Asianet Suvarna News Asianet Suvarna News

ಕಾಂಗ್ರೆಸ್ ಮಧ ಇಳಿಸಲು ಬಹಳ ಕಾಲ ಬೇಕಾಗುವುದಿಲ್ಲ: ಸಿ.ಟಿ.ರವಿ

ಅಘೋಷಿತ ತುರ್ತು ಪರಿಸ್ಥಿತಿ ಎಂದು ನಾನು ಕರೆಯಲು ಬಯಸುವುದಿಲ್ಲ. ಅತಿಯಾದ ಅಧಿಕಾರದ ಮಧ ಎಂದು ಕರೆಯಬಹುದು. ಅದು ಬಹಳ ದಿನ ಇರಲು ಸಾಧ್ಯವಿಲ್ಲ ಎಂದ ಸಿ.ಟಿ.ರವಿ 

BJP National General Secretary CT Ravi Slams Karnataka Congress Government grg
Author
First Published Jun 6, 2023, 11:30 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜೂ.06): ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ. ಬಿನ್ ಲಾಡೆನ್ ಬಂದರೆ ಒಳಗೆ ಬಿಟ್ಟುಕೊಳ್ಳುತ್ತಾರೆ. ಚಕ್ರವರ್ತಿ ಸೂಲಿಬೆಲೆ ಅವರ ವಿಚಾರ ಗೋಷ್ಠಿಯನ್ನು ರದ್ದು ಪಡಿಸುತ್ತಾರೆ. ಇವರು ಪ್ರಜಾ ಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಚಕ್ರವರ್ತಿ ಸೂಲಿ ಬೆಲೆ ಅವರಿಗೆ ಸಚಿವ ಎಂ.ಬಿ.ಪಾಟೀಲ ಅವರು ಜೈಲಿಗೆ ಕಳಿಸುವ ಬೆದರಿಕೆ ಹಾಕಿರುವ ಬಗ್ಗೆ ಚಿಕ್ಕಮಗಳೂರು ನಗರದಲ್ಲಿ ಇಂದು(ಮಂಗಳವಾರ) ಪ್ರತಿಕ್ರಿಯಿಸಿದ ಅವರು, ಅಘೋಷಿತ ತುರ್ತು ಪರಿಸ್ಥಿತಿ ಎಂದು ನಾನು ಕರೆಯಲು ಬಯಸುವುದಿಲ್ಲ. ಅತಿಯಾದ ಅಧಿಕಾರದ ಮಧ ಎಂದು ಕರೆಯಬಹುದು. ಅದು ಬಹಳ ದಿನ ಇರಲು ಸಾಧ್ಯವಿಲ್ಲ ಎಂದರು. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನೇ ಬುಡಮೇಲು ಮಾಡಿ ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿದ ಕಾಂಗ್ರೆಸಿಗೆ ಜನರು ಹಿಂದೆ ಬುದ್ಧಿ ಕಲಿಸಿದನ್ನು ಇವರು ನೆನಪಿಟ್ಟುಕೊಳ್ಳಬೇಕು. ಕಾಂಗ್ರೆಸ್ ಮಧ ಇಳಿಯಲು ಮತ್ತು ಇಳಿಸಲು ಬಹಳ ಕಾಲ ಬೇಕಾಗುವುದಿಲ್ಲ ಎಂದರು.

ಸೋಲಿನ ಹತಾಶೆಯಿಂದ ಕಿರುಕುಳ ಕೊಟ್ಟಲ್ಲಿ ಸಹಿಸಲಾಗುವುದಿಲ್ಲ: ಶಾಸಕ ತಮ್ಮಯ್ಯ

ಓಲೈಕೆ ಮತ್ತು ತುಷ್ಟೀಕರಣದ ರಾಜನೀತಿ : 

