ಕುಮಾರಸ್ವಾಮಿ ಪರ ಸಿಂಹ ಬ್ಯಾಟಿಂಗ್: ಇದೇನಿದು ಹೀಗೊಂದು ಹಾಗೊಂದು ಮಾತು...!
ಶಿರಾ ಉಪಚುನಾವಣೆ ವೇಳೆ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಇದೀಗ ಸಾಫ್ಟ್ ಕಾರ್ನರ್ ತಾಳಿದ್ದಾರೆ.
ಮೈಸೂರು, (ಡಿ.11): ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಗೂ ಸಂಸದ ಪ್ರತಾಪ್ ಸಿಂಹ ಆಗಾಗ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದರು. ಆದ್ರೆ, ಇದೀಗ ಪ್ರತಾಪ್ ಸಿಂಹ ಅವರು ದಿಢೀರ್ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇಂದು (ಶುಕ್ರವಾರ) ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಬಿಜೆಪಿ ಮಾಡಿರುವ ಒಳ್ಳೆಯ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಬಲಿಸಿದ್ದಾರೆ. ರಾಜಕೀಯ ಕಾರಣಕ್ಕೆ ಅವರನ್ನು ಟೀಕಿಸುವುದು ಸಣ್ಣತನ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅಚ್ಚರಿ ಹೇಳಿಕೆ ನೀಡಿದರು.
ಶಿರಾ ಬೈ ಎಲೆಕ್ಷನ್: ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಸಿಂಹ..!
ರೈತರ ಸಾಲ ಮನ್ನಾದಂತಹ ರೈತ ಪರ ಕಾರ್ಯಕ್ರಮ ನೀಡಿದ್ದಾರೆ, ಅವರೊಬ್ಬ ರೈತನ ಮಗ. ಹೀಗಾಗಿ, ರೈತರು ಹಾಗೂ ಗೋವಿನ ಬಗ್ಗೆ ಅವರಿಗೆ ಗೊತ್ತಿದೆ. ಇದೇ ಕಾರಣಕ್ಕೆ ಅವರು ಬಿಜೆಪಿಯ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಅವರನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಎಚ್.ಡಿ ಕುಮಾರಸ್ವಾಮಿಯವರ ನಿಲುವನ್ನು ಬೆಂಬಲಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ 20-20 ಸರ್ಕಾರದಲ್ಲಿಯೂ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಕೃಷಿ ಹಾಗೂ ಗೋವಿನ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ಪ್ರತಾಪ್ ಸಿಂಹ ಅವರು ಕುಮಾರಸ್ವಾಮಿ ಅವರನ್ನ ಗುಣಗಾನ ಮಾಡಿದರು.
ಇನ್ನು ಶಿರಾ ಉಪಚುನಾವಣೆಯಲ್ಲಿ ಕ್ಷೇತ್ರದ ಜನರು ವಿಷ ಕೊಟ್ಟರು ಎಂದು ಕುಮಾರಸ್ವಾಮಿ ಅವರ ಹೇಳಿಕೆಗೆ ವ್ಯಂಗ್ಯವಾಡಿನ್ನು ಇಲ್ಲಿ ಸ್ಮರಿಸಬಹುದು.