ಸಂಪುಟ ವಿಸ್ತರಣೆ ಹೈಕಮಾಂಡ್ ಒಪ್ಪಿಗೆ ನೀಡದಿರುವುದು ನೋಡಿದ್ರೆ ಬಿಎಸ್‌ವೈ ಬದಲಾವಣೆಯ ಮುನ್ಸೂಚನೆ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ

ತುಮಕೂರು, (ನ.19):  ಕಳೆದ ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಬಹನಿರೀಕ್ಷೀತ ಸಚಿವ ಸಂಪುಟ ಪುನಾರಚನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಖುದ್ದಿ ಸಿಎಂ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿದರೂ ಸಹ ಯಾವುದೇ ಒಪ್ಪಿಗೆ ಸಿಕ್ಕಿಲ್ಲ. ಇದರಿಂದ ಬಿಎಸ್‌ವೈ ಬರಿಗೈಯಲ್ಲೇ ವಾಪಸ್ ಆಗಿದ್ದಾರೆ. 

Add Asianetnews Kannada as a Preferred SourcegooglePreferred

ಇನ್ನು ಈ ಬಗ್ಗೆ ತುಮಕೂರಿನಲ್ಲಿ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಉತ್ಸಾಹ ತೋರಿ ಬಿಜೆಪಿ ಹೈಕಮಾಂಡ್‍ ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಇದು ಮುಖ್ಯಮಂತ್ರಿ ಬದಲಾವಣೆಯ ಮುನ್ಸೂಚನೆ ಎಂದು ಭವಿಷ್ಯ ನುಡಿದಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸುವ ಅಪೇಕ್ಷೆ ಬಿಜೆಪಿಗೆ ಇಲ್ಲ. ಒಂದು ವೇಳೆ ಇದಿದ್ದರೆ ಅವರು ತೆಗೆದುಕೊಂಡು ಹೋಗಿದ್ದ ಪಟ್ಟಿಗೆ ಅನುಮೋದನೆ ‌ನೀಡುತಿದ್ದರು. ಬಿಜೆಪಿಗೆ ‌ಈಗ ಯಡಿಯೂರಪ್ಪ ಬೇಕಾಗಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಹೇಳಿದರು.

ಸಂಪುಟ ವಿಸ್ತರಣೆಯೋ, ಪುನಾರಚನೆಯೋ: ನಡ್ಡಾ ಭೇಟಿ ಬಳಿಕ ಸಿಎಂ ಹೇಳಿದ್ದು ಹೀಗೆ...!

ಯಡಿಯೂರಪ್ಪ ಒಂದು ರಾಜ್ಯವನ್ನು ಪ್ರತಿನಿಧಿಸುವ ವ್ಯಕ್ತಿ. ಕೇವಲ ಐದೇ ಐದು ನಿಮಿಷಗಳ ಭೇಟಿಗೂ ಕೇಂದ್ರ ಗೃಹಸಚಿವರು ಯಡಿಯೂರಪ್ಪ ಅವರಿಗೆ ಅವಕಾಶ ಕೊಟ್ಟಿಲ್ಲ. ಇದು ಕೇವಲ ಯಡಿಯೂರಪ್ಪ ಅವರಿಗೆ ಮಾಡಿದ ಅಪಮಾನವಲ್ಲ. ಇಡೀ ರಾಜ್ಯಕ್ಕೆ ಮಾಡಿದ ಅಪಮಾನ. ಕರ್ನಾಟಕ ಎಂದರೆ ಬಿಜೆಪಿಗೆ ಅಷ್ಟು ತಾತ್ಸಾರವೇ ಎಂದು ಕಿಡಿಕಾರಿದರು.

'ಈಗ ಕಾಡುಗೊಲ್ಲ ಅಭಿವೃದ್ಧಿ ನಿಗಮದ ‌ಹೆಸರನ್ನು ಗೊಲ್ಲ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಿಸುವ ಪ್ರಸ್ತಾಪ ರಾಜ್ಯ ಸರ್ಕಾರದ ಎದುರು ಇದೆ. ನಿಗಮದ ಘೋಷಣೆಯಾಗಿ ಒಂದೂವರೆ ‌ತಿಂಗಳು ಕಳೆದರೂ ಹಣ ನೀಡಿಲ್ಲ. ಬಿಜೆಪಿಯು ಮತದಾರರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಿಂಜರಿದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.