ವಂದೇ ಮಾತರಂ ಹಾಡುವುದು ಬೇಡ ಎಂದ ಸಿದ್ದು: ಬಿಜೆಪಿ ಕಿಡಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೌದ್ಧಿಕ ದಾರಿದ್ರ್ಯದಿಂದ ರಾಜಕೀಯ ಸನ್ಯಾಸತ್ವದ ಅಂಚಿನಲ್ಲಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ’ ಎಂದು ಕಿಡಿಕಾರಿದ ಬಿಜೆಪಿ
ಬೆಂಗಳೂರು(ನ.27): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ವಂದೇ ಮಾತರಂ’ ಹಾಡುವುದು ಬೇಡ ಎಂದಿದ್ದಾರೆ. ಇದು ಅವರು ಬೌದ್ಧಿಕ ದಾರಿದ್ರ್ಯದಿಂದ ರಾಜಕೀಯ ಸನ್ಯಾಸತ್ವದ ಅಂಚಿನಲ್ಲಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ನಾಡು ಕಟ್ಟಿದ ಕೆಂಪೇಗೌಡ ಬೇಡ ಅಂತಾರೆ, ಟಿಪ್ಪುವನ್ನು ಮೆರೆಸುತ್ತಾರೆ, ಶ್ರೀರಾಮಚಂದ್ರ ಯಾರು ಎಂದು ಪ್ರಶ್ನೆ ಮಾಡ್ತಾರೆ. ಏಯ್ ವಂದೇ ಮಾತರಂ ಹಾಡೋದು ಬೇಡ ಎನ್ನುತ್ತಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೌದ್ಧಿಕ ದಾರಿದ್ರ್ಯದಿಂದ ರಾಜಕೀಯ ಸನ್ಯಾಸತ್ವದ ಅಂಚಿನಲ್ಲಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ’ ಎಂದು ಕಿಡಿಕಾರಿದೆ.
ವಂದೇ ಮಾತರಂ ಹಾಡಲು ಸಿದ್ದರಾಮಯ್ಯ ಹಿಂದೇಟು, ಮತ್ತೊಂದು ವಿವಾದದಲ್ಲಿ ಕಾಂಗ್ರೆಸ್!
ಏನಿದು ವಿವಾದ?:
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಆರಂಭದ ಚರ್ಚೆ ವೇಳೆ ‘ವಂದೇ ಮಾತರಂ ಬೇಡಯ್ಯ’ ಎಂದಿದ್ದು ವಿವಾದಕ್ಕೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಸಲೀಂ ಅಹಮದ್ ನಡುವೆ ಸ್ವಾಗತ ಮಾಡಿ ಬಳಿಕ ‘ಸಂವಿಧಾನ ಓದು’ ಹಮ್ಮಿಕೊಳ್ಳಬೇಕು ಎಂದು ಚರ್ಚೆಯಾಗುತ್ತಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ಸ್ವಾಗತ ಮಾಡಿ ಸಂವಿಧಾನ ಓದು ಮಾಡೋಣ ಎಂದರು. ನಡುವೆ ಒಬ್ಬರು ಹಿಂಬದಿಯಿಂದ ‘ವಂದೇ ಮಾತರಂ ಹಾಡೋಣ’ ಎಂದರು.
ಇದಕ್ಕೆ ಸಿದ್ದರಾಮಯ್ಯ ಅವರು ‘ವಂದೇ ಮಾತರಂ ಬೇಡಯ್ಯ’ ಎಂದರು. ತಕ್ಷಣ ಎಚ್ಚೆತ್ತ ಅವರು, ‘ಹಾಡಂಗಿದ್ದರೆ ಹಾಡಿ ಮತ್ತೆ ಸಿದ್ದರಾಮಯ್ಯ ಬೇಡ’ ಎಂದರು ಎಂದಾಗುತ್ತದೆ. ವಂದೇ ಮಾತರಂ ಹಾಡಿ ಎಂದು ಹೇಳಿದರು. ಬಳಿಕ ವಂದೇ ಮಾತರಂ ಹಾಡಿದಾಗ ಸಿದ್ದರಾಮಯ್ಯ ಎದ್ದು ನಿಂತರು. ಇದನ್ನು ಆಕ್ಷೇಪಿಸಿ ಬಿಜೆಪಿ ಟ್ವೀಟ್ ಮಾಡಿದೆ.