ಬಿಜೆಪಿ ಬಗ್ಗೆ ಜನರು ಬೇಸತ್ತಿದ್ದಾರೆ: ರಾಮಲಿಂಗಾ ರೆಡ್ಡಿ
ಹಿಂದೆ ಬೆಲೆ ಏರಿಕೆ ನಿಯಂತ್ರಿಸುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಕೊಟ್ಟಯಾವ ಭರವಸೆಯನ್ನೂ ಈಡೇರಿಸಿಲ್ಲ. ಯಾವೊಂದು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿಲ್ಲ, ಜನರ ಕಾರ್ಯಕ್ರಮಗಳು ಅವರಿಗೆ ಬೇಕಾಗಿಯೇ ಇಲ್ಲ. ಜನರಿಗೆ ಸುಳ್ಳು ಹೇಳಿಕೊಂಡು ನಿರಂತರ ಮೋಸ ಮಾಡಿಕೊಂಡು ಬರುತ್ತಿರುವ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದ ರಾಮಲಿಂಗಾ ರೆಡ್ಡಿ.
ಬೆಂಗಳೂರು(ಏ.29): ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಅವೈಜ್ಞಾನಿಕ ಜಿಎಸ್ಟಿ ಪದ್ಧತಿ ಜಾರಿಯಿಂದ ಜನರ ಜೀವನವನ್ನೇ ದುಸ್ತರಗೊಳಿಸಿರುವ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಮಲಿಂಗಾ ರೆಡ್ಡಿ ಹೇಳಿದರು.
ಕ್ಷೇತ್ರದ ಲಕ್ಕಸಂದ್ರದಲ್ಲಿ ಶುಕ್ರವಾರ ಪಕ್ಷದ ಮುಖಂಡರು ಹಾಗೂ ಮಾಜಿ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸತತ 7 ಬಾರಿ ಗೆಲುವು ಸಾಧಿಸಲು ಕ್ಷೇತ್ರದ ಜನ ನನಗೆ ಆಶೀರ್ವದಿಸಿದ್ದಾರೆ. ಈ ಬಾರಿಯೂ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನ ಬೆಂಬಲಿಸಲಿದ್ದಾರೆ ಎಂದು ಸಂಪೂರ್ಣ ವಿಶ್ವಾಸವಿದೆ. ಹಿಂದೆ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ, ಕೃಷಿಭಾಗ್ಯ ಹೀಗೆ ಅನೇಕ ಜನರಪರವಾದ ಕಾರ್ಯಕ್ರಮಗಳನ್ನು ನೀಡಿದೆ. ಬಿಜೆಪಿಯವರು ಅಧಿಕಾರ ಹಿಡಿದ ಮೇಲೆ ಬಡವರು, ಕಾರ್ಮಿಕರು ಕೇವಲ ಐದು ಹತ್ತು ರು.ಗಳಲ್ಲಿ ಮೂರು ಹೊತ್ತು ಊಟ ಮಾಡಲು ಸಹಕಾರಿಯಾಗಿದ್ದ ಇಂದಿರಾ ಕ್ಯಾಂಟೀನ್ಅನ್ನು ಮುಚ್ಚಿದ್ದಾರೆ. ಇಂತಹವರನ್ನು ಜನ ಕ್ಷಮಿಸುವುದಿಲ್ಲ ಎಂದರು.
ಹಿಂಬಾಗಿಲಿನಿಂದ ಬಂದ ಅನೈತಿಕ ಸರ್ಕಾರ ರಾಜ್ಯದಲ್ಲಿದೆ: ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ
ಹಿಂದೆ ಬೆಲೆ ಏರಿಕೆ ನಿಯಂತ್ರಿಸುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಕೊಟ್ಟಯಾವ ಭರವಸೆಯನ್ನೂ ಈಡೇರಿಸಿಲ್ಲ. ಯಾವೊಂದು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿಲ್ಲ, ಜನರ ಕಾರ್ಯಕ್ರಮಗಳು ಅವರಿಗೆ ಬೇಕಾಗಿಯೇ ಇಲ್ಲ. ಜನರಿಗೆ ಸುಳ್ಳು ಹೇಳಿಕೊಂಡು ನಿರಂತರ ಮೋಸ ಮಾಡಿಕೊಂಡು ಬರುತ್ತಿರುವ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ವೇಳೆ ಬಿಬಿಎಂಪಿಯ ಮಾಜಿ ಸದಸ್ಯರಾದ ಮುರುಗೇಶ್ ಮೊದಲಿಯಾರ್, ಅಡುಗೋಡಿ ಬಿ.ಮೋಹನ್, ಹರೀಶ್ ಬಾಬು, ಮುನಿರಾಜು, ಮಂಜುಳಾ ಸಂಪತ್, ಮುಖಂಡರಾದ ಪ್ಯಾಟ್ರಿಕ್ ರಾಜು, ಹೇಮಂತ್ ಕುಮಾರ್ ಮತ್ತಿತರರು ಹಾಜರಿದ್ದರು.