Asianet Suvarna News Asianet Suvarna News

ನನಗೆ ಆರೋಗ್ಯಕ್ಕಿಂತ ಅಭ್ಯರ್ಥಿಗಳ ಗೆಲುವು ಮುಖ್ಯ: ಎಚ್‌.ಡಿ.ಕುಮಾರಸ್ವಾಮಿ

ಕೆ.ಆರ್‌. ಕ್ಷೇತ್ರದಲ್ಲಿ ವೀರಶೈವ ಸಮಾಜದ ಕೆ.ವಿ. ಮಲ್ಲೇಶ್‌ ಗೆಲ್ಲುವ ಎಲ್ಲಾ ಅವಕಾಶಗಳೂ ಇದ್ದು, ಕಾರ್ಯಕರ್ತರು ಮೈ ಮರೆಯದೆ ಗೆಲುವಿಗೆ ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕರೆ ನೀಡಿದರು. 

Candidates victory is more important to me than health Says HD Kumaraswamy gvd
Author
First Published Apr 26, 2023, 10:21 PM IST

ಮೈಸೂರು (ಏ.26): ಕೆ.ಆರ್‌. ಕ್ಷೇತ್ರದಲ್ಲಿ ವೀರಶೈವ ಸಮಾಜದ ಕೆ.ವಿ. ಮಲ್ಲೇಶ್‌ ಗೆಲ್ಲುವ ಎಲ್ಲಾ ಅವಕಾಶಗಳೂ ಇದ್ದು, ಕಾರ್ಯಕರ್ತರು ಮೈ ಮರೆಯದೆ ಗೆಲುವಿಗೆ ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕರೆ ನೀಡಿದರು. ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಸಭೆ ಹಾಗೂ ಜೆಡಿಎಸ್‌ ಅಭ್ಯರ್ಥಿ ಕೆ.ವಿ. ಮಲ್ಲೇಶ್‌ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಕೆ.ವಿ. ಮಲ್ಲೇಶ್‌ ಪ್ರಮಾಣಿಕ, ಸಜ್ಜನ ವ್ಯಕ್ತಿ. ಈ ಬಾರಿ ಅವರನ್ನು ಗೆಲ್ಲಿಸುವ ಅವಕಾಶಗಳಿವೆ. ವೀರಶೈವ ಸಮಾಜದವರಿಗೆ ಹಲವು ವರ್ಷಗಳ ನಂತರ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಅವಕಾಶ ಬಂದೊದಗಿದೆ ಎಂದರು. 

ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಇನ್ನೂ 15 ದಿನ ಮೈ ಮರೆಯದೆ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಕಾರ್ಯಕ್ರಮಗಳ ಮನವರಿಕೆ ಮಾಡಿಕೊಡಬೇಕು ಎಂದು ಅವರು ತಿಳಿಸಿದರು. ಎಲ್ಲಾ ಸಮಾಜದಲ್ಲೂ ಬಡವರಿದ್ದಾರೆ. ಹಲವರಿಗೆ ಮನೆಯೇ ಇಲ್ಲ. ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಇನ್ನೂ ವಸತಿ ರಹಿತರಾಗಿದ್ದಾರೆ. ಯುವಕರಿಗೆ ಉದ್ಯೋಗ, ಗುಣಮಟ್ಟದ ಶಿಕ್ಷಣ, ಸರ್ವರಿಗೂ ಆರೋಗ್ಯ, ರೈತರ ಸಸಮಸ್ಯೆಗಳಿಗೆ ಪರಿಹಾರ ಪಂಚರತ್ನ ಕಾರ್ಯಕ್ರಮಗಳಲ್ಲಿದ್ದು, ಕಾರ್ಯಕರ್ತರು ವಾರ್ಡ್‌ ಮಟ್ಟದಲ್ಲಿ ಸಮಿತಿ ರಚಿಸಿಕೊಂಡು ಮನೆ ಮನೆಗೆ ತೆರಳಿ ನಮ್ಮ ಯೋಜನೆಗಳನ್ನು ತಿಳಿಸುವುದರ ಜೊತೆಗೆ ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳ ದುರಾಡಳಿತದ ಬಗ್ಗೆಯೂ ತಿಳಿಸಬೇಕು ಎಂದು ಅವರು ಹೇಳಿದರು.

