*  ಎಲ್ಲ ನಾಯಕರ ಜೊತೆಗೆ ಒನ್‌ ಟು ಒನ್‌ ಮಾತನಾಡಿದ್ದೇನೆ*  ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಇಲ್ಲಿ ಕೆಲಸ ಮಾಡಬೇಕು*  ಇಲ್ಲಿನ ನಾಯಕರ ಜೊತೆಗೆ ಚರ್ಚೆ ಮಾಡಿ ಭಿನ್ನಮತ ಶಮನ ಮಾಡುತ್ತೇವೆ 

ಬೆಳಗಾವಿ(ಏ.13): ಬೆಳಗಾವಿ ಬಿಜೆಪಿ ಜಿಲ್ಲಾ ನಾಯ​ಕರ ಮಧ್ಯೆ ಭಿನ್ನಮತ ಇರುವುದು ನಿಜ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತ​ನಾಡಿ, ಎಲ್ಲ ನಾಯಕರ ಜೊತೆಗೆ ಒನ್‌ ಟು ಒನ್‌ ಮಾತನಾಡಿದ್ದೇನೆ. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಇಲ್ಲಿ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಪಕ್ಷದ ಒಳಿತಿಗಾಗಿ ಕೆಲಸ ಮಾಡುವಂತೆ ಎಲ್ಲರಿಗೂ ಮನವರಿಕೆ ಮಾಡಲಾಗಿದೆ ಎಂದರು. 

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Karnataka Assembly Election) ಜಿಲ್ಲೆಯ 18 ಕ್ಷೇತ್ರಗಳಲ್ಲಿ ನಾವು ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸಲಹೆ ನೀಡಲಾಗಿದೆ. ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ(Govind Karjol) ಅವರು ತಿಂಗಳಿಗೊಮ್ಮೆ ಇಲ್ಲಿಗೆ ಬರುತ್ತೇವೆ. ಇಲ್ಲಿನ ನಾಯಕರ ಜೊತೆಗೆ ಚರ್ಚೆ ಮಾಡಿ ಭಿನ್ನಮತ ಶಮನ ಮಾಡುತ್ತೇವೆ ಎಂದು ಹೇಳಿದರು.

Karnataka Politics: ನನ್ನ ಮೌನದಿಂದ ಸಿದ್ದು, ಎಚ್‌ಡಿಕೆಗೆ ತೊಂದರೆ: ಬೊಮ್ಮಾಯಿ

ಕರ್ನಾಟಕ ಕಾಂಗ್ರೆಸ್‌ನ ಎಟಿಎಂ ಆಗಲು ಬಿಡಲ್ಲ

ಕರ್ನಾಟಕವನ್ನು(Karnataka) ಕಾಂಗ್ರೆಸ್‌ನ(Congress) ಎಟಿಎಂ ಮಾಡಲು ಬಿಡುವುದಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್‌(Arun Singh) ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಇಡೀ ದೇಶದಲ್ಲಿ ನೆಲ ಕಚ್ಚುತ್ತಿದ್ದು, ಸಂಪೂರ್ಣ ನಿರ್ನಾಮಗೊಂಡಿದೆ. ಕರ್ನಾಟಕದಲ್ಲಿ ಗೆಲ್ಲುವ ಮೂಲಕ ಇಡೀ ದೇಶವನ್ನು ನಡೆಸಲು ಕಾಂಗ್ರೆಸ್‌ ಯೋಜನೆ ಹಾಕಿಕೊಂಡಿದೆ. ಆದರೆ, ನಾವು ಕಾಂಗ್ರೆಸ್‌ ಗೆಲ್ಲಲು ಬಿಡುವುದಿಲ್ಲ ಎಂದರು.

ಪಂಚರಾಜ್ಯ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿಯೂ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ದೇಶದ ಜನತೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಜನಪ್ರಿಯತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಿದೆ. ಬಡವರು, ರೈತರು(Farmers), ಕಾರ್ಮಿಕರಿಗಾಗಿ ಪ್ರಧಾನಿ ಮೋದಿ ಒಳ್ಳೆಯ ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಎದುರಿಸಲಾಗುವುದು. ಯಡಿಯೂರಪ್ಪ ಮಾರ್ಗದರ್ಶದಲ್ಲಿ ಬೊಮ್ಮಾಯಿ ಸರ್ಕಾರ ಒಳ್ಳೆಯ ಆಡಳಿತ ನಡೆಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದರು.

