* ಮತ್ತೆ ಮುನ್ನೆಲೆಗೆ ಬಂದ  ಇಂದಿರಾ ಕ್ಯಾಂಟೀನ್‌ ಹೆಸರು*  ಇಂದಿರಾ ಕ್ಯಾಂಟೀನ್‌  ಹೆಸರು ಬದಲಾವಣೆ ಮತ್ತೆ ಧ್ವನಿ ಎತ್ತಿದ ಸಿಟಿ ರವಿ* ಹೆಸರು ಬದಲಿಸುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಂದ ರವಿ

ಮಂಡ್ಯ, (ಆ.25): ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆ. ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡಿದರೆ ಅನ್ನ ಗಂಟಲಲ್ಲಿ ಇಳಿಯುವುದಿಲ್ಲವೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ಇಂದು (ಆ.25) ಮಂಡ್ಯದಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಭಾವಚಿತ್ರ ಇರುವ ಕಾರಣ ಅದನ್ನು ಬದಲಾಯಿಸಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್‌ ಎಂದು ನಾಮಕರಣ ಮಾಡುವ ಬಗ್ಗೆ ಮಾತನಾಡಿದ್ದೇನೆ. ಅನ್ನಪೂರ್ಣೇಶ್ವರಿ ಪಾರ್ವತಿಯ ಅಂಶ, ಹೆಸರು ಬದಲಾದರೂ ಬಡವರಿಗೆ ಅನ್ನ ನೀಡುವ ಉದ್ದೇಶ ಮುಂದುವರಿಯಲಿದೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನಾವು ಬಳೆ ತೊಟ್ಟು ಕೂತಿಲ್ಲ, ಮುಂದೆ ಏನಾಗುತ್ತೋ ನೋಡ್ಲಿ: ಡಿಕೆಶಿ ಸವಾಲು

ಒಂದೇ ಕುಟುಂಬ ಸದಸ್ಯರು ನೂರಾರು ಯೋಜನೆಗಳಗೆ ತಮ್ಮದೇ ಹೆಸರು ಇಟ್ಟುಕೊಂಡಿದ್ದಾರೆ. ಜವಹರಲಾಲ್‌ ನೆಹರೂ, ಇಂದಿರಾಗಾಂಧಿ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಭಾರತ ರತ್ನ ನೀಡಲು 1989- 90ರವರೆಗೆ ಕಾಯಬೇಕಾಯಿತು. ನಮ್ಮ ಬೆಂಬಲದೊಂದಿಗೆ ರಚನೆಯಾಗಿದ್ದ ವಿ.ಪಿ.ಸಿಂಗ್‌ ಸರ್ಕಾರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪ್ರಸ್ತಾವದ ಮೇರೆಗೆ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲಾಯಿತು ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸುವುದು ಶತಸಿದ್ಧ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.