ಗೋಹತ್ಯೆ ನಿಷೇಧ ಕಾನೂನು ರದ್ದು ಪಡಿಸುವ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಓಲೈಕೆ ಮತ್ತು ತುಷ್ಟೀಕರಣದ ರಾಜನೀತಿಯನ್ನೇ ಮಾಡಿಕೊಂಡು ಬಂದ  ಆ ಪಕ್ಷದಿಂದ ಹೊಸದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ದೇಶಕ್ಕೆ ಸಂವಿಧಾನ, ಕಾನೂನು ಇದೆ. ಇಲ್ಲದ್ದೆಲ್ಲ ಮಾಡಲು ಹೋದರೆ ಬುದ್ಧಿ ಕಲಿಸಲು ಜನರೂ ಇದ್ದಾರೆ ಎಂದರು.ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಅವರು ಏನೇನು ಮಾಡುತ್ತಾರೆ ನೋಡಬೇಕಲ್ಲ. ಅದಕ್ಕೆ ಅವಕಾಶ ಕೊಡಬೇಕಾಗುತ್ತದೆ. ಈ ದೇಶಕ್ಕೆ ಒಂದು ಸಂಸ್ಕೃತಿ ಇದೆ. ಎಲ್ಲವನ್ನೂ ಭಗವಂತ ಸ್ವರೂಪಿಯಾಗಿ ಸ್ಮರಿಸುವುದು, ಮಣ್ಣನ್ನೂ ಕೂಡ ತಾಯಿ ಎಂದು ಕರೆಯುವುದು ನಮ್ಮ ಸಂಸ್ಕೃತಿಯಲ್ಲಿ ಮಾತ್ರ ಎಂದರು.ಎಷ್ಟೋ ಮನೆಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಭೂಮಿಗೆ ನಮಸ್ಕಾರ ಮಾಡಿ ನಂತರ ಮುಂದೆ ಹೆಜ್ಜೆ ಇಡುತ್ತಾರೆ. ನೀರನ್ನು ಗಂಗಾ ಮಾತೆ ಎಂದು, ಗೋವನ್ನು ಗೋಮಾತೆ ಎಂದು ಕರೆಯುವುದು ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ. ಇದಕ್ಕೆ ಕಾರಣ ಇದರ ಹಿಂದಿರುವ ಉಧಾತ್ತವಾದ ನಾಗರೀಕತೆ ಎಂದು ಹೇಳಿದರು.

ಗೋಮಾತೆಯ ಸಂಸ್ಕೃತಿಯ ಅರಿವಿಲ್ಲದ ಕಾಂಗ್ರೆಸಿಗರು : 

ಮನುಷ್ಯ ತಾಯಿ ಹಾಲನ್ನು 6 ತಿಂಗಳು, ವರ್ಷ ಕುಡಿಯುತ್ತಾನೆ. ಗೋವಿನ ಹಾಲನ್ನು ಜೀವನ ಪೂರ್ತಿ ಕುಡಿಯುತ್ತಾನೆ. ಅದಕ್ಕಾಗಿ ಗೋಮಾತೆ ಎನ್ನುತ್ತೇವೆ. ಆ ಸಂಸ್ಕೃತಿಯ ಅರಿವಿಲ್ಲದ ಕಾಂಗ್ರೆಸಿಗರು ಏನೆಲ್ಲಾ ಮಾತನಾಡುತ್ತಿದ್ದಾರೆ. ಗೋಹತ್ಯೆ ನಿಷೇಧವನ್ನು ಬಲವಾಗಿ ಪ್ರತಿಪಾದಿಸಿದ್ದು, ಮಹಾತ್ಮಗಾಂಧಿ ಅವರು, ಗಾಂಧಿ ಪರವಾಗಿ ಇವರು ನಿಲ್ಲುವುದಾದರೆ ಗೋಹತ್ಯೆ ನಿಷೇಧದ ಪರವಾಗಿ ಕಾಂಗ್ರೆಸ್ ನಿಲ್ಲಬೇಕು. ಕಾಂಗ್ರೆಸ್ನವರಿಗೆ ಬದುಕಿರುವವರೆಗೆ ಅಧಿಕಾರ ಎಂದು ಹೇಳಿಲ್ಲ. ಬರೇ 5 ವರ್ಷಕ್ಕೆ ಮಾತ್ರ ಅಧಿಕಾರ ಸಿಕ್ಕಿರುವುದು. ಅವರು ಬದುಕಿರುವವರೆಗೆ ಅಧಿಕಾರ ಎನ್ನುವ ಭ್ರಮೆ ಇದ್ದರೆ ಅದನ್ನು ಮತ್ತು ಅಧಿಕಾರದ ಪಿತ್ತವನ್ನು ಹೇಗೆ ಇಳಿಸಬೇಕು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಕೆಲವು ಕಾಲ ಅವರ ಆಟಾಟೋಪ ಆಡಲು ಬಿಡಬೇಕು. ಮಧ್ಯೆ ಮಧ್ಯೆ ಅದಕ್ಕೆ ಪ್ರತಿಕ್ರಿಯಿಸುವುದು ಸಹ ಸೂಕ್ತವಲ್ಲ ಎನ್ನಿಸುತ್ತೆ ಎಂದರು.

