ಸಣ್ಣ ಕಾರು ಹೊಂದಿರುವವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸುವ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ. 

ಹಾಸನ (ಆ.27): ಸಣ್ಣ ಕಾರು ಹೊಂದಿರುವವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸುವ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಪಿಎಲ್‌ ಕಾರ್ಡ್‌ ಹೊಂದಿರುವವರಲ್ಲೂ ಕೆಲವರು ಸಣ್ಣ ಕಾರು ಇಟ್ಟುಕೊಂಡಿರುತ್ತಾರೆ. ಇದು ನಮ್ಮ ಗಮನಕ್ಕೂ ಬಂದಿದೆ. ಕಾರು ಇಟ್ಟುಕೊಂಡವರ ಕುಟುಂಬದ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಬೇಕೇ, ಬೇಡವೇ ಎಂಬ ಕುರಿತು ಚರ್ಚೆ ನಡೆಯುತ್ತಿದೆಯಷ್ಟೆ. ಸದ್ಯಕ್ಕೆ ಕಾರು ಇಲ್ಲದವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲ್ಲ. 

ಕಾರು ಇದ್ದೂ ಅರ್ಹತೆ ಇದ್ದಗೆ ಬಿಪಿಎಲ್‌ ಕಾರ್ಡ್‌ ನೀಡುವ ಕುರಿತು ಪರಿಶೀಲಿಸಲಾಗುವುದು. ಈವರೆಗೆ ನಾವು ಯಾರ ಬಿಪಿಎಲ್‌ ಕಾರ್ಡ್‌ ಅನ್ನೂ ರದ್ದು ಮಾಡಿಲ್ಲ. ಕೆಲವರ ಕಾರ್ಡ್‌ ರದ್ದು ಮಾಡಬೇಕೆಂಬುದು ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವಷ್ಟೆಎಂದು ಸ್ಪಷ್ಟಪಡಿಸಿದರು. ಯಾರು ಬಿಪಿಎಲ್‌, ಯಾರು ಎಪಿಎಲ್‌ ಅಡಿ ಬರುತ್ತಾರೆ ಎಂಬುದನ್ನು ನೋಡಿಕೊಂಡು ಅವರಿಗೆ ಸೂಕ್ತ ಕಾರ್ಡ್‌ ನೀಡಲಾಗುವುದು. ಪರಿಷ್ಕರಣೆ ನಂತರವಷ್ಟೇ ನಾವು ಸ್ಪಷ್ಟತೀರ್ಮಾನಕ್ಕೆ ಬರುತ್ತೇವೆ. ಯಾರಿಗೆ ಅರ್ಹತೆ ಇದೆಯೋ ಅವರಿಗೆ ತೊಂದರೆ ಆಗಲ್ಲ. ಸದ್ಯಕ್ಕೆ ಯಾವುದೇ ಕಾರ್ಡ್‌ ರದ್ದು ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.

ಮೋದಿ ಕಾರ್ಯಕ್ರಮಕ್ಕೆ ಜನರ ಕಳಿಸಿದೆ, ನನ್ನನ್ನೇ ಕರೆಯಲಿಲ್ಲ: ಎಸ್‌.ಟಿ.ಸೋಮಶೇಖರ್‌

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕಾರ್ಡ್‌ ಅರ್ಜಿ ವಿಲೇವಾರಿ ಬಾಕಿ ಇದೆ. ಈಗಾಗಲೇ ಅರ್ಜಿ ಹಾಕಿರುವವರಲ್ಲಿ ಅರ್ಹರಿಗೆ ಬಿಪಿಎಲ್‌ ಕಾರ್ಡ್‌ ನೀಡುತ್ತೇವೆ ಎಂದು ತಿಳಿಸಿದರು. ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ ಕೊಡುತ್ತೇವೆ ಎಂದು ನಾವು ಹೇಳಿದ್ದೇವೆ. ಅಕ್ಕಿಗಾಗಿ ಆಂಧ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಹೋಗಿ ಬಂದಿದ್ದೇನೆ. ಅಕ್ಕಿಯ ದರದ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ನಾವು ಕೊಟ್ಟಭರವಸೆ ಈಡೇರಿಸುತ್ತೇವೆ ಎಂದರು.

ಸದ್ಯಕ್ಕೆ ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಇಲ್ಲ: ಹೊಸದಾಗಿ ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ಅರ್ಜಿ ಸಲ್ಲಿಕೆ ಸರ್ಕಾರ ಅವಕಾಶ ನೀಡಿಲ್ಲ. ಮುಂದಿನ ದಿನದಲ್ಲಿ ಯಾವ ಕಾರಣಕ್ಕಾಗಿ ಹೊಸದಾಗಿ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿಲ್ಲ ಎಂಬುದನ್ನು ತಿಳಿಸಲಾಗುವುದು. ಸದ್ಯಕ್ಕಂತೂ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಮುಂದಿನ ತಿಂಗಳು ಕೂಡ ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ ನಗದು ಹಣ ನೀಡುವುದನ್ನೇ ಮುಂದುವರೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಇಸ್ರೋ ಸಾಧನೆಗೆ ಮೋದಿ ಭಾವುಕ: ನಿಮ್ಮ ದರ್ಶನದಿಂದ ನಾನು ಪಾವನವಾಗಿದ್ದೇನೆ ಎಂದ ಪ್ರಧಾನಿ

ವಿಧಾನಸೌಧದಲ್ಲಿ ಇಲಾಖಾ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹರಿಗೆ ಕಾರ್ಡ್‌ ನೀಡಲು ಸೂಚನೆ ನೀಡಲಾಗಿದೆ. ಅಲ್ಲದೇ, ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದರು. ಸೆಪ್ಟೆಂಬರ್‌ ತಿಂಗಳಿಂದ ಪಡಿತರದಲ್ಲಿ ಐದು ಕೆಜಿ ಅಕ್ಕಿ ನೀಡಲು ನಿರ್ಣಯಿಸಲಾಗಿತ್ತು. ಆದರೆ, ಅಕ್ಕಿ ಲಭ್ಯವಿಲ್ಲದ ಕಾರಣ ಅಕ್ಕಿಯ ಬದಲಿಗೆ ನಗದು ಹಣವನ್ನೇ ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯನ್ನು ನೀಡಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಅಕ್ಕಿ ನೀಡಲು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮುಂದೆ ಬಂದಿವೆ. ದರದ ಬಗ್ಗೆ ಎರಡು ರಾಜ್ಯಗಳ ಅಧಿಕಾರಿಗಳ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ 10 ದಿನದಲ್ಲಿ ಎಲ್ಲವೂ ಅಂತಿಮವಾಗಲಿದೆ. ಆದರೂ ಅಕ್ಕಿ ವಿತರಣೆ ಕುರಿತು ಈಗಲೇ ಸ್ಪಷ್ಟವಾಗಿ ತಿಳಿಸಲಾಗುವುದಿಲ್ಲ ಎಂದು ಹೇಳಿದರು.