ಸಚಿವಾಲಯಗಳಲ್ಲಿ ಹಣ ಕೊಡದಿದ್ದರೆ ಕೆಲಸ ಆಗಲ್ಲ: ಬಿಜೆಪಿ MLC
ಸಚಿವಾಲಯದ ಸಿಬ್ಬಂದಿಗೆ ಸಕಾಲ ಅನ್ವಯ| ದುರ್ನಡತೆ ತೋರಿದವರ ವಿರುದ್ಧ ಶಿಸ್ತು ಕ್ರಮ| ಸಚಿವಾಲಯದಲ್ಲಿ ಕೆಲಸ ಮಾಡುವವರಿಗೆ ಉಳಿದ ಇಲಾಖೆಗಳ ಸಿಬ್ಬಂದಿಗಳಂತೆ ವರ್ಗಾವಣೆ ನೀತಿ ಅನ್ವಯವಾಗುತ್ತಿಲ್ಲ: ನಾರಾಯಣಸ್ವಾಮಿ|
ಬೆಂಗಳೂರು(ಮಾ.05): ರಾಜ್ಯದ ಸಚಿವಾಲಯದಲ್ಲಿ ಹಣ ಕೊಡದೇ ಇದ್ದರೆ ಕಡತಗಳು ವಿಲೇವಾರಿ ಆಗುವುದಿಲ್ಲ. ಪ್ರತಿ ಕೆಲಸಕ್ಕೂ ಹಿಂದೆ ಬಿದ್ದು ಕೆಲಸ ಮಾಡಿಸಿಕೊಳ್ಳುವಂತಹ ಸ್ಥಿತಿ ಬಂದಿದೆ ಎಂದು ಖುದ್ದು ಆಡಳಿತಾರೂಢ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಆರೋಪಿಸಿದ ಪ್ರಸಂಗ ನಡೆಯಿತು.
ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆ ಸಚಿವಾಲಯದಲ್ಲಿ ಕೆಲಸ ಮಾಡುವವರಿಗೆ ಉಳಿದ ಇಲಾಖೆಗಳ ಸಿಬ್ಬಂದಿಗಳಂತೆ ವರ್ಗಾವಣೆ ನೀತಿ ಅನ್ವಯವಾಗುತ್ತಿಲ್ಲ. ಕೇವಲ ‘ಚಲನವಲನ’ ಅಡಿಯಲ್ಲಿ ಸಚಿವಾಲಯದೊಳಗೆ ಆಯಾ ಇಲಾಖೆಯೊಳಗೆ ವರ್ಗಾಯಿಸುವ ಪದ್ಧತಿ ಇರುವುದರಿಂದ ಹತ್ತಾರು ವರ್ಷಗಳಿಂದ ಅಲ್ಲಿಯೇ ಇದ್ದು ಜಡ್ಡುಗಟ್ಟಿದ್ದಾರೆ ಎಂದರು.
ಸರ್ಕಾರಿ ಕಚೇರಿ, ಸಾರ್ವಜನಿಕ ಸೇವೆಗೆ ಗರಿಷ್ಠ ಲಂಚ ಪೀಕುವ ದೇಶ ಯಾವುದು?
ಸಚಿವಾಲಯದ ನೌಕರರಿಗೆ ‘ಸಕಾಲ’ ಅನ್ವಯ ಆಗುವುದಿಲ್ಲವೇ? ಇದಕ್ಕೆ ಏನು ಕ್ರಮ ಕೈಗೊಳ್ಳಲಾಗುತ್ತದೆ? ದುರ್ನಡತೆ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ? ಎಂದು ಪ್ರಶ್ನಿಸಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿ, ಸಚಿವಾಲಯದ ಸಿಬ್ಬಂದಿಗೆ ಸಕಾಲ ಅನ್ವಯವಾಗುತ್ತದೆ. ದುರ್ನಡತೆ ತೋರಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು ಎಂದರು.