Asianet Suvarna News Asianet Suvarna News

ಸಿದ್ದರಾಮಯ್ಯ ಆಡಳಿತ ಹಿಂದೂ ವಿರೋಧಿ ಆಡಳಿತ: ನಳಿನ್‌ ಕಟೀಲ್‌ ಆರೋಪ

ಭಯೋತ್ಪಾದನಾ ಚಟುವಟಿಕೆಗಳಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಬಲವಾಗಿ ನಿಂತಿದೆ. ಆ ಕಾರಣಕ್ಕಾಗಿ ಗಲಭೆಗಳು ಸೃಷ್ಟಿಯಾಗ್ತಿವೆ. ಈ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.

BJP MP Nalin Kumar Kateel Slams On CM Siddaramaiah gvd
Author
First Published Oct 4, 2023, 1:12 PM IST

ಬಂಟ್ವಾಳ (ಅ.04): ಭಯೋತ್ಪಾದನಾ ಚಟುವಟಿಕೆಗಳಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಬಲವಾಗಿ ನಿಂತಿದೆ. ಆ ಕಾರಣಕ್ಕಾಗಿ ಗಲಭೆಗಳು ಸೃಷ್ಟಿಯಾಗ್ತಿವೆ. ಈ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಿಂದೂ ಸಮಾಜವನ್ನು ಸಂರಕ್ಷಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಹಿಂದೂ ವಿರೋಧಿಯಾಗಿ ಕೆಲಸಮಾಡುತ್ತಿದೆ. ಸಿದ್ದರಾಮಯ್ಯ ಅವರ ಆಡಳಿತ ಹಿಂದೂ ವಿರೋಧಿ ಆಡಳಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್‌ ಹೇಳಿದ್ದಾರೆ.

ವಿಟ್ಲದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಮತಾಂಧ ಶಕ್ತಿಗಳು, ಆತಂಕವಾದಿಗಳು, ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಕೋಲಾರದಲ್ಲಿ ಈದ್ ಮಿಲಾದ್ ನ ಹೆಸರಿನಲ್ಲಿ ಕತ್ತಿಯ ಪ್ರದರ್ಶನ, ಔರಂಗಜೇಬನ ಕಟೌಟ್ ನ ಮುಖಾಂತರ, ಟಿಪ್ಪುವಿನ ಕಟೌಟ್ ನ ಮುಖಾಂತರ ಕೋಲಾರದಲ್ಲಿ ಅಶಾಂತಿ ನಿರ್ಮಾಣಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಲೋಕಸಭೆಗಿಂತ, ವಿಧಾನಸಭೆ ಮೇಲೆ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಭಾವ ಬೀರುತ್ತೆ: ಸಿ.ಎಂ.ಇಬ್ರಾಹಿಂ

ಶಿವಮೊಗ್ಗದಲ್ಲಿ ಈದ್ ಮಿಲಾದ್ ನ ಹೆಸರಿನಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ, ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲುತೂರಾಟ ನಡೆಸಿರುವ ಗಂಭೀರ ಪ್ರಕರಣಗಳನ್ನು ನಾವು ಕಂಡಿದ್ದೇವೆ. ಯಾವ್ಯಾವಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ಈ ರಾಜ್ಯದಲ್ಲಿ ಬರುತ್ತಾ ಅವಾಗ ಗಲಭೆ ಸೃಷ್ಟಿ ಮಾಡುವಂತಹ, ಗಲಭೆ ಕೋರರಿಗೆ ಶಕ್ತಿ ತುಂಬುವ ಕೆಲಸ ಈ ಸರಕಾರ ಮಾಡುತ್ತಿದೆ. ಕಾಂಗ್ರೆಸ್ ನ ಮೊದಲ ಅವಧಿಕಾಲದಲ್ಲಿ ಟಿಪ್ಪು ಸುಲ್ತಾನ್ ಮೆರೆಯುವಂತಾಯಿತು. ಈಗ ಎರಡನೇ ಅವಧಿಯಲ್ಲಿ ಔರಂಗಜೇಬನನ್ನು ಪ್ರದರ್ಶನ ಮಾಡುವ ಕೆಲಸವಾಗಿದೆ ಎಂದು ನಳಿನ್‌ ದೂರಿದರು.

ಯಾವ್ಯಾವಾಗ ಕಾಂಗ್ರೆಸ್ ಆಡಳಿತಕ್ಕೆ ಬರುತ್ತದೋ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೋ, ಆಗ ಆಗ ಆತಂಕವಾದಿಗಳಿಗೆ ಭಯೋತ್ಪಾದಕರಿಗೆ ಯಾಕೆ ಶಕ್ತಿ ಬರುತ್ತದೆ ಎಂದು ಅವರು ಪ್ರಶ್ನಿಸಿದರು. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಪ್ರಕರಣಗಳಿರಬಹುದು ಆಗ ಆರೋಪಿಗಳನ್ನ ನಮ್ಮ ಸರ್ಕಾರ ಬಂಧಿಸಿತ್ತು. ಅವರನ್ನು ಬಿಡುಗಡೆ ಮಾಡುವ ಕೆಲಸವನ್ನು ಈ ಸರ್ಕಾರ ಮಾಡ್ತಿದೆ. ಕೋಲಾರದಲ್ಲಿ ನಡೆದ ಘಟನೆಯ ಬಗ್ಗೆ ಕಠೋರ ಕ್ರಮ ಕೈಗೊಳ್ಳದೆ ಇರುವುದರಿಂದ ಆತಂಕವಾದಿಗಳು ನಿರಾತಂಕವಾಗಿ ಈ ರಾಜ್ಯದಲ್ಲಿ ಮರೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸ್ವಲ್ಪ ದಿನ ಗ್ಯಾರಂಟಿ ಯೋಜನೆ ನಿಲ್ಲಿಸಿ ರೈತರ ಉಳಿಸಿ: ರಾಜ್ಯ ಸರ್ಕಾರಕ್ಕೆ ರೇವಣ್ಣ ಒತ್ತಾಯ

ಶಿವಮೊಗ್ಗದಲ್ಲಿ ಗಲಭೆ ನಡೆದ ಪ್ರದೇಶಗಳಿಗೆ ನಮ್ಮ ತಂಡ ತೆರಳಿ ಪರಿಶೀಲನೆ ನಡೆಸಲಿದೆ. ಶಿವಮೊಗ್ಗ ಹಾಗೂ ಕೋಲಾರದ ಗಲಭೆಯ ಹಿಂದಿರುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕೂಡಲೇ ತನಿಖೆಯನ್ನು ಎನ್.ಐ.ಎ. ಗೆ ಒಪ್ಪಿಸಬೇಕು ಎಂದರು. ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಮಾಧವ ಮಾವೆ, ರವೀಶ್ ಶೆಟ್ಟಿ ಕರ್ಕಳ, ಹರಿಪ್ರಸಾದ್ ಯಾದವ್, ರಾಮ್ ದಾಸ್ ಶೆಣೈ, ಮೊಹನದಾಸ್ ಉಕ್ಕುಡ, ವೀರಪ್ಪ ಗೌಡ ರಾಯರಬೆಟ್ಟು, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ್ ವಿಟ್ಲ, ಹರೀಶ್ ಸಿ.ಎಚ್., ಜಯಂತ ಸಿ.ಎಚ್, ವಿಟ್ಲ ಪಡ್ನೂರು ಗ್ರಾ.ಪಂ ಅಧ್ಯಕ್ಷ ಜಯಂತ ಪಿ. ಇದ್ದರು.

Latest Videos
Follow Us:
Download App:
  • android
  • ios