ಸಂವಿಧಾನದ ಆಶಯದಂತೆ ಬಡವರ ಸಮಸ್ಯೆಗೆ ಸ್ಪಂದಿಸುವೆ: ಶಾಸಕ ಎಚ್‌.ಡಿ.ತಮ್ಮಯ್ಯ

ಪ್ರತಿ ವಿಷಯದಲ್ಲೂ ರಾಜಕಾರಣ ಸೂಕ್ತವಲ್ಲ : 

ವಿಪಕ್ಷಗಳು ಪ್ರತಿ ವಿಷಯದಲ್ಲೂ ರಾಜಕಾರಣ ಮಾಡುವುದು ಸೂಕ್ತವಲ್ಲ. ಭೂಪಾಲ್ ಅನಿಲ ದುರಂತ ಸಂಭವಿಸಿದಾಗ ಕಾಂಗ್ರೆಸ್ನ ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ರಾಜೀನಾಮೆ ನೀಡಿರಲಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು. ಒಡಿಶಾದ ಬಾಲೇಶ್ವರ ರೈಲು ದುರಂತವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಪಸ್ವರ ಎತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ರೈಲ್ವೇ ಇಲಾಖೆ ಪ್ರಾಥಮಿಕ ವರದಿ ಪ್ರಕಾರ ಎಲೆಕ್ಟ್ರಾನಿಕ್ ಸಿಗ್ನಲ್ ಎಲ್ಲಾ ಸರಿ ಇತ್ತು. ಇದರ ಹಿಂದೆ ವಿದ್ವಂಸಕ ಕೃತ್ಯ ಇರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ಒಂದು ವ್ಯವಸ್ಥಿತ ಏಜೆನ್ಸಿ ಮೂಲಕ ತನಿಖೆ ಆಗಬೇಕು ಎನ್ನುವ ಕಾರಣಕ್ಕೆ ಸಿಬಿಐ ತನಿಖೆ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ತನಿಖೆ ನಂತರ ಸತ್ಯ ಹೊರಬರಲಿದೆ : 

ತನಿಖೆ ನಡೆಯಲಿ, ತಪ್ಪಿತಸ್ಥರು ಯಾರು? ಆಕಸ್ಮಿಕವೇ? ತಾಂತ್ರಿಕ ದೋಷವೇ? ಅಥವಾ ದುರುದ್ದೇಶಪೂರ್ವಕವಾಗಿ ಯಾರಾದರೂ ಭಯೋತ್ಪಾದಕ ಚಟುವಟಿಕೆ ಭಾಗವಾಗಿ ಇದನ್ನು ಮಾಡಿದ್ದಾರೆಯಾ? ಎಲ್ಲವೂ ತನಿಖೆ ನಂತರ ಗೊತ್ತಾಗುತ್ತದೆ ಎಂದು ಹೇಳಿದರು. ರೈಲ್ವೇ ದುರಂತದ ನಂತರ ಪರಿಹಾರ ಕಾರ್ಯಗಳನ್ನು ನಿಭಾಯಿಸಿದ ರೀತಿಯಲ್ಲಿ ಕಳಕಳಿ ಇತ್ತು. ನಾಯಕತ್ವವೂ ಇತ್ತು. ಒಂದು ರೀತಿಯಲ್ಲಿ ಆ ಕಾರ್ಯ ಮಾದರಿಯಾಗಿತ್ತು. ಭೂಪಾಲ್ ಅನಿಲ ದುರಂತಕ್ಕೆ ಕಾರಣನಾದವನಿಗೆ ಅಂದಿನ ಕಾಂಗ್ರೆಸ್ ಸರ್ಕಾರ ವಿಶೇಷ ವಿಮಾನ ಕೊಟ್ಟು ವಿದೇಶಕ್ಕೆ ಕಳಿಸಿತು. ಇಲ್ಲಿ ಆರೀತಿಯ ಕೆಲಸವನ್ನೇನು ಮಾಡಿಲ್ಲ. ಭೂಪಾಲ್ ದುರಂತ ಸಂಭವಿಸಿದಾಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕರವೇ ಇತ್ತು. ಅಂದಿನ ಪ್ರಧಾನ ಮಂತ್ರಿಯೂ ರಾಜೀನಾಮೆ ಕೊಡಲಿಲ್ಲ. ಮುಖ್ಯಮಂತ್ರಿಯೂ ರಾಜೀನಾಮೆ ಕೊಡಲಿಲ್ಲ. 30 ವರ್ಷವಾದರೂ ಆ ಕುಟುಂಬಗಳಿಗೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಇಲ್ಲಿ ಹಾಗೆ ಆಗಿಲ್ಲ. ತನಿಖೆ ನಂತರ ತಪ್ಪಿಸ್ಥರು ಯಾರಿದ್ದಾರೆ ಅವರಿಗೆ ಶಿಕ್ಷೆ ಆಗುತ್ತದೆ ಎಂದು ತಿಳಿಸಿದರು.

Follow Us:
Download App:
  • android
  • ios