ಕಟೀಲ್ ಭೇಟಿ ಮಾಡಿದ ಶಾಸಕರ ನಿಯೋಗ : ಆ 10 ಸಚಿವರನ್ನು ಕೈ ಬಿಡಲು ಸೂಚನೆ-ರಹಸ್ಯ ಹೊರಕ್ಕೆ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿದೆ. ಇದೇ ಸಂದರ್ಭದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಸಂಖ್ಯೆಯೂ ಕೂಡ ಹೆಚ್ಚೇ ಇದ್ದು ಶಾಸಕರ ನಿಯೋಗ ಒಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ಮಾಡಿದೆ.
ಬೆಂಗಳೂರು (ನ.19): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿದ್ದು ಇದೇ ವೇಳೆ ಶಾಸಕರ ನಿಯೋಗ ಒಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ಮಾಡಿದೆ.
"
ಕೆಲವು ಸಚಿವರನ್ನು ಕೈ ಬಿಡಬೇಕು. ಹೊಸಬರಿಗೆ ಅವಕಾಶ ನೀಡಬೇಕು. ಕೆಲವು ಸಚಿವರನ್ನು ಕೈ ಬಿಡುವ ಯೋಚನೆಯಲ್ಲಿರುವ ಸಿಎಂ ಮೇಲೆ ಹಾಲಿ ಸಚಿವರು ಒತ್ತಡ ಹಾಕಿದ್ದಾರೆ. ಪ್ರತ್ಯೇಕ ಸಭೆ ಮಾಡಿ ಒತ್ತಡ ಹೇರಿದ್ದಾರೆ. ಹಾಗಾದರೆ ನಾವು 40 ಶಾಸಕರು ಪ್ರತ್ಯೇಕ ಸಭೆ ಮಾಡ್ತೇವೆ ಎಂದು ಕಟೀಲ್ ಬಳಿ ನಿಯೋಗ ಹೇಳಿದೆ.
ನಮಗೂ ಸಭೆ ಮಾಡಿ ಒತ್ತಡ ಹೇರಲು ಬರುತ್ತದೆ. ಕೆಲವು ಸಚಿವರು ಶಾಸಕರ ಮಾತಿಗೆ ಕಿಮ್ಮತ್ತೆ ಕೊಡೊದಿಲ್ಲ. ನಾವು ಶಾಸಕರಲ್ಲವೇ ? ಎಂದು ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ನಳಿನ್ ಕುಮಾರ್ ಕಟೀಲ್ ಬಳಿ ಆರೋಪ ಮಾಡಿದ್ದಾರೆ.
ನೀಡಿದ ದೂರೇನು : ಶಾಸಕರ ಅಹವಾಲನ್ನು ಸಚಿವರು ಆಲಿಸುತ್ತಿಲ್ಲ. ಕ್ಷೇತ್ರದ ಮನವಿಯನ್ನು ಸಚಿವರು ನೋಡುತ್ತಿಲ್ಲ. ಇಂತಹ ಸಚಿವರು ಇದ್ದರೇ ಏನು ಇಲ್ಲದಿದ್ದರೆ ಏನು. 8ರಿಂದ 10 ಸಚಿವರ ವಿರುದ್ಧ ಶಾಸಕರು ದೂರು ನೀಡಿದ್ದಾರೆ. ಹಲವು ಬಾರಿ ಭೇಟಿ ಮಾಡಿ ಮನವಿ ನೀಡಿದರೂ ಸಚಿವರು ಕ್ಯಾರೇ ಎನ್ನುತ್ತಿಲ್ಲ. ಇಂತಹ ಸಚಿವರನ್ನು ಕೈ ಬಿಡಿ, ಸಂಪುಟದಿಂದ ತೆಗೆದುಹಾಕಿ ಎಂದು ದೂಡಿದ್ದಾರೆ.
'ಇದು ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆಯ ಮುನ್ಸೂಚನೆ'
ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಳಿದರೆ ಸ್ಪಂದಿಸುತ್ತಿಲ್ಲ. ಸಿಎಂ ಬಿಎಸ್ ವೈ ವಿರುದ್ಧ ನಮ್ಮ ಅಸಮಧಾನವಿಲ್ಲ. ಸಿಎಂ ನಮ್ಮ ಮನವಿಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಕೆಲ ಸಚಿವರು ನಮ್ಮ ಬಳಿ ಉಡಾಫೆ ತೋರಿಸುತ್ತಿದ್ದಾರೆ ಎಂದರು
ಕಟೀಲ್ ರಿಯಾಕ್ಷನ್ : ನೀವು ಯಾವುದೇ ಕಾರಣಕ್ಕೂ ಪ್ರತ್ಯೇಕ ಸಭೆ ಮಾಡಬೇಡಿ. ಇದು ಪಕ್ಷಕ್ಕೆ ಮುಜುಗರ ತರುವ ವಿಚಾರ. ನೀವು ನನಗೆ ನೀಡಿರುವ ಬೇಡಿಕೆ ಬಗ್ಗೆ ನಾನು ಯಡಿಯೂರಪ್ಪರ ಜೊತೆ ಚರ್ಚೆ ಮಾಡುತ್ತೇನೆ. ಕೆಲವರನ್ನು ಬದಲಾವಣೆ ಮಾಡಬೇಕು ಎನ್ನುವ ಶಾಸಕರ ಮಾತಿಗೆ ಕಟೀಲ್ ಸಹಮತ ವ್ಯಕ್ತಪಡಿಸಿದ್ದಾರೆ.
ನೀವು ಹೇಳ್ತಾ ಇರೋದು ಸರಿ ಇದೆ. 1.5 ವರ್ಷ ಆಗಿದೆ ಮಂತ್ರಿಗಳಾಗಿ, ಹೀಗಾಗಿ ಕೆಲವರನ್ನು ಬದಲಾವಣೆ ಮಾಡಿ ಎನ್ನುವ ನಿಮ್ಮ ಮಾತೇನು ತಪ್ಪಲ್ಲ. ಅದರೆ ಸಿಎಂ ಯೋಚನೆ ಏನು ಹೈಕಮಾಂಡ್ ನಾಯಕರ ಯೋಚನೆ ಏನು ಎನ್ನೋದು ಮುಖ್ಯ. ನಾನು ನಿಮ್ಮ ಬೇಡಿಕೆ ಸಲಹೆ ಇದೆಲ್ಲವನ್ನು ದೊಡ್ಡವರ ಜೊತೆ ಚರ್ಚೆ ಮಾಡುತ್ತೇನೆ ಎಂದರು.
ಸಂಪುಟ ವಿಸ್ತರಣೆನಾ? ಪುನಾರಚನೆಯಾ ? ಎಂಬ ಪ್ರಶ್ನೆ
ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್, ಜೆ ಪಿ ನಡ್ಡಾ ಜೊತೆ 20 ನಿಮಿಷ ಮಾತ್ರ ಚರ್ಚೆ ನಡೆದಿದೆ ಎಂದರು.
ಮುಖ್ಯಮಂತ್ರಿಗಳಿಗೆ ರಾಷ್ಟ್ರಿಯ ಅಧ್ಯಕ್ಷರು ಭೇಟಿಗೆ ಸಮಯ ಕೊಟ್ಟಿದ್ದರು. ಯಡಿಯೂರಪ್ಪನವರು ರಾಷ್ಟ್ರೀಯ ಅಧ್ಯಕ್ಷರಿಗೆ ಏನು ಹೇಳಬೇಕೋ ಅದನ್ನ ಹೇಳಿದ್ದಾರೆ ಎಂದರು.