Asianet Suvarna News Asianet Suvarna News

Karnataka Politics: 'ಸಿದ್ದು ಸಿಎಂ ಆಗಿದ್ದಾಗ ಒಂದೂ ಹಗರಣ ನಡೆದಿಲ್ಲವೇ, ಚರ್ಚೆಗೆ ಬನ್ನಿ'

*  ಕಾಂಗ್ರೆಸ್‌ ಅವಧಿ ಭ್ರಷ್ಟಾಚಾರದ 1.70 ಲಕ್ಷ ಪುಟಗಳ ದಾಖಲೆ ಇದೆ: ರಮೇಶ್‌
*  ಪಾಲಿಕೆ ಗುತ್ತಿಗೆದಾರರಿಂದ ಶೇ.30 ಕಿಕ್‌ಬ್ಯಾಕ್‌ ಹಗರಣ
*  ಸಿದ್ದರಾಮಯ್ಯಗೆ ಬಿಜೆಪಿ ಸವಾಲಿನ ಪತ್ರ
 

BJP Leader NR Ramesh Open Challenge to Siddaramaiah grg
Author
Bengaluru, First Published Apr 26, 2022, 5:26 AM IST

ಬೆಂಗಳೂರು(ಏ.26):  ಬಿಜೆಪಿ ಸರ್ಕಾರವನ್ನು(BJP Government) 40 ಪರ್ಸೆಂಟ್‌ ಎಂದು ದೂರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅಡಳಿತದಲ್ಲಿ ಯಾವುದೇ ಹಗರಣಗಳು ನಡೆದಿಲ್ಲವೇ? ನೀವು ಮತ್ತು ನಿಮ್ಮ ಸಹದ್ಯೋಗಿಗಳು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಬಹಿರಂಗ ಚರ್ಚೆಗೆ ಬನ್ನಿ. ಕಾಂಗ್ರೆಸ್‌ ಆಡಳಿತವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತೇನೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌(NR Ramesh) ಸವಾಲು ಹಾಕಿದ್ದಾರೆ.

ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಐದು ವರ್ಷಗಳ ಅವಧಿಯಲ್ಲಿ ಸಾವಿರಾರು ಕೋಟಿ ರುಪಾಯಿ ಅವ್ಯವಹಾರ ನಡೆದಿದೆ. ಭ್ರಷ್ಟಾಚಾರ(Corruption) ಕುರಿತಂತೆ ನಗರದ ವಿವಿಧ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ದಾಖಲಾಗಿದ್ದರೂ ಸಿದ್ದರಾಮಯ್ಯ ಅವರು ಕಳೆದ ಕೆಲವು ದಿನಗಳಿಂದ ಬಿಜೆಪಿ ಸರ್ಕಾರವನ್ನು ಭ್ರಷ್ಟಸರ್ಕಾರವೆಂದು ಜರಿಯುತ್ತಿರುವುದು ಯಾವ ನ್ಯಾಯ ಎಂದು ಕಿಡಿಕಾರಿದ್ದಾರೆ.

'ಸಂವಿಧಾನ ಬದಲಾಯಿಸುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು'

2013ರಿಂದ 2018ರ ಅವಧಿಯಲ್ಲಿ ಸಾವಿರಾರು ಕೋಟಿ ರು. ಅವ್ಯವಹಾರ ನಡೆದಿರುವ ಬಗ್ಗೆ ಮತ್ತು ಶೇ.30ರಷ್ಟುಕಿಕ್‌ ಬ್ಯಾಕ್‌ ಪಡೆದಿರುವ ಬಗ್ಗೆ 1,17,000 ಪುಟಗಳ ದಾಖಲೆ ಸಮೇತ ನಿಮಗೆ 97 ದೂರುಗಳನ್ನು ನೀಡಿ ಅವುಗಳ ಸ್ವೀಕೃತಿ ಪಡೆದುಕೊಳ್ಳಲಾಗಿದೆ. .1463 ಕೋಟಿ ವೆಚ್ಚದ ಎನ್‌ಯುಎಚ್‌ಎಂ ಹಗರಣ, ನೂರಾರು ಕೋಟಿ ರು. ಸುವರ್ಣ ಆರೋಗ್ಯ ಟ್ರಸ್ಟ್‌ ಹಗರಣ, .431 ಕೋಟಿ ಕರ್ನಾಟಕ ಏಡ್ಸ್‌ ಪ್ರಿವೆಂಟಿವ್‌ ಸೊಸೈಟಿ ಹಗರಣ ಮತ್ತು ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕುಗೊಳಿಸಿ 154 ಯೋಜನೆಗಳ ಮೂಲಕ ಗುತ್ತಿಗೆದಾರರಿಂದ ಶೇ.30ಕ್ಕಿಂತ ಹೆಚ್ಚು ಕಿಕ್‌ಬ್ಯಾಕ್‌ ಪಡೆದ ಹಗರಣ ಸೇರಿದಂತೆ ಇತರೆ ಭ್ರಷ್ಟಾಚಾರಗಳ ಕುರಿತು ದೂರು ನೀಡಲಾಗಿದೆ ಎಂದಿದ್ದಾರೆ.

ಖುದ್ದು ಸಿದ್ದರಾಮಯ್ಯ ವಿರುದ್ಧವೇ ಭ್ರಷ್ಟಾಚಾರ ನಿಗ್ರಹ ದಳದಲ್ಲಿ 67 ಪ್ರಕರಣಗಳು ಮತ್ತು ಲೋಕಾಯುಕ್ತದಲ್ಲಿ 51 ಪ್ರಕರಣಗಳನ್ನು ದಾಖಲಿಸಿದ್ದೇನೆ. ನಾನು ದಾಖಲಿಸಿದ್ದ 97 ಪ್ರಕರಣಗಳ ಪೈಕಿ 26 ಪ್ರಕರಣಗಳಲ್ಲಿ ನಮಗೆ ಗೆಲುವು ದೊರೆತಿದೆ. ಸಿದ್ದರಾಮಯ್ಯ ಸಹದ್ಯೋಗಿಗಳು ಕಬಳಿಸಿದ್ದ .8350 ಕೋಟಿ ಮೊತ್ತದ ಸ್ವತ್ತುಗಳನ್ನು ಸರ್ಕಾರ ವಾಪಸ್‌ ಪಡೆದುಕೊಂಡಿದೆ. ಅದೇ ರೀತಿ ಕಾಂಗ್ರೆಸ್‌(Congress) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ 13 ಮಂದಿ ಮತ್ತು 21 ಶಾಸಕರ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಕಾಂಗ್ರೆಸ್‌ ಸರ್ಕಾರದ ಹಗರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಚ್‌ನಲ್ಲಿ 53 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಲಾಗಿದೆ. ಇಷ್ಟೆಲ್ಲಾ ಭ್ರಷ್ಟಾಚಾರ ನಡೆಸಿರುವ ಸಿದ್ದರಾಮಯ್ಯ ಅವರು ಸರ್ಕಾರ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ರಮೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios