ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ‌ಬಿಜೆಪಿ ನಾಯಕರೊಬ್ಬರು ಭವಿಷ್ಯ ನುಡಿದಿದ್ದಾರೆ.  ಇದುವರೆಗೆ ನಾನು ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲಎಂದಿದ್ದಾರೆ. 

ಹಾಸನ, (ಸೆ.28): ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮುಂದಿನ ಅವಧಿಗೂ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಅಷ್ಟೇ ಸತ್ಯ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಗೌಡ ಸ್ಪಷ್ಟಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ನಗರದಲ್ಲಿ ಇಂದು (ಶುಕ್ರವಾರ) ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಯಕತ್ವ ಬದಲಾವಣೆ ವಿಷಯದಲ್ಲಿ ಬಿಜೆಪಿಯ 120ಕ್ಕೂ ಹೆಚ್ಚು ಶಾಸಕರು ಸಮ್ಮತಿಸಿಲ್ಲ, ಮುಂದಿನ ಎರಡುವರೆ ವರ್ಷವೂ ಸಹ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ. ಅಲ್ಲದೆ ಮುಂದಿನ ಚುನಾವಣೆಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷ ಹೋರಾಟ ನಡೆಸಲಿದೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

ರಾಜಾಹುಲಿಗೆ ರಾಜಾಹುಲಿಯೇ ಸಾಟಿ; ಕರ್ನಾಟಕದಲ್ಲಿ ಬಿಎಸ್‌ವೈಗೆ ಇಲ್ಲ ಪೈಪೋಟಿ..! 

ಇದುವರೆಗೆ ನಾನು ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ ಇಂದು ಸಹ ಹೇಳುತ್ತಿದ್ದೇನೆ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬದಲಾವಣೆ ಇಲ್ಲ ಎಂದು ಪುನರುಚ್ಚರಿಸಿದರು. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಮಾಧ್ಯಮಗಳು ಮಾತ್ರ ಸೃಷ್ಟಿಸುತ್ತಿರುವ ಗೊಂದಲವಾಗಿದೆ ಮಾಧ್ಯಮದಿಂದಲೇ ಹುಟ್ಟಿರುವ ಈ ವದಂತಿ ಮುಂದಿನ ದಿನಗಳಲ್ಲಿ ರಾಜ್ಯ ಜನತೆಗೆ ಸ್ಪಷ್ಟವಾಗಲಿದೆ ಎಂದರು.

ಸಿಎಂ ಯಡಿಯೂರಪ್ಪ ಅವರು ದೆಹಲಿ ಪ್ರವಾಸಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ರಾಜ್ಯದ ಆರ್ಥಿಕತೆ ದೃಷ್ಟಿಯಿಂದ ಕೇಂದ್ರ ಸಚಿವರಾದ ನಿರ್ಮಲಾ ಸೇತುರಾಮ್ ಸೇರಿದಂತೆ ಇತರೆ ಸಚಿವರನ್ನು ಭೇಟಿ ಮಾಡಿ ಸಾಲ ಪಡೆಯಲು ಹಾಗೂ ರಾಜ್ಯ ಆರ್ಥಿಕತೆ ಉತ್ತೇಜನಕ್ಕೆ ಕ್ರಮವಹಿಸಲು ದೆಹಲಿ ಪ್ರಯಾಣ ಬಳಸಿದ್ದಾರೆ ಅಷ್ಟೇ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಷಯವಾಗಿ ರಾಜ್ಯದ ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತೀರ್ಮಾನದಂತೆ ರಚನೆಯಾಗಲಿದೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದ ಅವರು ಸಂಪುಟ ರಚನೆ ಅಥವಾ ಪುನರ್ರಚನೆ ವಿಚಾರವಾಗಿ ಸಿಎಂ ಅವರೇ ಸ್ಪಷ್ಟೀಕರಣ ನೀಡಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.