ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿ ಸಮೀಕ್ಷೆ) ಯಾವುದೇ ಗೊಂದಲ ಇಲ್ಲ. ಸಮೀಕ್ಷೆಯಲ್ಲಿ ಎಲ್ಲ ಸಮುದಾಯದ ಜನರೂ ಭಾಗಿಯಾಗಿ ಆಯೋಗ ಕೇಳಿರುವ ಮಾಹಿತಿ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು (ಸೆ.26): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿ ಸಮೀಕ್ಷೆ) ಯಾವುದೇ ಗೊಂದಲ ಇಲ್ಲ. ಸಮೀಕ್ಷೆಯಲ್ಲಿ ಎಲ್ಲ ಸಮುದಾಯದ ಜನರೂ ಭಾಗಿಯಾಗಿ ಆಯೋಗ ಕೇಳಿರುವ ಮಾಹಿತಿ ನೀಡಬೇಕು. ಇದರಿಂದ ಎಲ್ಲರಿಗೂ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಸಹಕಾರಿ. ಮಾಹಿತಿ ನೀಡದಿದ್ದರೆ ತಮ್ಮ ಸಮುದಾಯಕ್ಕೆ ತಾವೇ ಅನ್ಯಾಯ, ಮೋಸ ಮಾಡಿಕೊಂಡಂತಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿಗಣತಿ ವಿಚಾರವಾಗಿ ಗೊಂದಲಗಳು ಉಂಟಾಗಿವೆ ಎನ್ನುವ ಬಗ್ಗೆ ಕೇಳಿದಾಗ, ಯಾವುದೇ ತೊಂದರೆಗಳು ಉಂಟಾಗಿಲ್ಲ. ಯಾವುದೇ ಕೆಲಸ ಪ್ರಾರಂಭದಲ್ಲಿ ಸ್ವಲ್ಪ ನಿಧಾನವಾಗಿರುತ್ತದೆ. ಒಂದು ಹಂತಕ್ಕೆ ಬಂದ ನಂತರ ಉತ್ತಮ ಸ್ಥಿತಿಗೆ ಬರುತ್ತದೆ. ನಂತರ ಎಲ್ಲವೂ ಸರಿ ಹೋಗುತ್ತದೆ. ನಾನು ಎಲ್ಲರಲ್ಲೂ ಮನವಿ ಮಾಡುತ್ತಿದ್ದೇವೆ. ಸಂಘ-ಸಂಸ್ಥೆಗಳು, ಸಮುದಾಯದ ಮುಖಂಡರು ಸಮುದಾಯದಲ್ಲಿ ಜಾಗೃತಿ ಮೂಡಿಸಿ ನಿಮ್ಮ ಸಮುದಾಯಗಳ ಬಗ್ಗೆ ಬರೆಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನೀವೇ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಯುವಕರಿಗೆ ಪ್ರಜಾಪ್ರಭುತ್ವ ಮೌಲ್ಯದ ಅರಿವು ಮುಖ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನ ನೀಡಿರುವ ಮತದಾನದ ಶಕ್ತಿ ಮದ್ದುಗುಂಡಿಗಿಂತಲೂ ಬಲಾಢ್ಯ ಎನ್ನುವ ಮಾತಿದೆ. ಹಾಗಾಗಿ ನಮ್ಮ ವಿದ್ಯಾರ್ಥಿಗಳು, ಯುವಜನರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಯುವುದು ಬಹಳ ಮುಖ್ಯ ಎಂದು ಹೇಳಿದರು. ಜನರಿಗೆ ಮತದಾನದ ಹಕ್ಕು ಸಿಕ್ಕ ಬಳಿಕ ಮಹಾರಾಜರು ಮನೆಯಲ್ಲಿ ಕೂತಿದ್ದಾರೆ. ಮತದಾನದ ಹಕ್ಕಿನಿಂದ ಆಯ್ಕೆಯಾದವರು ಜನಸೇವೆ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಅವರು ಸೇರಿ ಅನೇಕ ನಾಯಕರು ಜನರ ಮತಗಳಿಂದ ಅಧಿಕಾರಕ್ಕೆ ಬಂದು ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿದ್ದೇವೆ. ಆದರೆ, ಇಂದು ಮತಗಳ್ಳತನಕ್ಕೆ ಕೆಲವರು ಕೈ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಾಕಷ್ಟು ಹೆಚ್ಚು-ಕಡಿಮೆಯಾಗಿದೆ.
ಇದರ ವಿರುದ್ದ ರಾಹುಲ್ ಗಾಂಧಿಯವರು ಹೋರಾಟ ರೂಪಿಸಿದ್ದಾರೆ. ಇಂತಹ ಮತ ಶಕ್ತಿ ನೀಡಿರುವ ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಆಶಯಗಳ ಬಗ್ಗೆ ನಮ್ಮ ಯುವಜನರು ಹೆಚ್ಚು ತಿಳಿದುಕೊಳ್ಳಬೇಕು ಎಂದರು. ಪ್ರಜಾಪ್ರಭುತ್ವದಲ್ಲಿ ಒಂದೊಂದು ಮತವೂ ಎಷ್ಟು ಅಮೂಲ್ಯ ಎಂದರೆ, ಚಾಮರಾಜನಗರದ ಸಂಸದರಾಗಿದ್ದ ದಿವಂಗತ ಧ್ರುವನಾರಾಯಣ ಅವರು ಒಂದು ಮತದ ಅಂತರದಿಂದ ಜಯಗಳಿಸಿದರು. ಅವರ ವಿರುದ್ಧ ನಿಂತಿದ್ದ ಪ್ರಸ್ತುತ ಕೊಳ್ಳೆಗಾಲದ ಶಾಸಕರಾಗಿರುವ ಕೃಷ್ಣಮೂರ್ತಿ ಅವರ ಚಾಲಕ ಸಮಯ ಮೀರಿ ಹೋಯಿತು ಎಂದು ಮತ ಹಾಕಲಿಲ್ಲ. ಇದರಿಂದ ಅವರು ಸೋಲಬೇಕಾಯಿತು. ರಾಜಸ್ಥಾನದ ಸಿ.ಪಿ.ಜೋಶಿಯವರು ಎರಡು ಅಥವಾ ಮೂರು ಮತಗಳಿಂದ ಸೋತರು. ಇಲ್ಲದಿದ್ದರೆ ಅಂದು ಮುಖ್ಯಮಂತ್ರಿಗಳಾಗಬೇಕಾಗಿತ್ತು ಎಂದರು.
