ಗುಜರಾತ್‌ ಫಲಿತಾಂಶದಿಂದ ಬೇರೆ ರಾಜ್ಯಗಳ ಮೇಲೆ ಯಾವುದೇ ಪರಿಣಾಮವಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ: ಕಿಮ್ಮನೆ ರತ್ನಾಕರ 

ತೀರ್ಥಹಳ್ಳಿ(ಡಿ.09): ಹಣ ಬಲದ ಜೊತೆಗೆ ಸರ್ಕಾರಿ ಯಂತ್ರವನ್ನು ಬಳಸಿಕೊಳ್ಳುವ ಮೂಲಕ ಗುಜರಾತ್‌ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಮತಯಂತ್ರವನ್ನು ದುರ್ಬಳಕೆ ಮಾಡಿಕೊಂಡಿರುವ ಸಾದ್ಯತೆಯೂ ಇದೆ. ಹೀಗಾಗಿ ಈ ಫಲಿತಾಂಶದಿಂದ ಬೇರೆ ರಾಜ್ಯಗಳ ಮೇಲೆ ಯಾವುದೇ ಪರಿಣಾಮವಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ ಎಂದು ಕಾಂಗ್ರೆಸ್‌ ವಕ್ತಾರರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಗುಜರಾತಿನಲ್ಲಿ ರಾಜಕೀಯ ಬದಲಾವಣೆ ತರುವುದಲ್ಲದೇ ಅಧಿಕಾರ ಹಿಡಿಯುತ್ತೇವೆಂಬ ಭ್ರಮೆಯಲ್ಲಿದ್ದ ಆಮ್‌ ಆದ್ಮಿ ಪಕ್ಷದ ಸ್ಫರ್ಧೆ ಬಿಜೆಪಿಗೆ ಪೂರಕವಾಗಿ ಪರಿಣಮಿಸಿದೆ. ಚುನಾವಣೆಯನ್ನು ಗೆಲ್ಲಲು ಯಾವ ತಂತ್ರಗಾರಿಕೆಯನ್ನು ಬಳಸುವ ಬಿಜೆಪಿ ಬೆಂಗಳೂರಿನಲ್ಲಿರುವ ನಡೆಸಿರುವ ತಂತ್ರಗಾರಿಕೆಯನ್ನು ಗುಜರಾತಿನಲ್ಲಿ ಮಾಡಿರುವ ಸಾಧ್ಯತೆಯೂ ಇದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಬಹುಮತ ಗಳಿಸಿದೆಯಾದರೂ ಅಧಿಕಾರದ ಲಾಲಸೆ ಇರುವ ಬಿಜೆಪಿ ಶಾಸಕರನ್ನು ಖರೀದಿಸುವ ಆತಂಕವೂ ಇದೆ ಎಂದಿದ್ದಾರೆ.

ಕಾಂಗ್ರೆಸ್‌ ಬಲಪಡಿಸಲು ಬಿಜೆಪಿ ತೊರೆದು 'ಕೈ' ಸೇರ್ಪಡೆ..!

ಎಎಪಿಯಿಂದಾಗಿ ಕಾಂಗ್ರೆಸ್‌ಗೆ ಹಿನ್ನಡೆ: ಆರ್‌ಎಂಎಂ

ತೀರ್ಥಹಳ್ಳಿ: ಗುಜರಾತ್‌ ವಿಧಾನಸಭಾ ಚುನವಣೆಯಲ್ಲಿ ಬಿಜೆಪಿ ದಾಖಲೆಯ ಸ್ಥಾನಗಳನ್ನು ಗಳಿಸಿದೆಯಾದರೂ 2018ರ ಚುನಾವಣೆಗಿಂತ ಶೇ.6 ಮತ ಕಡಿಮೆಯಾಗಿದೆ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್‌.ಎಂ. ಮಂಜುನಾಥ ಗೌಡ ಹೇಳಿದರು.

ಸಂಖ್ಯೆ ದೃಷ್ಟಿಯಿಂದ ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳೇನೊ ಬಂದಿವೆ. ಇದಕ್ಕೆ ಆಮ್‌ಆದ್ಮಿ ಪಕ್ಷದ ಸ್ಪರ್ಧೆಯಿಂದಾಗಿ ಮತಗಳು ಹಂಚಿಕೆಯಾಗಿರುವುದು ಬಹುತೇಕ ಕಾರಣವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್‌ಗೂ ಹಿನ್ನಡೆಯಾಗಿದೆ. ಕಾಂಗ್ರೆಸ್‌ಗೆ ಒಲವು ಇದ್ದ ಸೌರಾಷ್ಟ್ರ ಭಾಗದಲ್ಲಿ ಆಮ್‌ ಆದ್ಮಿ ಪಕ್ಷ ಸಾಕಷ್ಟುಮತಗಳನ್ನು ಸೆಳೆದ ಪರಿಣಾಮವಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಮುಂಬರುವ ರಾಜ್ಯ ಚುನಾವಣೆಯ ಮೇಲೆ ಈ ಫಲಿತಾಂಶದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.