Asianet Suvarna News Asianet Suvarna News

31 ತಿಂಗಳ ಬಳಿಕ ಎಪಿ ವಿಧಾನಸಭೆಗೆ ಚಂದ್ರಬಾಬು ನಾಯ್ಡು : ಮಾಡಿದ್ದ ಪ್ರತಿಜ್ಞೆ ನಿಜ ಮಾಡಿದ ಆಂಧ್ರ ಸಿಎಂ

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬರೋಬ್ಬರಿ 31 ತಿಂಗಳ ನಂತರ ಮತ್ತೆ ಚುನಾವಣೆಯಲ್ಲಿ ಗೆದ್ದು ಆಂಧ್ರ ಪ್ರದೇಶ ವಿಧಾನಸಭೆಯನ್ನು ಪ್ರವೇಶಿಸಿದ್ದು, ಈ ಮೂಲಕ ಹಿಂದೆ ಅವರು ಮಾಡಿದ್ದ ಪ್ರತಿಜ್ಞೆಯೊಂದನ್ನು ನಿಜ ಮಾಡಿದ್ದಾರೆ.

Chandrababu Naidu fulfilled his vow by arriving Andhra Legislative Assembly as a CM after 31 months akb
Author
First Published Jun 21, 2024, 6:03 PM IST | Last Updated Jun 21, 2024, 6:03 PM IST

ಅಮರಾವತಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬರೋಬ್ಬರಿ 31 ತಿಂಗಳ ನಂತರ ಮತ್ತೆ ಚುನಾವಣೆಯಲ್ಲಿ ಗೆದ್ದು ಆಂಧ್ರ ಪ್ರದೇಶ ವಿಧಾನಸಭೆಯನ್ನು ಪ್ರವೇಶಿಸಿದ್ದು, ಈ ಮೂಲಕ ಹಿಂದೆ ಅವರು ಮಾಡಿದ್ದ ಪ್ರತಿಜ್ಞೆಯೊಂದನ್ನು ನಿಜ ಮಾಡಿದ್ದಾರೆ.  2021ರ ನವಂಬರ್‌ನಲ್ಲಿ ತಮ್ಮ ಕುಟುಂಬಕ್ಕೆ ಅವಮಾನ ಮಾಡಿದರು ಎಂದು ಆಂಧ್ರ ಪ್ರದೇಶ ವಿಧಾನಸಭೆಯಿಂದ ಹೊರನಡೆದೆ ಚಂದ್ರಬಾಬು ನಾಯ್ಡು ಅವರು ಈ ವೇಳೆ ಪ್ರತಿಜ್ಞೆಯೊಂದನ್ನು ಮಾಡಿದ್ದರು. ಮುಂದೆ ಆಂಧ್ರ ಪ್ರದೇಶ ವಿಧಾನಸಭೆ ಪ್ರವೇಶಿಸುವುದಾದರೆ ಸಿಎಂ ಆಗಿ ಮಾತ್ರ ಎಂದು ಟಿಡಿಪಿ ನಾಯಕ ಪ್ರತಿಜ್ಞೆ ಮಾಡಿದ್ದರು. ಅದರಂತೆ ಮುಂದೆ ಎರಡು ವರ್ಷಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಭರ್ಜರಿ ಬಹುಮತದೊಂದಿಗೆ ಗೆದ್ದು ಸರ್ಕಾರ ರಚನೆ ಮಾಡಿದ್ದು, ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ. 175 ಸದಸ್ಯ ಬಲದ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಟಿಡಪಿ ಬರೋಬರಿ 135 ಸೀಟುಗಳನ್ನು ಗೆದ್ದಿದ್ದರೆ ಮಿತ್ರಪಕ್ಷ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ 21 ಸೀಟುಗಳನ್ನು ಗೆದ್ದಿತ್ತು. 

ಇಂದು ಆಂಧ್ರ ಪ್ರದೇಶ ವಿಧಾನಸಭಾ ಕಲಾಪಕ್ಕೆ ಸಿಎಂ ಆಗಿ ಆಗಮಿಸಿದ ಚಂದ್ರಬಾಬು ನಾಯ್ಡು ಅವರಿಗೆ ಇಡೀ ಸದನದ ಸದಸ್ಯರು ಎದ್ದು ನಿಂತು ಆತ್ಮೀಯವಾಗಿ ಸ್ವಾಗತಿಸಿದರು. ಇದರ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ನಾಯ್ಡು ಅವರ 4ನೇ ಅವಧಿಯಾಗಿದೆ. 

