ಈ ಸಚಿವರನ್ನಿಟ್ಟುಕೊಂಡು ಮುಂದಿನ ಚುನಾವಣೆ ಗೆಲ್ಲುವುದು ಕಷ್ಟ: ಬಿಜೆಪಿ ಶಾಸಕ ಸ್ಫೋಟಕ ಹೇಳಿಕೆ
ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಸಂಪುಟ ಕಸರತ್ತು ಜೋರಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರು, (ನ.11): ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬೆನ್ನಲ್ಲೇ ಸಂಪುಟ ವಿಸ್ತರಣೆ ಸರ್ಕಸ್ ತೀವ್ರಗೊಂಡಿದೆ. ಒಂದೆರಡು ದಿನಗಳಲ್ಲಿ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದ್ದು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
"
ಇದರ ಮಧ್ಯೆ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಬಿಜೆಪಿ ಶಾಸಕರು ರಹಸ್ಯ ಸಭೆ ನಡೆಸಿದ್ದು, ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಮತ್ತೊಂದೆಡೆ ಈ ಹಾಲಿ ಸಚಿವರನ್ನಿಟ್ಟುಕೊಂಡು ಹೋದರೆ ಮುಂದಿನ ಸಾರ್ವತ್ರಿಕ ಚುನಾವಣೆ ಗೆಲ್ಲುವುದು ಕಷ್ಟ ಎಂದು ಬಿಜೆಪಿ ಶಾಸಕ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ನೆಲೆ ಇಲ್ಲದ ಶಿರಾದದಲ್ಲಿ ಒಂದೇ ಸಲ ಇಬ್ಬರು ಶಾಸಕರು: ಬಿಜೆಪಿ ಮತ್ತಷ್ಟು ಸ್ಟ್ರಾಂಗು
ಹೌದು....ಹಾಲಿ ಸಚಿವರನ್ನಿಟ್ಟುಕೊಂಡು ಹೋದರೆ ಮುಂದಿನ ಸಾರ್ವತ್ರಿಕ ಚುನಾವಣೆ ಗೆಲ್ಲುವುದು ಕಷ್ಟ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪರೋಕ್ಷವಾಗಿ ಹಾಲಿ ಸಚಿವರ ಬಗ್ಗೆ ಅಸಮಾಧಾನ ಹೊರಹಾಕಿದರು.
ಉಪಚುನಾವಣೆ ಸಹಜವಾಗಿ ಸರ್ಕಾರದ ಪರವಾಗಿ ಬರುತ್ತದೆ. ಉಪಚುನಾವಣೆಗಳನ್ನು ಸರ್ಕಾರಗಳು ನಡೆಸುತ್ತದೆ. ಆದರೆ ಸಾರ್ವತ್ರಿಕ ಚುನಾವಣೆ ಪಕ್ಷ ನಡೆಸುತ್ತದೆ. ಹಾಗಾಗಿ ಹೊಸ ಮುಖಗಳು ಸಂಪುಟದೊಂದಿಗೆ ಹೋಗಬೇಕು. ಸಾರ್ವತ್ರಿಕ ಚುನಾವಣೆ ಗೆಲ್ಲಬೇಕಾದರೆ ಸಂಪುಟ ಪುನರ್ ರಚನೆಯಾಗಬೇಕಾಗುತ್ತೆ ಎಂದು ವಿಶ್ವನಾಥ್ ಹೇಳುವ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಲಹೆ ಕೊಟ್ಟಿದ್ದಾರೆ.