ದೇಶದ ಹಿನ್ನೆಡೆಗೆ ಕಾಂಗ್ರೆಸ್‌, ಪಾಕಿಸ್ತಾನ ಕಾರಣ, ಯಾದಗಿರಿಯಲ್ಲಿ ಪರಿಷತ್‌ ಸದಸ್ಯ, ಬಿಜೆಪಿ ಮುಖಂಡ ರವಿಕುಮಾರ್‌ ಆರೋಪ 

ಯಾದಗಿರಿ(ಜ.03):  ಪ್ರಧಾನಿ ಮೋದಿ ನಾಯಕತ್ವ ಬಗ್ಗೆ ಜಗತ್ತು ಒಪ್ಪಿದರೂ ಪಾಕಿಸ್ತಾನ ಮಾತ್ರ ಮೋದಿ ಒಪ್ಪಲ್ಲ. ಹಾಗೆಯೇ, ಕಾಂಗ್ರೆಸ್‌ ಸಹ ಪಾಕಿಸ್ತಾನದಂತೆ ಮೋದಿ ಆಡಳಿತ ಒಪ್ಪಲ್ಲ. ಹೀಗಾಗಿ, ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ಒಂದೇ ತರನಾಗಿ ಮಾತನಾಡುತ್ತಿದ್ದು, ಇವೆರಡೂ ಒಂದೇ ದೋಣಿಯಲ್ಲಿ ಚಲಿಸುವ ಪ್ರಸಂಗ ನೋಡುತ್ತಿದ್ದೇವೆ ಎಂದು ಬಿಜೆಪಿ ಮುಖಂಡ ಹಾಗೂ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಬೂತ್‌ ವಿಜಯದ ಅಭಿಯಾನದ ಅಂಗವಾಗಿ, ಯಾದಗಿರಿಗೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ಪಾಕಿಸ್ತಾನ ಭಾರತ ವಿರೋಧಿ ರಾಷ್ಟ್ರ. ಭಾರತದಲ್ಲಿ ಭಯೋತ್ಪಾದನೆ ಅಳಿಯಬಾರದು, ಭಯೋತ್ಪಾದನೆ ಇರಬೇಕು ಎಂದು ಇಷ್ಟಪಡುವ ರಾಷ್ಟ್ರವದು. ದೇಶದ ಹಿನ್ನೆಡೆಗೆ ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ಕಾರಣ ಎಂದು ದೂರಿದ ರವಿಕುಮಾರ್‌, ದೇಶದಲ್ಲಿ ಸಮಸ್ಯೆಗಳ ಉಂಟು ಮಾಡೋದೇ ಇವೆರಡರ ಕೆಲಸ ಎಂದರು.

ಡಿಕೆಶಿ ಟೀಕೆಗೆ ಪ್ರತಿಕ್ರಿಯೆ:

ಬಿಜೆಪಿ ನಾಯಕತ್ವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ನೀವು (ಕಾಂಗ್ರೆಸ್‌) ಯಾರ ನೇತೃತ್ವದಲ್ಲಿ ಚುನಾವಣೆ ಮಾಡುತ್ತಿದ್ದೀರಿ? ಸೋನಿಯಾ ಗಾಂಧಿಯೇ? ರಾಹುಲ್‌ ಗಾಂಧಿಯ ನೇತೃತ್ವದಲ್ಲಿ ಮಾಡುತ್ತಿದ್ದೀರಾ ಹೇಳಿ..? ಎಂದು ಕಾಂಗ್ರೆಸ್‌ ಪ್ರಶ್ನಿಸಿದ ರವಿಕುಮಾರ್‌, ನಾವು ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ. ವಿಶೇಷವಾಗಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಮೋದಿ ನೇತೃತ್ವದಲ್ಲಿ ಮಾಡಲಾಗುತ್ತಿದೆ ಎಂದರು.

Yadagiri: ಬಿಜೆಪಿಯ ಅದ್ದೂರಿ ಕಾರ್ಯಕ್ರಮಕ್ಕೆ ಆಕ್ಷೇಪ, ಬಿಜೆಪಿ ತೆರಿಗೆ ಹಣ ಲೂಟಿಗಿಳಿದಿದೆ ಎಂದ ಕಾಂಗ್ರೆಸ್

ರಾಜ್ಯದಲ್ಲಿ ನಾಯಕತ್ವ ಇಲ್ಲ ಅಂತ ಅಮಿತ್‌ ಶಾ ಹೇಳಿಲ್ಲ. ಬಿಎಸ್ವೈ, ಬೊಮ್ಮಾಯಿ ಸರ್ಕಾರ ಉತ್ತಮ ಕೆಲಸ ಮಾಡಿದೆ ಅಂತ ಹೇಳಿದ್ದಾರೆ. ಲೀಡರ್‌ ಶೀಪ್‌ ಇಲ್ಲ ಅಂತ ಹೇಳಿಲ್ಲ. ಇಡೀ ದೇಶದಲ್ಲಿ ಮೋದಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ನೀವು ಯಾವ ಯಾರ ಮುಖ ಇಟ್ಟುಕೊಂಡು ಹೋಗುತ್ತೀರಿ, ಐರನ್‌ ಲೆಗ್‌ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಚುನಾವಣೆ ಹೋಗುತ್ತೀರಾ ಎಂದು ಟಾಂಗ್‌ ನೀಡಿದರು.

