ವಿಪಕ್ಷ ರ್ಯಾಲಿಯಲ್ಲಿ ಬಿಜೆಪಿ ಸಂಸದ : ಪಕ್ಷ ತೊರೆಯುವ ಸೂಚನೆಯೇ..?
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿಗೆ ಒಂದರ ಮೇಲೊಂದು ಶಾಕ್ ಎದುರಾಗುತ್ತಿದೆ. ಇದೀಗ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ವಿಪಕ್ಷ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಅತ್ತ ಒಲವು ಹೊಂದಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ.
ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಬಲವರ್ಧನೆಗೆ ಶನಿವಾರ ಕೋಲ್ಕತಾದಲ್ಲಿ ತೃಣಮೂಲ ಕಾಂಗ್ರೆಸ್ ಬೃಹತ್ ರ್ಯಾಲಿ ನಡೆಯಲಿದ್ದು, ಇದರಲ್ಲಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಪಾಲ್ಗೊಳ್ಳಲಿದ್ದಾರೆ.
ಬಿಜೆಪಿಯಲ್ಲಿದ್ದುಕೊಂಡೆ ಸದಾ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಶತ್ರುಘ್ನ ಸಿನ್ಹಾ ಇದೀಗ ವಿಪಕ್ಷ ಒಕ್ಕೂಟದ ಪ್ರಮುಖ ಭಾಗವಾಗಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ರ್ಯಾಲಿಯಲ್ಲಿ ಭಾಗಿಯಾಗುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಸಿನ್ಹಾ, ನಾನು ಎಂದಿಗೂ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ. ಪಕ್ಷಕ್ಕೆ ಭಲ ತುಂಬಲು ಕಾರ್ಯ ನಿರ್ವಹಿಸುತ್ತೇವೆ. ಬಿಜೆಪಿ ಅತೃಪ್ತ ಮುಖಂಡ ಯಶವಂತ ಸಿನ್ಹಾ ಅವರ ಪ್ರತಿನಿಧಿಯಾಗಿ ಮಾತ್ರವೇ ಈ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಹೊರತು, ಇದರಲ್ಲಿ ಇನ್ನು ಯಾವ ಸೀಕ್ರೇಟ್ ಇಲ್ಲ ಎಂದಿದ್ದಾರೆ.
ಬಿಜೆಪಿ ಸಂಸದನ ಕಾಂಗ್ರೆಸ್ ಒಲವು : ಚುನಾವಣಾ ಬೆನ್ನಲ್ಲೇ ನೀಡ್ತಾರಾ ಶಾಕ್..?
ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದಿಂದ ದೂರ ಇಡಲು ಯತ್ನಿಸುತ್ತಿರುವ ವಿಪಕ್ಷ ಬಣಕ್ಕೆ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ.
ಈಗಾಗಲೇ ದೇಶದ ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಅಧಿಕಾರದಿಂದ ದೂರ ಸರಿಸುವ ಯತ್ನಗಳು ಭರದಿಂದ ಸಾಗಿವೆ. ಇದೇ ನಿಟ್ಟಿನಲ್ಲಿ ವಿಪಕ್ಷಗಳು ಮಹಾಘಟಬಂಧನ್ ಮೂಲಕ ಹೋರಾಟಕ್ಕೆ ಸಜ್ಜಾಗಿವೆ.