ಅಮಿತ್ ಶಾ ಮಾತನಾಡಿದ್ರು ವಿಶ್ವಾಸ ದ್ರೋಹ ಮಾಡಿ ಶೆಟ್ಟರ್ ಹೋಗಿದ್ದಾರೆ: ಬಿ.ಎಸ್.ಯಡಿಯೂರಪ್ಪ

ಮಲ್ಲೇಶ್‌ ಗೆಲ್ಲಿಸಿ: ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ರಾಜ್ಯದ ಜನ ಕುಮಾರಣ್ಣ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ. ಎಲ್ಲಾ ವರ್ಗದವರಿಗೂ ಕಾರ್ಯಕ್ರಮ ನೀಡಲು ಪಂಚರತ್ನ ಯೋಜನೆ ರೂಪಿಸಲಾಗಿದೆ. 123 ಕ್ಷೇತ್ರದಲ್ಲಿ ಗೆಲ್ಲಬೇಕೆಂಬುದೇ ನಮ್ಮ ಗುರಿಯಾಗಿದ್ದು, ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಕೆ.ವಿ. ಮಲ್ಲೇಶ್‌ ಅವರನ್ನು ಗೆಲ್ಲಿಸುವ ಮೂಲಕ ಕುಮಾರಣ್ಣನ ಕೈ ಬಲಪಡಿಸಬೇಕು ಎಂದರು. ಸುಂದರ ಮೈಸೂರಿನ ಉಳಿವಿಗೆ, ನಿಮ್ಮ ಅಭಿವೃದ್ಧಿಗೆ ಜೆಡಿಎಸ್‌ ಬೆಂಬಲಿಸಿ. ಒಂದು ದಿನದ ಆಸೆಗೆ ಮೋಸ ಹೋಗದೆ ಕೆ.ವಿ. ಮಲ್ಲೇಶ್‌ ಗೆಲ್ಲಿಸಿ. ಹಗಲಿರುಳು ನಿಮ್ಮ ಸೇವೆ ಮಾಡುತ್ತಾರೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಹೊಲ ಉತ್ತಿದ್ದಾರಾ?: ಶಾಸಕ ಸಾ.ರಾ. ಮಹೇಶ್‌ ಮಾತನಾಡಿ, ನಾನು ರಿಯಲ್‌ ಎಸ್ಟೇಟ್‌ ಮಾಡುತ್ತೇನೆ. ಹೀಗಾಗಿ ನನ್ನ ಬಳಿ ಆಸ್ತಿ ಇದೆ. ಸಿದ್ದರಾಮಯ್ಯ ಅವರು 50 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಅವರೇನು ಹೊಲ ಉತ್ತಿದ್ದಾರಾ? ಲಿಂಗಾಯತ ಸಿಎಂಗಳು ಭ್ರಷ್ಟರು ಎನ್ನುವ ಸಿದ್ದರಾಮಯ್ಯ ಅವರು ಮೊದಲು ತಮ್ಮ ಬಗ್ಗೆ ಯೋಚಿಸಲಿ. ತಾವೇ ಭ್ರಷ್ಟಾಚಾರ ಮಾಡಿ ಬೇರೆಯವರ ಬಗ್ಗೆ ಮಾತನಾಡುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆದರು. ಆದರೆ, ಈ ಬಾರಿ ಐದು ವರ್ಷ ಸಿಎಂ ಮಾಡಲು ಜನರೇ ನಿರ್ಧರಿಸಿದ್ದಾರೆ. ಜನರು, ರಾಜ್ಯವನ್ನು ಉಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಜೆಡಿಎಸ್‌ನ ಪಂಚರತ್ನ ಕಾರ್ಯಕ್ರಮ ರಾಜ್ಯಕ್ಕೆ ಆಸ್ತಿಯಾದರೆ, ಕಾಂಗ್ರೆಸ್‌ ಯೋಜನೆ ರಾಜ್ಯವನ್ನೇ ಧೂಳಿ ಪಟ ಮಾಡುತ್ತದೆ. ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿವೆ. ಹೀಗಾಗಿ, ರಾಜ್ಯದ ಅಭಿವೃದ್ಧಿಗೆ ಮತದಾರರು ಜೆಡಿಎಸ್‌ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ವಿಧಾನಪರಿಷತ್ತು ಸದಸ್ಯ ಸಿ.ಎನ್‌. ಮಂಜೇಗೌಡ, ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್‌, ಜೆಡಿಎಸ್‌ ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ, ಮುಖಂಡರಾದ ಎಚ್‌.ಕೆ. ರಾಮು, ಕೆಂಪಣ್ಣ, ಚೆನ್ನಪ್ಪ, ಆರ್‌. ಲಿಂಗಪ್ಪ, ಭಾಗ್ಯವತಿ, ಸತ್ಯಪ್ಪ, ಗಂಗಾಧರಗೌಡ, ಸಿದ್ದಪ್ಪ, ಶ್ರೀನಿವಾಸ್‌, ಶಾರದಮ್ಮ, ಸಂತೋಷ್‌, ವಿರೂಪಾಕ್ಷಪ್ಪ ಮೊದಲಾದವರು ಇದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

ಉತ್ತಮ ಆಡಳಿತ, ಅಭಿವೃದ್ಧಿಯೇ ಬಿಜೆಪಿ ಧ್ಯೇಯ: ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌

ನನಗೆ ಆರೋಗ್ಯಕ್ಕಿಂತ ಅಭ್ಯರ್ಥಿಗಳ ಗೆಲುವು ಮುಖ್ಯ. ಹೀಗಾಗಿ ಜಿ.ಟಿ. ದೇವೇಗೌಡ ಅವರು ವಿಶ್ರಾಂತಿ ಪಡೆಯಲು ತಿಳಿಸಿದರೂ ಸಭೆ ನಡೆಸಿದ್ದೇನೆ. ಜಿಲ್ಲೆಯಲ್ಲಿ 7- 8 ಸ್ಥಾನಗಳಲ್ಲಿ ಗೆಲ್ಲಬೇಕಿದ್ದು, ಮುಂದಿನ ವಾರ ಮೈಸೂರಿನಲ್ಲಿ ಎರಡು ದಿನ ವಾಸ್ತವ್ಯ ಹೂಡಿ ಪ್ರಚಾರ ನಡೆಸುತ್ತೇನೆ.
- ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Follow Us:
Download App:
  • android
  • ios