ನೋಟ್‌ ಬ್ಯಾನ್‌:

ನೋಟ್‌ ಬ್ಯಾನ್‌ ವಿಚಾರವಾಗಿ ಸರ್ವೋಚ್ಛ ನ್ಯಾಯಾಲಯದ ತೀರ್ಪು ಕುರಿತು ಮಾತನಾಡಿದ ಅವರು, ನರೇಂದ್ರ ಮೋದಿಯವರ ನೋಟ್‌ ಬ್ಯಾನ್‌ ತೀರ್ಮಾನವನ್ನ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ದೇಶದಲ್ಲಿ ನಡೆಯುತ್ತಿದ್ದ ದೊಡ್ಡ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ದೇಶಕ್ಕೆ ಹರಿದು ಬರಬೇಕಾದ ಟ್ಯಾಕ್ಸ್‌ ಸುಧಾರಣೆಗಾಗಿ ಮೋದಿ ಕ್ರಮ ತೆಗೆದುಕೊಂಡಿದ್ದರು.

ಕೇಂದ್ರ ಸರ್ಕಾರದ ಕ್ರಮ ಹಾಗೂ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್‌ ನಾಯಕರು ಬೇರೆ ಬೇರೆ ಮಾತನಾಡಿದರೂ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ ಎಲ್ಲರೂ ಖಂಡಿಸಿದರೂ, ಸುಪ್ರೀಂ ಕೋರ್ಚ್‌ ನರೇಂದ್ರ ಮೋದಿಯವರ ತೀರ್ಮಾನ ಎತ್ತಿ ಹಿಡಿದಿದೆ. ಈಗ ಕಾಂಗ್ರೇಸ್‌ ನಾಯಕರು ಏನು ಹೇಳ್ತಾರೆ ಎಂದರು.

ಗುರುಮಠಕಲ್‌: ಶರಣಗೌಡರನ್ನು ಜನತೆ ಆಶೀರ್ವದಿಸಬೇಕು, ನಿಖಿಲ್‌ ಕುಮಾರಸ್ವಾಮಿ

ದೇಶಕ್ಕೆ ಅನುಕೂಲವಾದ ನಿರ್ಧಾರವನ್ನು ಬಹಳ ಯೋಚನೆ ಮಾಡಿ, ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪು ಕಾಂಗ್ರೇಸ್‌ ಹೇಳಿಕೆಗಳಿಗೆ ಮುಜುಗರ ಉಂಟು ಮಾಡಿದೆ. ನರೇಂದ್ರ ಮೋದಿ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಸ್ವಾಗತಿಸಿದೆ. ಇದು ಕಾಂಗ್ರೆಸ್‌ ಗೆ ನುಂಗಲಾರದ ತುತ್ತಾಗಿದೆ ಎಂದರು.

ರಫೇಲ್‌ ಯುದ್ಧ ವಿಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಹೇಳಿದ್ದರು. ಅದರಲ್ಲಿ ಸುಪ್ರೀಂ ಕೋರ್ಟ್‌ ನ ಜಡ್ಜ್‌ ನೇತೃತ್ವದಲ್ಲಿ ತನಿಖೆಯಾಯಿತು. ಅದರಲ್ಲಿ ಏನು ಆಗಿರಲಿಲ್ಲ, ಅದು ಕೂಡ ಕಾಂಗ್ರೆಸ್‌ಗೆ ಮುಜುಗರವಾಯಿತು. ಕೇಂದ್ರ ಸರ್ಕಾರದ ತೀರ್ಮಾನ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಚ್‌ ಶ್ಲಾಘನೀಯವನ್ನು ವ್ಯಕ್ತಪಡಿಸಿದೆ. ಹಾಗಾಗಿ ಕಾಂಗ್ರೇಸ್‌ ಧೋರಣೆಯನ್ನು ಖಂಡಿಸುತ್ತೇನೆ ಎಂದರು ಈ ಬಾರಿ ಕಾಂಗ್ರೆಸ್‌ ಅಡ್ರೆಸ್‌ ಇಲ್ಲದೆ ಹೋಗುತ್ತದೆ ಎಂದ ರವಿಕುಮಾರ್‌, ಗಾಲಿ ಜನಾರ್ದನರೆಡ್ಡಿ ಹೊಸ ಪಕ್ಷದಿಂದ ಬಿಜೆಪಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.