ದೆಹಲಿ ಬಾಂಬ್ ಸ್ಫೋಟ ಘಟನೆ ಮನುಕುಲಕ್ಕೆ ಮಾರಕವಾಗಿದೆ. ರಾಷ್ಟ್ರದ ಸಮಗ್ರತೆಯಿಂದ ಅಪಾಯಕಾರಿ... ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರು (ನ.12): ದೆಹಲಿ ಬಾಂಬ್ ಸ್ಫೋಟ ಘಟನೆ ಮನುಕುಲಕ್ಕೆ ಮಾರಕವಾಗಿದೆ. ರಾಷ್ಟ್ರದ ಸಮಗ್ರತೆಯಿಂದ ಅಪಾಯಕಾರಿ... ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ 2014ಕ್ಕೂ ಮೊದಲು ವಾರದಲ್ಲಿ, ತಿಂಗಳಲ್ಲಿ ದೇಶದ ವಿವಿಧೆಡೆ ಬಾಂಬ್ ಸ್ಫೋಟ ಆಗುವುದು ಸಾಮಾನ್ಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನಗಣ್ಯ ಎನ್ನುವಷ್ಟು ಕಡಿಮೆ ಆಗಿತ್ತು. ಈಗ ಮತ್ತೆ ಭಯೋತ್ಪಾದಕರು ಬಾಲ ಬಿಚ್ಚಿದ್ದಾರೆ. ಕೆಮಿಕಲ್ ಉಪಯೋಗಿಸಿ ಸಾಮೂಹಿಕ ನರಮೇಧ ಮಾಡಲು ಸಂಚು ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು.
ಈ ಜಾಲದೊಳಗೆ ಜೀವ ಉಳಿಸಬೇಕಾದ ವೈದ್ಯರು ಭಾಗಿಯಾಗಿದ್ದಾರೆ. ರಾಷ್ಟ್ರ ಕಟ್ಟಬೇಕಾದ ಎಂಜಿನಿಯರ್ಗಳೇ ಭಯೋತ್ಪಾದನೆಯಲ್ಲಿ ಭಾಗಿಯಾಗುತ್ತಾರೆ. ಇದು ಕಳವಳಕಾರಿ ಉಂಟುಮಾಡುವ ಸಂಗತಿ. ಬೇರು ಸಮೇತ ಭಯೋತ್ಪಾದನೆ ಕಿತ್ತು ಹಾಕಬೇಕು. ಮೂಲ ಎಲ್ಲಿಂದ, ಯಾರು ಇವರಿಗೆ ತರಬೇತಿ ಕೊಟ್ಟಿದ್ದಾರೆ, ಹಣಕಾಸಿನ ನೆರವು ಎಲ್ಲಿಂದ ಸಿಗುತ್ತಿದೆ, ಯಾವ ವಿಚಾರದಿಂದ ಪ್ರಚೋದನೆ ಪಡೆಯುತ್ತಿದ್ದಾರೆ, ಇದನ್ನು ಐಸೋಲೇಟ್ ಘಟನೆ ರೀತಿ ನೋಡಬಾರದು ಎಂದರು.
ರಾಜ್ಯ ಸರ್ಕಾರ ಜೈಲಿನಲ್ಲೇ, ಶಂಕಿತ ಭಯೋತ್ಪಾದಕನ ಕೈಯಲ್ಲಿ ಮೊಬೈಲ್ ಸಿಗುತ್ತದೆ. ಅಲ್ಲಿಂದಲೇ ಅವನು ಅಖಾಡ ಮಾಡಿಕೊಳ್ಳಬಹುದಲ್ಲವೇ? ಕುಳಿತಲ್ಲೇ ಯೋಜನೆ ರೂಪಿಸಿ ನಿರ್ದೇಶನ ಕೊಡಬಹುದಲ್ಲವೇ? ನಾಳೆ ನ್ಯಾಯಾಲಯದಲ್ಲೂ ಸಾಬೀತುಪಡಿಸಲು ಆಗುವುದಿಲ್ಲ. ಇದು ಸರ್ಕಾರಕ್ಕೆ ಮುಜುಗರ ಅಷ್ಟೇ ಅಲ್ಲ, ಅಪಾಯಕಾರಿ ಎಂದು ಹರಿಹಾಯ್ದರು.
ಖಂಡನೀಯ-ಛಲವಾದಿ
ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಭಾರತದ ಮೇಲೆ ವಿಧ್ವಂಸಕ ಕೃತ್ಯ ಹೊಸದಲ್ಲ. ದೇಶದ ಹೊರಗಡೆ ಇರುವ ಶಕ್ತಿಗಳು ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿವೆ. ಪುಲ್ವಾಮಾ ದಾಳಿ ನಂತರ ನಮ್ಮ ದೇಶ ಬಹಳಷ್ಟು ಎಚ್ಚೆತ್ತುಕೊಂಡಿದೆ. ಅವರಿಗೆ ತಕ್ಕ ಪಾಠ ಕಲಿಸುವ ಕೆಲಸ ಮೋದಿ ಮಾಡಿದೆ. ಆದರೆ ನುಸುಳುಕೊರರು ಭಾರತದಲ್ಲಿದ್ದಾರೆ. ಇವತ್ತು ನಡೆದ ಈ ಕೃತ್ಯವನ್ನು ಪ್ರತಿಯೊಬ್ಬರೂ ಖಂಡಿಸುತ್ತಾರೆ ಎಂದು ತಿಳಿಸಿದರು.
