಕ್ತಿಕವಾಗಿ ಟೀಕಿಸಿದ್ದಾರೆ. ಇದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ದೇವರು ಒಳ್ಳೆಯ ಆರೋಗ್ಯವನ್ನು ನೀಡಿ ನೂರು ವರ್ಷ ಚೆನ್ನಾಗಿರಲಿ ಎಂದರು.

ಕಾನೂನಿನ ಚೌಕಟ್ಟಿನಲ್ಲಿ ಕ್ರಮ:

ಮುರುಘಾಮಠಕ್ಕೆ ಹೊಸ ಶ್ರೀಗಳನ್ನು ನೇಮಿಸುವ ಬಗ್ಗೆ ಒತ್ತಡ ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಮಾಜಿ ಸಚಿವ ಏಕಾಂತಯ್ಯ ಅವರ ನೇತೃತ್ವದಲ್ಲಿ ಭಕ್ತಮಂಡಳಿಯ ಸದಸ್ಯರು ಬಂದು ಭೇಟಿಯಾಗಿದ್ದಾರೆ. ಅಲ್ಲಿನ ವಿಚಾರಗಳೆಲ್ಲವನ್ನೂ ತಿಳಿಸಿದ್ದಾರೆ. ಮಠದ ಆಡಳಿತಕ್ಕೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದ್ದಾರೆ . ಮಠದ ಟ್ರಸ್ಟ್‌ ಇದ್ದು, ಕಾನೂನಿನ ಚೌಕಟ್ಟಿನೊಳಗೆ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.