ಕಾಂಗ್ರೆಸ್‌ ಪಕ್ಷಕ್ಕೆ ನಾಯಕತ್ವದ ಕೊರತೆ ಇದೆ. ಕಾಂಗ್ರೆಸ್‌ನ ಸದ್ಯದ ರಾಹುಲ್‌ ಗಾಂಧಿ ನೇತೃತ್ವ ಅವರ ಕಾರ್ಯಕರ್ತರಿಗೆ ಸ್ಫೂರ್ತಿದಾಯಕವಾಗಿಲ್ಲ. ಕರ್ನಾಟಕದಲ್ಲೂ ಕಾಂಗ್ರೆಸ್‌ ನೇತೃತ್ವವೂ ಸರಿಯಾಗಿಲ್ಲ. ಕರ್ನಾಟಕ ಕಾಂಗ್ರೆಸ್‌ ಒಡೆದ ಮನೆಯಂತಾಗಿದೆ. ಕಾಂಗ್ರೆಸ್‌ ನಾಯಕತ್ವ ವಿಫಲವಾಗಿದೆ. ಬಿಜೆಪಿ ವಿರುದ್ಧ ಮಾತನಾಡಲು ಅವರ ಬಳಿ ಯಾವ ವಿಷಯವೂ ಇಲ್ಲ. ಕರ್ನಾಟಕದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಳ್ಳೆಯ ಅಭಿವೃದ್ಧಿ ಯೋಜನೆ ಜಾರಿಗೆ ತರುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಮಹದಾಯಿ(Mahadayi) ನೀರಾವರಿ ಯೋಜನೆ ಅನುಷ್ಠಾನದ ಕುರಿತು ಕೇಳಿದ ಪ್ರಶ್ನೆಗೆ ತಡವರಿಸಿದ ಅರುಣ ಸಿಂಗ್‌, ಮಹದಾಯಿ ಎಂದರೇನು? ಎಂದು ಮರು ಪ್ರಶ್ನಿಸಿದರು. ತಮ್ಮ ಪಕ್ಕದಲ್ಲೇ ಕುಳಿತಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಂದ ಮಾಹಿತಿ ಪಡೆದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿವಾದ ಸೇರಿ ಅಂತಾರಾಜ್ಯ ಜಲವಿವಾದಗಳನ್ನು ಹಂತಹಂತವಾಗಿ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು.

ಬಿಎಸ್‌ವೈ ಬಿಜೆಪಿ ಸರ್ವೋಚ್ಚ ನಾಯಕ:

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕರ್ನಾಟಕ ಬಿಜೆಪಿ ಸರ್ವೋಚ್ಚ ನಾಯಕರಾಗಿದ್ದು, ಅವರ ಮಾರ್ಗದರ್ಶನದಲ್ಲೇ ಕೆಲಸ ಮಾಡುತ್ತಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಯಡಿಯೂರಪ್ಪ ಮಾರ್ಗದರ್ಶನ ಸಿಗುತ್ತಿದೆ. ಅದರ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ ಧರ್ಮ, ಜಾತಿ ಜಾತಿಗಳ ನಡುವೆ ವಿಭಜನೆಗೆ ಯತ್ನಿಸುತ್ತಿದೆ. ಜಾತಿಗಳನ್ನು ಒಡೆಯುತ್ತಿದೆ. ಹಿಜಾಬ್‌ ವಿವಾದ ಕಾಂಗ್ರೆಸ್‌ ಪಕ್ಷದ ಬೆಂಬಲದಿಂದಲೇ ಆಗಿದೆ ಎಂದು ದೂರಿದ ಅವರು, ಎಸ್‌ಡಿಪಿಐ, ಪಿಎಫ್‌ಐಗೆ ಹಿಂಬದಿಯ ಬೆಂಬಲವನ್ನೂ ಕಾಂಗ್ರೆಸ್‌ ಪಕ್ಷ ನೀಡುತ್ತ ಬಂದಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಪಿಎಫ್‌ಐಗೆ ಬೆಂಬಲ ನೀಡಿದ್ದರು. ಈಗ ವಿಪಕ್ಷದಲ್ಲಿದ್ದರೂ ಪಿಎಫ್‌ಐಗೆ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್‌ನವರು ಜಾತಿ ಜಾತಿಗಳನ್ನು ಒಡೆಯುವುದನ್ನೇ ಮಾಡಿದ್ದಾರೆ. ರಾಜಸ್ಥಾನದಲ್ಲಿಯೂ ಇದನ್ನೇ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದು ಹೇಳಿದಂತೆ ಕಿತ್ತೆಸೆಯಲು ಬಿಜೆಪಿಯೇನು ಕೊತ್ತಂಬರಿಸೊಪ್ಪಾ?: ಶ್ರೀರಾಮುಲು

ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಎಂ.ಬಿ.ಜಿರಲಿ, ಡಾ.ಪ್ರಭಾಕರ ಕೋರೆ, ಮಹೇಶ ಟೆಂಗಿನಕಾಯಿ, ಕೆ.ಎಸ್‌.ನವೀನಕುಮಾರ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ವಿರುದ್ಧ ಶೇ 40 ಕಮೀಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಗುತ್ತಿಗೆದಾರ ಸಂತೋಷ ಪಾಟೀಲ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಸರ್ಕಾರದಲ್ಲಿ ಯಾವ ಸಚಿವರೂ ಭ್ರಷ್ಟರಾಗಿಲ್ಲ ಅಂತ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್‌ ತಿಳಿಸಿದ್ದಾರೆ.