ಕಾಂಗ್ರೆಸ್ ಗ್ಯಾರಂಟಿಗೆ ಸರ್ಕಾರದ ಖಜಾನೆ ಖಾಲಿ: ಆರ್.ಅಶೋಕ್
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದ್ದು, ಯಾವುದೇ ಕಾರ್ಯಕ್ರಮಗಳಿಗೆ ಹಣ ಇಲ್ಲದೇ ಸರ್ಕಾರ ದಿವಾಳಿಯಾಗಿದೆ. ಭೀಕರ ಬರದಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಪರಿಹಾರ ನೀಡುವ ಯೋಗ್ಯತೆಯೂ ಇಲ್ಲದಂತಾಗಿದೆ ಈ ಕಾಂಗ್ರೆಸ್ ಸರ್ಕಾರಕ್ಕೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
![BJP Opposition Leader R Ashok Slams On Congress Govt At Bidar gvd BJP Opposition Leader R Ashok Slams On Congress Govt At Bidar gvd](https://static-ai.asianetnews.com/images/01gffdc4069s042prr7p117bnb/ffg2xmpauaauc2w_363x203xt.jpg)
ಬೀದರ್ (ನ.24): ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದ್ದು, ಯಾವುದೇ ಕಾರ್ಯಕ್ರಮಗಳಿಗೆ ಹಣ ಇಲ್ಲದೇ ಸರ್ಕಾರ ದಿವಾಳಿಯಾಗಿದೆ. ಭೀಕರ ಬರದಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಪರಿಹಾರ ನೀಡುವ ಯೋಗ್ಯತೆಯೂ ಇಲ್ಲದಂತಾಗಿದೆ ಈ ಕಾಂಗ್ರೆಸ್ ಸರ್ಕಾರಕ್ಕೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಅವರು ಬೀದರ್ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ಸಿನದ್ದು ಎಡಬಿಡಂಗಿ ಸರ್ಕಾರ, ಬೆಳೆ ಪರಿಹಾರ ಸೇರಿ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಡಿ.ಕೆ.ಸುರೇಶ್ ಆಯ್ಕೆಯಾಗದಿದ್ದರೆ ಹೇಮಾವತಿ ಮರೀಚಿಕೆ: ಶಾಸಕ ಬಾಲಕೃಷ್ಣ
ಎನ್ಡಿಆರ್ಎಫ್ ಮಾನದಂಡದ ಅನ್ವಯ ಕೇಂದ್ರದಿಂದ ಪರಿಹಾರ ಬಿಡುಗಡೆ ಆಗುತ್ತದೆ. ಅಲ್ಲಿಯವರೆಗೆ ಕೃಷಿಕರ ನೆರವಿಗೆ ಬರಬೇಕಾದ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಎರಡು ಬಾರಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದಾಗ ಕಂದಾಯ ಸಚಿವನಾಗಿದ್ದ ನಾನು ಕೇಂದ್ರದ ಅನುದಾನಕ್ಕಾಗಿ ಕಾಯದೇ ನಮ್ಮ ಖಜಾನೆಯಿಂದ ಬೆಳೆ ಪರಿಹಾರ ಬಿಡುಗಡೆ ಮಾಡಿ, ರೈತರ ಹಿತ ಕಾಪಾಡಿದ್ದೇವು. ಬೇಕಿದ್ದರೆ ದಾಖಲೆಗಳನ್ನು ತೆಗೆದು ನೋಡಲಿ ಎಂದರು.
ಒಂದೂವರೆ ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಿ: ಪ್ರತಿ ಎಕರೆಗೆ 25 ಸಾವಿರ ರು. ಗಳಂತೆ ಬೆಳೆ ಹಾನಿ ಪರಿಹಾರವನ್ನು ಸರ್ಕಾರ ಘೋಷಿಸಬೇಕು ಮತ್ತು ರೈತರ ಒಂದೂವರೆ ಲಕ್ಷ ರುಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡಬೇಕು. ಈ ಕುರಿತಾಗಿ ಸರ್ಕಾರವನ್ನು ಆಗ್ರಹಿಸಲು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಜೆಡಿಎಸ್ ಜೊತೆಗೂಡಿ ಹೋರಾಟದ ಮೂಲಕ ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸವನ್ನು ಮಾಡ್ತೇವೆ. ಅದಾಗ್ಯೂ ಸರ್ಕಾರ ಇದಕ್ಕೆ ಜಗ್ಗದಿದ್ದಲ್ಲಿ ಬೇರೆ ಮಾರ್ಗ ಹುಡುಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹೊಸ ಟ್ರಾನ್ಸ್ಫಾರ್ಮರ್ ಅಳವಡಿಕೆಗಾಗಿ ರೈತರೇ ಒಂದು ಲಕ್ಷ ರುಪಾಯಿವರೆಗೆ ಖರ್ಚು ಮಾಡಬೇಕಾಗಿ ಬಂದಿದ್ದು, ಬರದ ಸಂಕಷ್ಟದ ಈ ಸಂದರ್ಭದಲ್ಲಿ ವಿದ್ಯುತ್ ಶಕ್ತಿ ನಿಗಮ ರೈತರಿಂದ ಸುಲಿಗೆಗೆ ಇಳಿದಿದ್ದರೆ ವಿದ್ಯುತ್ ಲೋಡ್ ಶೆಡ್ಡಿಂಗ್ನಿಂದ ಕೃಷಿಕರು ಕೈಗೆ ಬರುತ್ತಿದ್ದ ಬೆಳೆಯನ್ನೂ ಕಳೆದುಕೊಂಡಿದ್ದು ಸರ್ಕಾರದ ರೈತ ವಿರೋಧಿ ನೀತಿಯನ್ನು ಸ್ಪಷ್ಟಪಡಿಸುತ್ತದೆ ಎಂದರು.
ಕಾಡಾನೆ ದಾಳಿಗೆ ಮೂವರ ಬಲಿ: ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣದ ಶರಣು ಸಲಗರ್, ಹುಮನಾಬಾದ್ನ ಡಾ. ಸಿದ್ದು ಪಾಟೀಲ್, ಎಂಎಲ್ಸಿ, ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ, ಶಿವಾನಂದ ಮಂಠಾಳಕರ್ ಪಕ್ಷದ ಹಿರಿಯ ಮುಖಂಡ ಗುರುನಾಥ ಕೊಳ್ಳುರ್ ಸೇರಿದಂತೆ ಮತ್ತಿತರರಿದ್ದರು.