ರಾಜೀವ್ ಗಾಂಧಿ ವಿವಿ ಕ್ಯಾಂಪಸ್‌ನಲ್ಲಿ ನಿರ್ಮಾಣ ಆಗಬೇಕಿರುವ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜುನ್ನು ಕನಕಪುರಕ್ಕೆ ಸ್ಥಳಾಂತರ ಮಾಡುತ್ತಿರುವುದರ ಹಿಂದೆ ಡಿಕೆ ಬ್ರದರ್ಸ್‌ಗೆ ಲಾಭದ ಉದ್ದೇಶವಿದೆ.

ರಾಮನಗರ (ಸೆ.09): ರಾಜೀವ್ ಗಾಂಧಿ ವಿವಿ ಕ್ಯಾಂಪಸ್‌ನಲ್ಲಿ ನಿರ್ಮಾಣ ಆಗಬೇಕಿರುವ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜುನ್ನು ಕನಕಪುರಕ್ಕೆ ಸ್ಥಳಾಂತರ ಮಾಡುತ್ತಿರುವುದರ ಹಿಂದೆ ಡಿಕೆ ಬ್ರದರ್ಸ್‌ಗೆ ಲಾಭದ ಉದ್ದೇಶವಿದೆ. ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ ವ್ಯಾಪಾರೀಕರಣ ಮಾಡುವ ಸ್ವಾರ್ಥವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಿಡಿಕಾರಿದರು. ಮೆಡಿಕಲ್ ಕಾಲೇಜು ಉಳಿವಿಗಾಗಿ ಕೆಂಗಲ್ ಹನುಮಂತಯ್ಯ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಡಿಕೆಶಿ ಸಹೋದರರ ರಿಯಲ್ ಎಸ್ಟೇಟ್ ದಂಧೆಗೆ ಆಲೋಚನೆ ಮಾಡಿದ್ದಾರೆ ಎನಿಸುತ್ತಿದೆ. ಅದಕ್ಕಾಗಿ ವಿವಿ ಕಾಲೇಜು ತೆಗೆದುಕೊಂಡು ಹೋಗಿದ್ದಾರೆ. ಕಾಲೇಜು ಸ್ಥಳಾಂತರದಲ್ಲಿ ಸದುದ್ದೇಶ ಇಲ್ಲ. ರೈತರ ಜಮೀನನ್ನು ವಶಪಡಿಸಿಕೊಂಡು ಅದರಲ್ಲಿ ಲಾಭ ಮಾಡಿಕೊಳ್ಳುವುದೇ ಉದ್ದೇಶ ಎಂದು ಟೀಕಿಸಿದರು.

Add Asianetnews Kannada as a Preferred SourcegooglePreferred

ಮೆಡಿಕಲ್ ಕಾಲೇಜು ಸ್ಥಳಾಂತರದಿಂದ ರಾಮನಗರ, ಚನ್ನಪಟ್ಟಣ, ಮಾಗಡಿ ತಾಲೂಕಿನ ಜನರಿಗೆ ಅನ್ಯಾಯವಾಗಲಿದೆ. ಜಿಲ್ಲಾ ಕೇಂದ್ರದಲ್ಲಿಯೇ ನಿರ್ಮಾಣವಾದರೆ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಡಿಕೆ ಸಹೋದರರು ಎಲ್ಲದರಲ್ಲೂ ಸ್ವಾರ್ಥದ ವ್ಯಾಪಾರೀಕರಣ ಮಾಡಬೇಡಿ. ಇನ್ನಾದರು ತಪ್ಪು ತಿದ್ದುಕೊಳ್ಳಲಿ ಎಂದು ಹೇಳಿದರು. ಅಣ್ಣ ತಮ್ಮಂದಿರ ದೌರ್ಜನ್ಯವನ್ನು 25 ವರ್ಷಗಳಿಂದ ನೋಡಿ ಸಾಕಾಗಿದೆ. ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ. ಅವರ ಅಧಿಕಾರದ ಮದ ಇಳಿಸಿ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ ಎಂದು ಡಿಕೆ ಸೋದರರ ವಿರುದ್ಧ ಯೋಗೇಶ್ವರ್ ವಾಗ್ದಾಳಿ ನಡೆಸಿದರು.

