ಉಡುಪಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಪ್ರವಾಸದ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದು ಸಂಸದೆಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು! ಇಷ್ಟಕ್ಕೂ ಕಾರ್ಯಕರ್ತರ ಈ ಸೆಲ್ಫಿ ಅಭಿಯಾನಕ್ಕೆ ಕಾರಣವೇನು ಗೊತ್ತಾ?

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರ ಜೊತೆ ಸೆಲ್ಪಿ ತೆಗೆದುಕೊಂಡ 5 ಮಂದಿಗೆ ತಲಾ 5,000 ಬಹುಮಾನ ನೀಡುವುದಾಗಿ ದಕ್ಷಿಣ ಕನ್ಬಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಿಸಿದ್ದರು. ಎರಡು ದಿನಗಳ ಹಿಂದೆ ಉಡುಪಿ (Udupi) ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ (Congress Protest) ವತಿಯಿಂದ ಪ್ರತಿಭಟನೆ ನಡೆದಾಗ ಅವರು ಈ ಘೋಷಣೆ ಮಾಡಿದ್ದರು.

ಉಡುಪಿ ಜಿಲ್ಲೆಯ ಹದಗೆಟ್ಟ ರಸ್ತೆಯ ಸ್ಥಿತಿ ಕುರಿತು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಉಡುಪಿಯಿಂದ ಮಲ್ಪೆಗೆ ಸಾಗುವ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ನಡೆಸಿ ಬಳಿಕ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು. ಈ ಪ್ರತಿಭಟನಾ ಸಭೆಗೆ ಅತಿಥಿಯಾಗಿ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಪ್ರಮುಖ ನಾಯಕ ಮಿಥುನ್ ರೈ(Mithun Rai), ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಅವರನ್ನು ಟೀಕಿಸಿದ್ದರು.

ಹೆಸರು ಬದಲಾಯಿಸಿಕೊಳ್ಳಲು ನನಗೇನು ತಲೆಕೆಟ್ಟಿದೆಯಾ: ಶೋಭಾ ಕರಂದ್ಲಾಜೆ

ಸಂಸದರು ಕ್ಷೇತ್ರದ ಯಾವುದೇ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ್ಲ, ಕ್ಷೇತ್ರದ ಸಮಸ್ಯೆಗಳನ್ನು ನಿರಂತರ ನಿರ್ಲಕ್ಷಿಸಿದ್ದು, ಅವರನ್ನು ಕ್ಷೇತ್ರದೊಳಗೆ ಹುಡುಕುವ ಪರಿಸ್ಥಿತಿ ಇದೆ. ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಕಂಡು ಬಂದರೆ ಅವರ ಜೊತೆ ಸೆಲ್ಫಿ (Selfie) ಕ್ಲಿಕ್ಕಿಸಿ ಕಳಿಸಿಕೊಡಿ, ಸೂಕ್ತ ಬಹುಮಾನ (Reward) ನೀಡಲಾಗುವುದು ಎಂದು ಘೋಷಿಸಿದ್ದರು. 

ಮಿಥುನ್ ರೈಗೆ ಸೆಲ್ಫಿ ತೆಗೆದು ಕಳಿಸುತ್ತಿರುವ ಬಿಜೆಪಿ ಕಾರ್ಯಕರ್ತರು

ಶುಕ್ರವಾರ ಕೇಂದ್ರ ಸಚಿವೆ ಉಡುಪಿ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ಅಭಿವೃದ್ಧಿ (Development) ಚಟುವಟಿಕೆಗಳಿಗೆ ಶಿಲಾನ್ಯಾಸ , ಉದ್ಘಾಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಸಂಸದರು ಹೋದಲ್ಲೆಲ್ಲಾ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ತೆಗೆದ ಫೋಟೋಗಳನ್ನು ಕಾಂಗ್ರೆಸ್ ಮುಖಂಡ ಮಿಥುನ್ ರೈ ಗೆ ವಾಟ್ಸಪ್ (Whatsapp) ಮೂಲಕ ಕಳುಹಿಸಲಾಗುತ್ತಿದೆ.

ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು

ಸೇವಾ ಪಾಕ್ಷಿಕದ ಅಂಗವಾಗಿ ಕಾಪು ಪೇಟೆಯಲ್ಲಿ ಖಾದಿ ಮೇಳವನ್ನು ಉದ್ಘಾಟಿಸಿದ ನಂತರ ಮಹಿಳಾ ಮೋರ್ಚಾ, ಯುವ ಮೋರ್ಚಾ ಕಾರ್ಯಕರ್ತರು ಸಚಿವೆಯೊಂದಿಗೆ ಸೆಲ್ಫಿ ತೆಗೆಯಲು ಮುಗಿ ಬಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ (Veena shetty), ಶೋಭಾ ಜನಪರ ಕೆಲಸ ಮಾಡುತ್ತಿರುವ ಸರಳ ಸಂಸದೆ, ಸಚಿವರ ಜೊತೆ ಸೆಲ್ಫಿ ತೆಗೆದರೇ ಬಹುಮಾನ ನೀಡುವುದಾಗಿ ಕಾಂಗ್ರೆಸಿನ ಮಿಥುನ್ ರೈ ಹೇಳಿದ್ದಾರೆ. ಹೀಗಾಗಿ ಶೋಭಾಕ್ಕನವರ ಜೊತೆ ಮಹಿಳಾ ಮೋರ್ಚಾದ ತಂಡ ಸೆಲ್ಫಿ ತೆಗೆದು ಮಿಥುನ್ ರೈ ಅವರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದರು.

ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮಿಥುನ್ ರೈ ಚಿಲ್ಲರೆ ಮನುಷ್ಯ

ಸೆಲ್ಫಿ ತೆಗೆದವರಿಗೆ ಬಹುಮಾನ ಘೋಷಿಸಿದ್ದ ಕಾಂಗ್ರೆಸ್ ನಾಯಕ ಮಿಥುನ್ ರೈ ಗೆ ತಿರುಗೇಟು ನೀಡಿದ ಶೋಭಾ, ಬರಲಿ ಎಲ್ಲರೂ ಸೆಲ್ಫಿ ತೆಗೆಯಲು ಬರಲಿ, ಅವನು ಮಿಥುನ್ ರೈ ಫಸ್ಟ್ ಬರಲಿ ಎಂದು ವ್ಯಂಗ್ಯವಾಡಿದ್ದಾರೆ. ಈ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅವನನ್ನು ಯಾಕೆ ದೊಡ್ಡ ಮನುಷ್ಯ ಮಾಡಬೇಕು. ಅವನು ಚಿಲ್ಲರೆ ಮನುಷ್ಯ ಎಂದು ಕಿಡಿಕಾರಿದರು. ಅಂದ ಹಾಗೆ ಮಿಥುನ್ ರೈ ಈ ಆಟಕ್ಕೊಂದು ನಿಯಮ ಹೇಳಿದ್ದರು. ಆ ಪ್ರಕಾರ ಅ.7 ರಿಂದ 14 ತಾರೀಖಿನ ಒಳಗೆ ಮಾತ್ರ ಸೆಲ್ಫಿ ಕಳುಹಿಸಬೇಕು ಎಂದಿದ್ದರು. ಆದರೆ ಸಚಿವರು ಕ್ಷೇತ್ರದಲ್ಲಿ ಇಲ್ಲದ ದಿನ ನೋಡಿಯೇ ಮಿಥುನ್ ರೈ ದಿನಾಂಕ ಘೋಷಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ.