ಯಾವುದೇ ಒಂದು ಕೆಟ್ಟ ಘಟನೆಯಾಯ್ತು, ಒಳ್ಳೆ ಕೆಲಸವೇ ಆಯ್ತು ಕೆಲವರು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಮಾಮೂಲಿಯಾಗದೆ. ಅಂತಹದ್ದೇ ಒಂದು ಉದಾಹರಣೆ ಇಲ್ಲಿದೆ.
ಉಡುಪಿ, (ಫೆ.24): ಪುಲ್ವಾಮಾ ದಾಳಿಗೆ ಇಡೀ ಭಾರತ ಭಾರತವೇ ಕಂಬನಿ ಮಿಡಿದಿದೆ. ಇನ್ನು ಕೆಲವರು ಇದರಲ್ಲಿ ರಾಜಕೀಯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಾರತಿ ಮಾಡಿಸಿಕೊಂಡಿದ್ದು ಉಂಟು.
ಈಗ ಬೆಂಗಳೂರಿನ ಏರ್ ಶೋದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡಕ್ಕೂ ರಾಜಕೀಯ ತೇಪೆ ಹಚ್ಚಲು ಹೊರಟಿದ್ದಾರೆ. ಹೌದು...ಈ ಬೆಂಕಿ ದುರಂತದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಮ್ಮ ರಾಜಕೀಯ ಚಪಲ ತೀರಿಸಿಕೊಂಡಿದ್ದಾರೆ.
‘ಫೈರ್ ಶೋ’ ಕಾರು ಮಾಲಕರಿಗೆ ವಿಮಾ ಕಂಪನಿಗಳು ಹೇಳೋದಿಷ್ಟು..
ಉಡುಪಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, 'ಬೆಂಗಳೂರು ಏರ್ ಶೋ ಪಾರ್ಕಿಂಗ್ನಲ್ಲಿ ನಡೆದ ಬೆಂಕಿ ಅವಘಡಕ್ಕೂ, ಕಾಶ್ಮೀರದ ಪುಲ್ವಾಮ ದಾಳಿಗೂ ಲಿಂಕ್ ಇರಬಹುದಾ..? ದೇಶದ್ರೋಹಿಗಳು ಈ ಕೃತ್ಯದಲ್ಲಿ ತೊಡಗಿರಬಹುದಾ? ಎಲ್ಲಾ ಆಯಾಮದಲ್ಲೂ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು' ಎಂದು ಸಂಸದೆ ಶೋಭಾ ಕರಂದ್ಲಾಜೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಏರ್ ಶೋವನ್ನು ಕೇಂದ್ರ ಸರ್ಕಾರ ಹಾಗೂ ವಿವಿಧ ಇಲಾಖೆ ಆಯೋಜನೆ ಮಾಡಿತ್ತು. ಕಾರ್ಯಕ್ರಮಕ್ಕೆ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ನೇರವಾಗಿ ರಾಜ್ಯ ಮೈತ್ರಿ ಸರ್ಕಾರನತ್ತ ಬೊಟ್ಟು ಮಾಡಿ ತೋರಿಸಿದ್ದಾರೆ.
ಏರೋ ಶೋನಲ್ಲಿ ಕಾರುಗಳು ಭಸ್ಮ, ವಾಹನ ಮಾಲೀಕರ ಅನುಕೂಲಕ್ಕಾಗಿ RTO ಸಹಾಯ ಕೇಂದ್ರ
ಏರ್ ಶೋ ಶಿಫ್ಟಾಗುವಾಗ ನಾವು ಧ್ವನಿ ಎತ್ತಿದ್ದೆವು. ಇಂತಹ ಘಟನೆ ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತಿದೆ. ರಕ್ಷಣೆ ಕೊಡಲು ಆಗಲ್ಲಾಂದ್ರೆ ಏನರ್ಥ..? ಪೊಲೀಸ್, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿತ್ತು..? ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಏರ್ ಶೋನಲ್ಲಿ ಬೆಂಕಿ ಅವಘಡಕ್ಕೆ ರಾಜ್ಯ ಸರ್ಕಾರ ವೈಫಲ್ಯ ಆದ್ರೆ, ಪುಲ್ವಾಮಾ ದಾಳಿಗೆ ಕೇಂದ್ರ ಸರ್ಕಾರ ಕಾರಣವೇ..? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶೋಭಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನೆ (ಶನಿವಾರ) ಏರ್ ಶೋ ಪಾರ್ಕಿಂಗ್ನಲ್ಲಿ ಭಾರೀ ಪ್ರಮಾಣದಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಇದರಲ್ಲಿ ನೂರಾರು ಕಾರುಗಳು ಸುಟ್ಟು ಭಸ್ಮವಾಗಿವೆ. ಮೇಲ್ನೋಟಕ್ಕೆ ಈ ರೀತಿ ಆಗುವುದು ಆಕಸ್ಮಿಕ. ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳುವುದು ಎಷ್ಟು ಸರಿ.