ಆಂಧ್ರದಲ್ಲಿ ಜನಸೇನಾ ನಾಯಕ ಪವನ್‌ ಕಲ್ಯಾಣ್‌ಗೆ ಡಿಸಿಎಂ ಪಟ್ಟ..!

2021ರ ನವಂಬರ್ 19 ರಂದು ಆಗ ಆಂಧ್ರ ಪ್ರದೇಶದಲ್ಲಿ ಆಡಳಿತದಲ್ಲಿ ಜಗನ್ ನೇತೃತ್ವದ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ (YSRCP) ಸದಸ್ಯರು ಚಂದ್ರಬಾಬು ನಾಯ್ಡು ಅವರ ಪತ್ನಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಮಹಿಳಾ ಸಬಲೀಕರಣದ ಕುರಿತು ನಡೆದ ಚರ್ಚೆಯ ವೇಳೆ ಈ ಘಟನೆ ನಡೆದಿತ್ತು. ಈ ವೇಳೆ ಚಂದ್ರಬಾಬು ನಾಯ್ಡು ಅವರು ಕೈ ಜೋಡಿಸಿ ಪ್ರತಿಜ್ಞೆ ಮಾಡಿ ಕೈ ಜೋಡಿಸಿ ಕಣ್ಣೀರು ಸುರಿಸುತ್ತಾ ವಿಧಾನಸಭೆಯಿಂದ ಹೊರ ನಡೆದಿದ್ದರು. 

ಇನ್ನು ಮುಂದೆ ನಾನು ಈ ವಿಧಾನಸಭೆ ಪ್ರವೇಶಿಸುವುದಿಲ್ಲ, ನಾನು ಮತ್ತೆ ವಿಧಾನಸಭೆಗೆ ಬರುವುದಾದರೆ ಸಿಎಂ ಆಗಿ ಮಾತ್ರ ಎಂದು ಆ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ಹೇಳಿದ್ದರು. ಜೊತೆಗೆ ವಿಧಾನಸಭೆಯನ್ನು ಅವರು ಮಹಾಭಾರತದ ದ್ರೌಪದಿ ವಸ್ತ್ರಾಪಹರಣಕ್ಕೆ ಹೋಲಿಸುತ್ತಾ ಕೌರವಸಭಾ ಎಂದು ಕರೆದಿದ್ದರು. 2019ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ವೈಎಸ್‌ ಜಗನ್ ಮೋಹನ್ ರೆಡ್ಡಿ ಅವರು 151 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿದ್ದರು.  ಪ್ರಮುಖ ಜಿಲ್ಲೆಗಳಾದ ಕಡಪಾ, ಕರ್ನೂಲ್, ನೆಲ್ಲೂರ್, ವಿಶಾಖಪಟ್ಟಣ ಮುಂತಾದೆಡೆ ವೈಎಸ್‌ಆರ್‌ಸಿಪಿ ಕ್ಲೀನ್ ಸ್ವೀಪ್ ಮಾಡಿತ್ತು. ಆ ಚುನಾವಣೆಯಲ್ಲಿ ಟಿಡಿಪಿ ಕೇವಲ 23 ಸೀಟುಗಳನ್ನು ಗಳಿಸಲು ಸಫಲವಾಗಿತ್ತು.

ಕಾರ್ಯಕರ್ತನ ಗುರುತಿಸಿ ಸಚಿವನನ್ನಾಗಿ ಮಾಡಿದ ಬಿಜೆಪಿಯನ್ನು ಶ್ಲಾಘಿಸಿದ ನಾಯ್ಡು: ವೀಡಿಯೋ ವೈರಲ್‌

ಅಂದು ಚಂದ್ರಬಾಬು ನಾಯ್ಡು ಅವರು ಚುನಾವಣೆಗೂ ಮೊದಲು 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಬಿಟ್ಟು ಯುಪಿಎ ಮೈತ್ರಿಕೂಟವನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಅವರು ಭಾರಿ ಬೆಲೆ ತೇರಬೇಕಾಗಿ ಬಂದಿತ್ತು. ಲೋಕಸಭೆ ಹಾಗೂ ವಿಧಾನಸಭೆ ಎರಡೂ ಚುನಾವಣೆಯಲ್ಲೂ ಟಿಡಿಪಿ ಸೋತಿತ್ತು. ಆದರೆ 2024ರ ಲೋಕಸಭಾ ಚುನಾವಣೆಯೂ ಚಂದ್ರಬಾಬು ನಾಯ್ಡು ಅವರಿಗೆ ರಾಜಕೀಯ ಪುನರುಜ್ಜೀವನವನ್ನು ನೀಡಿದೆ. 

Latest Videos
Follow Us:
Download App:
  • android
  • ios