ಬೆಳವಣಿಗೆಗಳನ್ನ ಎಲ್ಲಿಗೆ ಮುಟ್ಟಿಸ್ಬೇಕೋ ಅಲ್ಲಿಗೆ ಮುಟ್ಟಿಸ್ತೇವೆ: ಬಿಎಸ್ವೈಗೆ ಯತ್ನಾಳ್ ಪರೋಕ್ಷ ಎಚ್ಚರಿಕೆ
ಯಾವ ಪಕ್ಷದವರೇ ಆಗಿರಲಿ ನೇರವಾಗಿ ಮಾತನಾಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಸಿಡಿದೆದ್ದಿದ್ದಾರೆ.
ಬೆಂಗಳೂರು, (ಜೂನ್.19): ನಾನು ಬಿ ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಆಗಲ್ಲ. ಯಾವಾಗ ಬಗ್ಗಬೇಕು ಆಗ ಬಗ್ಗುತ್ತೇನೆ. ಯಾವಾಗ ಸಿಡಿದೇಳಬೇಕು ಆಗ ಸಿಡಿದೇಳುತ್ತೇನೆ. ಈಗ ನಾನು ತಲೆ ಬಗ್ಗಿಸಿದ್ದೇನೆಂದರೆ ಒಳ್ಳೆಯದಾಗುತ್ತೆ ಅಂತಾ ಅರ್ಥ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಇಂದು (ಶುಕ್ರವಾರ) ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಬಿಎಸ್ ವೈ ಸರ್ಕಾರದಲ್ಲಿ ಮಂತ್ರಿ ಆಗಲ್ಲ. ನಾನು ಮಂತ್ರಿ ಅಗುವ ಸಂದರ್ಭವೂ ಈಗಿಲ್ಲ. ಅವರು ಮಾಡಲ್ಲ ಅನ್ನೋ ಮಾತು ಸಹ ಇದೆ. ಆದರೆ ನಾನೇ ಹೇಳ್ತೇನೆ ಮಂತ್ರಿ ಆಗಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿಬಿಟ್ಟರು.
'ಗೂಟದ ಕಾರು ಬೇಕೆನ್ನುವವರಿಗೆ ಸಚಿವ ಸ್ಥಾನ ಕೊಡಲೇಬೇಡಿ'
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ನಮ್ಮ ಅಸಮಾಧಾನ ಇದೆ. ಅಧಿಕಾರಿಗಳ ವರ್ಗಾವಣೆ ಬಗ್ಗೆ ಚರ್ಚೆ ಮಾಡಿದ್ದು ನಿಜ. ನಾನು ಮೃದುವಾಗಿದ್ದೇನೆ ಅಂದು ಅನ್ಕೊಳ್ಳೋದು ಬೇಡ. ಇಲ್ಲಿ ನಡೆಯುತ್ತಿರೋ ಎಲ್ಲಾ ಬೆಳವಣಿಗೆಗಳನ್ನ ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಬಿಎಸ್ ಯಡಿಯೂರಪ್ಪಗೆ ಎಚ್ಚರಿಕೆ ನೀಡಿದರು.
ಆದರೆ ಮುಖ್ಯಮಂತ್ರಿಗಳು ಕೋವಿಡ್-19 ನಿಯಂತ್ರಣದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಬೇಕು ಅಂದು ಅಧ್ಯಕ್ಷರನ್ನು ಕೇಳಿದ್ದೇವೆ ಎಂದರು.
ವಿಶ್ವನಾಥ್ ಪರ ಬ್ಯಾಟಿಂಗ್
ಇನ್ನು ವಿಧಾನಪರಿಷತ್ ಟಿಕೆಟ್ ತಪ್ಪಿಸಲು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕಾರಣ ಎಂಬ ವಿಶ್ವನಾಥ್ ಹೇಳಿಕೆ ವಿಚಾಕ್ಕೆ ಪ್ರತಿಕ್ರಿಯಿಸಿದ ವಯತ್ನಾಳ್, ಟಿಕೆಟ್ ತಪ್ಪಲು ಡಿಕೆಶಿ, ಹೆಚ್ ಡಿಕೆ, ಸಿದ್ದರಾಮಯ್ಯ, ದೇವೆಗೌಡರು ಎಷ್ಟು ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಈ ವಿಚಾರ ನಿಮಗೂ ( ಮಾಧ್ಯಮ ) ಸಹ ಗೊತ್ತಿದೆ. ಅದನ್ನು ನನ್ನ ಹತ್ರ ಹೇಳಿಸಿ ಎನ್ ಮಾಡ್ತೀರಿ..? ಎಂದರು.