ಡಿಕೆಶಿ ಒತ್ತಡದಿಂದಲೇ ರಾಮನಗರ ಮೆಡಿಕಲ್ ಕಾಲೇಜು ಸ್ಥಳಾಂತರ: ನಿಖಿಲ್‌ ಕುಮಾರಸ್ವಾಮಿ

ಡಿಕೆ ಸಹೋದರರ ವಿರುದ್ಧ ಹೋರಾಟ ಪ್ರಾರಂಭ: ಡಿಕೆ ಸಹೋದರರ ಜನದ್ರೋಹಿ ನಡೆಯ ವಿರುದ್ಧ ರಾಮನಗರ ಜಿಲ್ಲೆಯಿಂದಲೇ ಹೋರಾಟ ಪ್ರಾರಂಭವಾಗಿದೆ. ಮೆಡಿಕಲ್ ಕಾಲೇಜನ್ನು ಉಳಿಸದಿದ್ದರೆ ಜಿಲ್ಲಾ ಕೇಂದ್ರದಿಂದ ವಿಧಾನಸೌಧದವರೆಗೆ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು. ಮೆಡಿಕಲ್ ಕಾಲೇಜು ಉಳಿವಿಗಾಗಿ ಕೆಂಗಲ್ ಹನುಮಂತಯ್ಯ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ಕೊಡುತ್ತೇವೆ. 

ಅಷ್ಟರೊಳಗೆ ಕಾಲೇಜು ಸ್ಥಳಾಂತರ ರದ್ದು ಮಾಡದಿದ್ದರೆ ನಮ್ಮ ನಾಯಕರ ನೇತೃತ್ವದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದರು. ಜನ ಕಾಂಗ್ರೆಸ್ ಸರ್ಕಾರಕ್ಕೆ ಚೀ ಥೂ ಎನ್ನುತ್ತಿದ್ದಾರೆ. ವಿವಿ ಮತ್ತು ಕಾಲೇಜು ಜಿಲ್ಲೆಯ ಕಳಸವಿದ್ದಂತೆ. ಮೆಡಿಕಲ್ ಕಾಲೇಜಿಗಾಗಿ ಜಿಲ್ಲೆ ಬಂದ್ ಮಾಡುತ್ತೇವೆ. ಅದನ್ನು ಸ್ಥಳಾಂತರ ಮಾಡಲು ಅವಕಾಶ ನೀಡುವುದಿಲ್ಲ. ಡಿಕೆ ಸಹೋದರರಿಗೆ ತಾಕತ್ತು ಧಮ್ಮು ಇದ್ದರೆ ಖಾಸಗಿ ಕಾಲೇಜು ಮಾಡಿಕೊಳ್ಳಲಿ. ತಾಕತ್ತಿದ್ದರೆ ಹೋರಾಟಗಾರರನ್ನು ಬಂಧಿಸಲಿ, ನಾವು ಎಲ್ಲದಕ್ಕೂ ತಯಾರಿದ್ದೇವೆ. ಭಾರತ ಜೋಡಿಸುವ ಬದಲು ಮೊದಲು ರಾಮನಗರ ಜೋಡಿಸಿ ಎಂದು ಕಿಡಿಕಾರಿದರು.

ನಾಯಿಗಳಂತೆ ಕಿತ್ತಾಡುತ್ತಿದ್ದವರೀಗ ಭಾಯಿ-ಭಾಯಿ: ಎಚ್‌ಡಿಕೆ-ಸಿಪಿಐ ವಿರುದ್ದ ಸಂಸದ ಸುರೇಶ್ ವಾಗ್ದಾಳಿ

2013ರಲ್ಲಿ ನಿಮ್ಮ ಸರ್ಕಾರ ಇದ್ದಾಗ ಜಿಲ್ಲೆಗೆ ಏನು ಮಾಡಿದಿರಿ. ಜನ ನಿಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡು ಮತ ಹಾಕಿದರೆ, ನೀವು ಅವರಿಗೆ ಮೋಸ ಮಾಡಿದಿರಿ. ಸಂಸದರಿಗೆ ದಮ್ಮು , ಸ್ವಾಭಿಮಾನ ಇದ್ದಿದ್ದರೆ ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡಿ ಎಂದು ಮುಖ್ಯಮಂತ್ರಿಯವರಿಗೆ ಧೈರ್ಯದಿಂದ ಒತ್ತಾಯಿಸಿ ಕೇಳಬೇಕಿತ್ತು ಎಂದು ಡಿಕೆ ಸಹೋದರರ ವಿರುದ್ಧ ಗುಡುಗಿದರು.