ಸದನ ಆರಂಭ ದಿನದಿಂದಲೂ ಮೌನವಾಗಿಯೇ ಇದ್ದ ಮಾಧುಸ್ವಾಮಿ ಅವರ ಇಂದು ತಮ್ಮ ಖಾತೆ ಬದಲಾವಣೆಯ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, (ಫೆ.4): ನಾನು ಸದನದಲ್ಲಿ ಗಟ್ಟಿಯಾಗಿ ಉತ್ತರ ಕೊಟ್ಟಿದ್ದಕ್ಕೆ ಇಂದು ಹಿಂದಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆ ಕಲಾಪದಲ್ಲಿ ನಡೆಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು (ಗುರುವಾರ) ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‍ನ ಶಿವಾನಂದ ಪಾಟೀಲ್ ಅವರು, ಮುಳವಾಡ ಮುಖ್ಯ ಕಾಲುವೆ ವಿಷಯದ ಬಗ್ಗೆ ಮಾತನಾಡಿ, ಅನಧಿಕೃತವಾಗಿ ಕಾಲುವೆ ಒಡೆದು ಬೇರೆಯವರಿಗೆ ನೀರು ಕೊಟ್ಟಿದ್ದಾರೆ. ನಾನು ಈ ಬಗ್ಗೆ ಫೋಟೊ ಸಮೇತ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ರಾಜೀನಾಮೆ ವರೆಗೂ ಹೋಗಿ ಕೂಲ್ ಆದ ಸಚಿವ ಮಾಧುಸ್ವಾಮಿ..!

ಸದನದಲ್ಲಿ ಜಲಸಂಪನ್ಮೂಲ ಸಚಿವರು ಇಲ್ಲದಿದ್ದರೂ ಚಿಂತೆಯಿಲ್ಲ. ಕಡೆಪಕ್ಷ ಸಣ್ಣ ನೀರಾವರಿ ಸಚಿವರಾಗಿ ನೀವಾದರೂ ಉತ್ತರ ಕೊಡಿ ಎಂದು ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು.

ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಬಿಟ್ಟು ಬೇರೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಹೇಗೆ ಉತ್ತರಿಸಲಿ ಎಂದು ಉತ್ತರಕೊಡದೆ ಸಚಿವರು ಜಾರಿಕೊಂಡರು. ಇದು ನಿಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ನನಗೂ ಗೊತ್ತು. ಆದರೂ ನೀವೇ ಉತ್ತರ ಕೊಡಿ ಎಂದು ಮತ್ತೊಮ್ಮೆ ಶಿವಾನಂದ್ ಪಾಟೀಲ್ ಮನವಿ ಮಾಡಿದಾಗ, ಇದು ನನ್ನ ಇಲಾಖೆಗೆ ಬರುವುದಿಲ್ಲ.

ಆದರೂ ನೀವೇ ಉತ್ತರ ಕೊಡಿ ಎಂದು ಅಧಿಕಾರಿಗಳು ನೋಟಿಸ್ ಕೊಡ್ತಾರೆ ಎಂದು ಮಾಧುಸ್ವಾಮಿ ಹೇಳಿದರು. ನಾನು ಗಟ್ಟಿಯಾಗಿ ಮಾತನಾಡಿದ್ದಕ್ಕೆ ಈವಾಗ ಹಿಂದಕ್ಕೆ ಬಂದಿದ್ದೇನೆ ಎಂದು ಪರೋಕ್ಷವಾಗಿ, ತಮ್ಮ ಬಳಿ ಇದ್ದ ಕಾನೂನು ಮತ್ತು ವ್ಯವಹಾರಗಳ ಖಾತೆಯನ್ನು ಹಿಂಪಡೆದಿರುವುದಕ್ಕೆ ಅಸಮಾಧಾನ ಹೊರಹಾಕಿದರು.