ರಾಜ್ಯದಲ್ಲೂ ಗುಜರಾತ್‌ ಮಾದರಿ ಸಚಿವ ಸಂಪುಟ ರಚಿಸಬೇಕೆಂಬ ಹೊನ್ನಾಳಿ ಶಾಸಕರ ಆಗ್ರಹ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲ

ದಾವಣಗೆರೆ (ಸೆ.20): ರಾಜ್ಯದಲ್ಲೂ ಗುಜರಾತ್‌ ಮಾದರಿ ಸಚಿವ ಸಂಪುಟ ರಚಿಸಬೇಕೆಂಬ ಹೊನ್ನಾಳಿ ಶಾಸಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲ ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಭಾನುವಾರ ಬಿಜೆಪಿ ಕಾರ್ಯಕಾರಿಣಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೂ ಗುಜರಾತ್‌ ಮಾದರಿ ಸಂಪುಟ ರಚನೆಯಾದರೆ ಒಳ್ಳೆಯದೇ. ಈ ನಿಟ್ಟಿನಲ್ಲಿ ರೇಣುಕಾಚಾರ್ಯ ತಮ್ಮ ಅನಿಸಿಕೆ ತೋಡಿಕೊಂಡಿದ್ದು, ರೇಣುಕಾಚಾರ್ಯರ ಹೇಳಿಕೆಯಲ್ಲಿ ದುರುದ್ದೇಶವಿಲ್ಲ ಎಂದರು. ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ವಿಜಯ್‌ ರೂಪಾನಿ ಅವರು ರಾಜೀನಾಮೆ ನೀಡಿ ಭೂಪೇಂದ್ರ ಪಟೇಲ್‌ ಅವರ ಮುಖ್ಯಮಂತ್ರಿ ಪಟ್ಟವನ್ನೇರಿದ್ದರು. ಸಚಿವ ಸಂಪುಟದಲ್ಲೂ ವ್ಯಾಪಕ ಬದಲಾವಣೆಗಳಾಗಿದ್ದವು.

ಅಪ್ಪನ ಅಖಾಡವೋ, ಹೊಸ ರಣರಂಗವೋ..? ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ರಣತಂತ್ರ..!

ಇದೇ ವೇಳೆ ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು ದೇವಸ್ಥಾನಗಳ ಹೆಸರಿನಲ್ಲಿ ಕಾಂಗ್ರೆಸ್ಸಿನವರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ವಿಪಕ್ಷ ಕಾಂಗ್ರೆಸ್ಸಿಗರಿಗೆ ಈಗ ಹಿಂದುಗಳ ಮೇಲೆ ಪ್ರೀತಿ ಉಕ್ಕಿ ಬರುತ್ತಿರುವಂತಿದೆ. ಮೈಸೂರು ಜಿಲ್ಲೆಯ ಅಧಿಕಾರಿಗಳು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ತೆರವು ಕಾರ್ಯ ಕೈಗೊಳ್ಳಬೇಕಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಇಡೀ ದೇಶದ ಪ್ರತಿಯೊಬ್ಬರೂ ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು. ಆದರೆ, ಕಾಂಗ್ರೆಸ್ಸಿಗರು ನಿರುದ್ಯೋಗ ದಿನಾಚರಣೆ ಆಚರಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮಾತ್ರ ನಿರುದ್ಯೋಗಿಗಳಿದ್ದಾರೆ. ಮುಂಬರುವ ಎಲಾ ಚುನಾವಣೆಗಳಲ್ಲೂ ಕಾಂಗ್ರೆಸ್‌ ಹೇಳ ಹೆಸರೂ ಇಲ್ಲದಂತೆ ಹೋಗುತ್ತದೆ ಎಂದು ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.