ಶಿರಾ ಬೈ ಎಲೆಕ್ಷನ್: ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಸಿಂಹ..!
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೂರು ಪಕ್ಷಗಳಿಂದ ಭರ್ಜರಿ ತಯಾರಿ ನಡೆಯುತ್ತಿದ್ದು, ಈ ಸಂಬಂಧ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆಡಿದ ಭಾವೋದ್ವೇಗದ ಮಾತುಗಳನ್ನ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ತುಮಕೂರು, (ಅ.02): ಶಿರಾ ಜನರು ನನಗೆ ಹಾಲು ಕೊಡ್ತಿರೋ ಅಥವಾ ವಿಷ ಕೊಡ್ತಿರೋ ಅನ್ನೋ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
"
ಇಂದು ಶಿರಾದಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಶಿರಾ ಜನರು ಹಾಲು ಕೊಡ್ತಿರೋ ವಿಷ ಕೊಡ್ತಿರೋ ಅಂತಾ ಕೇಳ್ತಿದಾರೆ. ನಾನು ಶಿರಾ ಜನತೆಗೆ ಹೇಳಲಿಕ್ಕೆ ಬಯಸ್ತೇನೆ. ಕೊರೋನಾ ಸಂದರ್ಭದಲ್ಲಿ ಕುಮಾರಸ್ವಾಮಿಗೆ ಕಷಾಯ ಕೊಟ್ಟು ಕಳುಹಿಸಿ ಎಂದು ವ್ಯಂಗ್ಯವಾಡಿದರು.
ಶಿರಾ ಬೈ ಎಲೆಕ್ಷನ್: ಕುಮಾರಸ್ವಾಮಿ ಭಾವನಾತ್ಮಕ ಮಾತು...!
ಯಡಿಯೂರಪ್ಪನವರಿಗೆ 78 ವರ್ಷ. ಅವರ ಮುಖದಲ್ಲಿ ಸಾತ್ವಿಕ ಸಿಟ್ಟು ಕಾಣುತ್ತೆ. ಯಡಿಯೂರಪ್ಪನವರು ಯಾವತ್ತೂ ಅಳುಮುಂಜಿ ಥರ ಅಳಲ್ಲ. ಕುಮಾರಣ್ಣ ಇದ್ರೆ ಸಭೆ ಸಮಾರಂಭದಲ್ಲಿ ಅಪ್ಪ ಮಕ್ಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲಾ ಸಾಲಾಗಿ ಬಂದು ಅಳೋರು ಎಂದು ಸಿಂಹ ಲೇವಡಿ ಮಾಡಿದರು.
ನವೆಂಬರ್ 3ರಂದು ನಡೆಯಲಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೂರು ಪಕ್ಷಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ. ಮತದಾರರನ್ನು ತಮ್ಮತ್ತ ಸೆಳೆಯಲು ಭಾವೋದ್ವೇಗದ ಭಾಷಣಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಶಿರಾ ಜನರು ನನಗೆ ಹಾಲು ಕೊಡ್ತಿರೋ ಅಥವಾ ವಿಷ ಕೊಡ್ತಿರೋ ಎಂದು HD ಕುಮಾರಸ್ವಾಮಿ ಇತ್ತೀಚೆಗೆ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರು.