ಟಿಕೆಟ್‌ ಕೈ ತಪ್ಪಿದ ಪರಿಣಾಮ ಕಾಂಗ್ರೆಸ್‌ ಮೇಲೆ ಆಕ್ರೋಶಗೊಂಡಿರುವ ರಘು ಆಚಾರ್‌ ಅವರನ್ನು ಮನವೊಲಿಸುವ ಪ್ರಯತ್ನಗಳು ಶುಕ್ರವಾರ ನಡೆದವು. ಹೈಕಮಾಂಡ್‌ ಸೂಚನೆ ಮೇರೆಗೆ ಪಕ್ಷದ ಅಭ್ಯರ್ಥಿ ವೀರೇಂದ್ರ ಪಪ್ಪಿ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಫೀರ್‌ ಅವರು ರಘು ಆಚಾರ್‌ ನಿವಾಸಕ್ಕೆ ತೆರಳಿ ಮನವೊಲಿಕೆಗೆ ಮುಂದಾದರು. 

ಚಿತ್ರದುರ್ಗ (ಏ.08): ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌ ಅವರು ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ಸೇರ್ಪಡೆ ಆಗಲು ಮುಹೂರ್ತ ಫಿಕ್ಸ್‌ ಆಗಿದೆ. ಶುಕ್ರವಾರ ದಿನವಿಡೀ ಚಿತ್ರದುರ್ಗದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಪಕ್ಕಾ ಫಲಿತಾಂಶ ನೀಡಿದ್ದು, ಏಪ್ರಿಲ್‌ 14ರಂದು ಮಧ್ಯಾಹ್ನ 12.07ಕ್ಕೆ ಬೆಂಗಳೂರಿನ ಜೆಪಿ ಭವನದಲ್ಲಿ ಅವರು ಜೆಡಿಎಸ್‌ ಸೇರಲಿದ್ದಾರೆ.

ಟಿಕೆಟ್‌ ಕೈ ತಪ್ಪಿದ ಪರಿಣಾಮ ಕಾಂಗ್ರೆಸ್‌ ಮೇಲೆ ಆಕ್ರೋಶಗೊಂಡಿರುವ ರಘು ಆಚಾರ್‌ ಅವರನ್ನು ಮನವೊಲಿಸುವ ಪ್ರಯತ್ನಗಳು ಶುಕ್ರವಾರ ನಡೆದವು. ಹೈಕಮಾಂಡ್‌ ಸೂಚನೆ ಮೇರೆಗೆ ಪಕ್ಷದ ಅಭ್ಯರ್ಥಿ ವೀರೇಂದ್ರ ಪಪ್ಪಿ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಫೀರ್‌ ಅವರು ರಘು ಆಚಾರ್‌ ನಿವಾಸಕ್ಕೆ ತೆರಳಿ ಮನವೊಲಿಕೆಗೆ ಮುಂದಾದರು. ವೀರೇಂದ್ರ ಪಪ್ಪಿ ಅವರನ್ನು ಪ್ರೀತಿಯಿಂದಲೇ ಬರಮಾಡಿಕೊಂಡ ರಘು ಆಚಾರ್‌, ಮನವೊಲಿಕೆಗೆ ಬಗ್ಗಲಿಲ್ಲ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಶಾಲು ಹೊದಿಸಿ ಬೀಳ್ಕೊಟ್ಟರು. 

ಏ.9 ಅಥವಾ 10ಕ್ಕೆ ಜೆಡಿ​ಎಸ್‌ ಅಂತಿಮ ಪಟ್ಟಿ ಬಿಡು​ಗಡೆ: ಎಚ್‌.ಡಿ.ಕುಮಾ​ರ​ಸ್ವಾಮಿ

ಅದೇ ರೀತಿ ವೀರೇಂದ್ರ ಪಪ್ಪಿಗೆ ಶುಭವಾಗಲಿ ಎಂದು ಹಾರೈಸಿದರು. ಈ ವೇಳೆಗಾಗಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಂಪರ್ಕದಲ್ಲಿದ್ದ ರಘು ಆಚಾರ್‌ ಅತ್ತ ಹೋಗಲು ಮನಸ್ಸು ಮಾಡಿದ್ದರು. ಏತನ್ಮಧ್ಯೆ, ಪಕ್ಷದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶರವಣ್‌ ನೇರವಾಗಿ ರಘು ಆಚಾರ್‌ ನಿವಾಸಕ್ಕೆ ತೆರಳಿ ಕೆಲ ಕಾಲ ಚರ್ಚಿಸಿದರು. ರಘು ಆಚಾರ್‌ ಅವರನ್ನು ಜೆಡಿಎಸ್‌ಗೆ ಕರೆ ತರುವ ಪ್ರಯತ್ನದಲ್ಲಿ ಯಶ ಕಂಡರು. ನಂತರ ಮಾತನಾಡಿದ ಶರವಣ, ರಘು ಆಚಾರ್‌ ಜೆಡಿಎಸ್‌ ಸೇರಲು ಒಪ್ಪಿದ್ದಾರೆ. 

ಏಪ್ರಿಲ್‌ 14ರಂದು ಬೆಂಗಳೂರಿನಲ್ಲಿ ಸೇರ್ಪಡೆಯಾಗಲಿದ್ದಾರೆ. ಅವರಿಗೆ ಟಿಕೆಟ್‌ ನೀಡುವ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಶರವಣ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಘು ಆಚಾರ್‌, ಏಪ್ರಿಲ್‌ 14ರ ಮಧ್ಯಾಹ್ನ 12.07ಕ್ಕೆ ಜೆಡಿಎಸ್‌ಗೆ ಸೇರುವುದನ್ನು ಖಚಿತ ಪಡಿಸಿದರು. ‘ನಾನು ಬೇಷರತ್ತಾಗಿ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದೇನೆ. ಸ್ವಾಭಿಮಾನಕ್ಕೆ ಚ್ಯುತಿ ತಂದವರಿಗೆ ತಕ್ಕ ಉತ್ತರ ಕೊಡುವೆ. ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲ್ಲಿಸುವೆ. ಜೆಡಿಎಸ್‌ನ ವರಿಷ್ಠರು ನನಗೆ ಟಿಕೆಟ್‌ ಬಗ್ಗೆ ತೀರ್ಮಾನಿಸುತ್ತಾರೆ. 

ಕ್ರೈಸ್ತ ಮಿಷನರಿಗಳಿಗಿಂತ ದಕ್ಷಿಣದ ಹಿಂದು ಶ್ರೀಗಳ ಸೇವೆ ಅಧಿಕ: ಮೋಹನ್‌ ಭಾಗವತ್‌

ಚಿತ್ರದುರ್ಗದಿಂದ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಜೆಡಿಎಸ್‌ ಗೆಲ್ಲಿಸಿಕೊಂಡು ಬರುತ್ತೇನೆ. ಯಾವುದಕ್ಕೂ ಬೆಂಬಲಿಗರ ಅಭಿಪ್ರಾಯ ಕೇಳಿಯೇ ಮುಂದುವರಿಯುವೆ’ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.