ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆ ಸಹೋದರರು ಇಬ್ಬರೂ ಸ್ಪರ್ಧೆ ಮಾಡಿದ್ದಾರೆ ಎನ್ನುವುದನ್ನು ಕೇಳಿದೆ. ಬಹುಷಃ ಟ್ರೆಂಡ್ ಸೆಟ್ ಆಗಿಲ್ಲ ಎನ್ನುವುದೋ ಇನ್ನಾವುದರ ಭಯವೋ ನನಗೆ ಗೊತ್ತಾಗುತ್ತಿಲ್ಲ. ಅವರಿಗೆ ದಾಖಲೆಗಳನ್ನು ಸಲ್ಲಿಸಿರುವುದು ವ್ಯತ್ಯಾಸವಾಗಿ ತಿರಸ್ಕಾರವಾಗಿಬಿಡಬಹುದು ಎನ್ನುವ ಭಯ ಕಾಡುತ್ತಿದೆಯೋ ಗೊತ್ತಿಲ್ಲ ಎಂದ ಸಿ.ಟಿ.ರವಿ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕಮಗಳೂರು(ಏ.20): ಕುತಂತ್ರ ಮಾಡಲಿಕ್ಕೆ ಕಾಂಗ್ರೆಸ್‌ನಲ್ಲೇ ಬಹಳ ಜನರಿದ್ದಾರೆ. ಅವರು ಕುತಂತ್ರ ಮಾಡುವುದರಲ್ಲಿ ಎಕ್ಸ್‌ಪರ್ಟ್‌ಗಳು. ನಾವೇನಿದ್ದರೂ ಸೀದಾಸಾದ. ಅವರು ನಮ್ಮ ಬಗ್ಗೆ ಭಯ ಪಡುವುದು ಬೇಡ. ಒಳಗೇ ಕತ್ತಿ ಮಸೆಯುತ್ತಿರುವ ಅವರ ಪಕ್ಷದವರ ಬಗ್ಗೆ ಭಯ ಪಡಬೇಕು ಎಂದು ಕಾಂಗ್ರೆಸ್ ನಾಯಕರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ಬಿಜೆಪಿ ಕುತಂತ್ರ ರಾಜಕಾರಣ ಮಾಡುತ್ತಿದೆ ಎನ್ನುವ ಡಿ.ಕೆ.ಸುರೇಶ್ ಆರೋಪಕ್ಕೆ ಇಂದು(ಗುರುವಾರ) ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆ ಸಹೋದರರು ಇಬ್ಬರೂ ಸ್ಪರ್ಧೆ ಮಾಡಿದ್ದಾರೆ ಎನ್ನುವುದನ್ನು ಕೇಳಿದೆ. ಬಹುಷಃ ಟ್ರೆಂಡ್ ಸೆಟ್ ಆಗಿಲ್ಲ ಎನ್ನುವುದೋ ಇನ್ನಾವುದರ ಭಯವೋ ನನಗೆ ಗೊತ್ತಾಗುತ್ತಿಲ್ಲ. ಅವರಿಗೆ ದಾಖಲೆಗಳನ್ನು ಸಲ್ಲಿಸಿರುವುದು ವ್ಯತ್ಯಾಸವಾಗಿ ತಿರಸ್ಕಾರವಾಗಿಬಿಡಬಹುದು ಎನ್ನುವ ಭಯ ಕಾಡುತ್ತಿದೆಯೋ ಗೊತ್ತಿಲ್ಲ ಎಂದರು. ಅವರನ್ನ ಕಾಂಗ್ರೆಸ್ ಪಕ್ಷವಾಗಿ ನೋಡಲಷ್ಟೇ ನಾವು ಬಯಸುತ್ತೇವೆ. ನಾವು ಪಕ್ಷದ ಅಭ್ಯರ್ಥಿಯಾಗಿ ಆರ್.ಅಶೋಕ್ ಅವರನ್ನ ಕಣಕ್ಕಿಳಿಸಿದ್ದೇವೆ. ಅವರು ದೊಡ್ಡಣ್ಣ ಅಥವಾ ಸಣ್ಣಣ್ಣ ನಿಂತರೂ ಒಂದೇ ನಾವು ಬಿಜೆಪಿಯಾಗಿ ಎದುರಿಸುತ್ತೇವೆ ಎಂದರು. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು, ನಮ್ಮ ಪಕ್ಷದ ಸಿದ್ಧಾಂತವನ್ನು ಹೇಳಿಕೊಂಡು, ನಾಯಕರ ಬಗ್ಗೆ ಹೇಳಿಕೊಂಡು ಮತ ಕೇಳುತ್ತೇವೆ ಎಂದು ಹೇಳಿದರು. 

ಚಿಕ್ಕಮಗಳೂರು: ಕಾಂಗ್ರೆಸ್‌ನ ಎಚ್.ಡಿ. ತಮ್ಮಯ್ಯ ಸೇರಿ 33 ನಾಮಪತ್ರ ಸಲ್ಲಿಕೆ

ಜೆಡಿಎಸ್‌, ಬಿಜೆಪಿ ಬಿ ಟೀಂ ಸಿ.ಟಿ ರವಿ ಕಿಡಿ 

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ನ್ನು ಬಿಜೆಪಿ ಬಿ ಟೀಂ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ರವಿ, ಮುಂಚೆಯೂ ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಹೇಳುತ್ತಿದ್ದರು. ಚುನಾವಣೆ ಫಲಿತಾಂಶ ಬಂದ ಕೂಡಲೆ ಕುಮಾರಸ್ವಾಮಿ ಅವರನ್ನು ಅಪ್ಪಿಕೊಂಡು ಮುಖ್ಯಮಂತ್ರಿ ಮಾಡಿದರು. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಒಂದಾಗಿರುವ ಹಲವಾರು ಕ್ಷೇತ್ರಗಳು ನಮ್ಮ ಕಣ್ಣಮುಂದಿವೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ಗಳು ಎ ಮತ್ತು ಬಿ ಟೀಂಗಳು ಹಿಂದೆ ಸರ್ಕಾರ ಮಾಡುವಾಗಲೂ ಹಾಗೇ ಮಾಡಿದರು. ಈಗಲೂ ಅವರು ನಂ.೧, ನಂ.೨ ಲೆಕ್ಕದಲ್ಲೇ ಬಿಜೆಪಿ ವಿರೋಧಿಸುವ ರಾಜಕಾರಣ ಮಾಡುತ್ತಾರೆ ಎಂದರು. ಜೆಡಿಎಸ್ ಜೊತೆಗೆ ಚುನಾವಣೆ ಪೂರ್ವದಲ್ಲಿ ಯಾವುದೇ ರೀತಿಯ ಹೊಂದಾಣಿಕೆ ನಮ್ಮದು ಇಲ್ಲ. ಜೆಡಿಎಸ್‌ಅನ್ನು ಸಹ ಸಮಾನವಾಗಿ ರಾಜಕೀಯ ವಿರೋಧಿಯಾಗಿ ನಾವು ಪರಿಗಣಿಸುತ್ತಿದ್ದೇವೆ. ಜೆಡಿಎಸ್ ಪ್ರಾಬಲ್ಯ ಇರುವ ಕಡೆಯೂ ಪ್ರಬಲ ಅಭ್ಯರ್ಥಿಗಳನ್ನೇ ಇಳಿಸಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.