ರಾಜನಾದವನು ಅವಕಾಶವಾದಿಗಳು ಮತ್ತು ನಿಷ್ಠರ ನಡುವಿನ ವ್ಯತ್ಯಾಸ ಅರಿಯಬೇಕು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಹೇಳಿಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪರೋಕ್ಷ ಟಾಂಗ್‌ 

ನವದೆಹಲಿ (ಜೂ.06): ರಾಜನಾದವನು ಅವಕಾಶವಾದಿಗಳು ಮತ್ತು ನಿಷ್ಠರ ನಡುವಿನ ವ್ಯತ್ಯಾಸ ಅರಿಯಬೇಕು. ಅದರಂತೆ ಆಡಳಿತ ನಡೆಸಬೇಕು, ಇಲ್ಲವಾದರೆ ಅನಾಹುತ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹೊಗೆಯಾಡಲು ಶುರುವಾದ ನಡುವೆಯೇ ಫೇಸ್‌ಬುಕ್‌ನಲ್ಲಿ ಅಳಿಯ ರಾಮರಾಯನ ಕಥೆ ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಎಲ್ಲಾ ಕಾಲಕ್ಕೂ ಅನ್ವಯವಾಗುವ ಕಥೆ. ನಾನು ಅದನ್ನು ಓದಿದ್ದು, ಚೆನ್ನಾಗಿತ್ತು. ಹಾಗಾಗಿ ಫೇಸ್‌ಬುಕ್‌ಗೆ ಹಾಕಿದೆ. ಈ ಕಥೆಯನ್ನು ಅವರವರ ಭಾವನೆಗಳಿಗೆ ತಕ್ಕಂತೆ ಕೆಲವರು ಯೋಚಿಸಿರಬಹುದು. ಆ ಬಗ್ಗೆ ನಾನು ಏನೂ ಹೇಳಲ್ಲ ಎಂದರು.

ಬಿಜೆಪಿ ಸಭೆಯಲ್ಲಿ ಆರೋಗ್ಯ ಕಾರ‍್ಯಕರ್ತರ ಸೃಷ್ಟಿವಿಚಾರ ಚರ್ಚೆ

ಕೊರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿ ಜೀವ ಉಳಿಸುವ, ಜೀವನ ಪುನರ್‌ ರೂಪಿಸುವ ಸವಾಲು ನಮ್ಮ ಮುಂದಿದೆ. ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಚರ್ಚೆ ನಡೆದಿದೆ. ಆರೋಗ್ಯ ಕಾರ್ಯಕರ್ತರ ಸೃಷ್ಟಿ, ಉದ್ಯೋಗ ಸೃಷ್ಟಿ, ಹೊಸ ಬದುಕು ಕಟ್ಟುವುದು ಹೇಗೆನ್ನುವ ವಿಚಾರಗಳೂ ಚರ್ಚೆಯಾಗಿವೆ ಎಂದು ಬಿಜೆಪಿ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಹೇಳಿದರು.

ವಿಜಯೇಂದ್ರ ದಿಲ್ಲಿಗೆ ಹೋಗಿದ್ಯಾಕೆ? ಹೈಕಮಾಂಡ್ ಹೇಳಿದ್ದೇನು? ಹೊಸ ಬಾಂಬ್ ಸಿಡಿಸಿದ ಯತ್ನಾಳ್ ..

ದೆಹಲಿಯಲ್ಲಿ ಶನಿವಾರ ನಡೆದ ಬಿಜೆಪಿ ಪ್ರಧಾನ ಕಾರ‍್ಯದರ್ಶಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ವಿಚಾರದಲ್ಲಿ ಬಿಜೆಪಿ ಹತ್ತಾರು ರೂಪದಲ್ಲಿ ಜನರ ನೆರವಿಗೆ ಬಂದಿದೆ. ದೇಶದ 1,888 ಜಿಲ್ಲೆಗಳಲ್ಲಿ 2,30,367 ಸ್ಥಳಗಳಲ್ಲಿ ಸೇವೆಯೇ ಸಂಘಟನೆ ಅಡಿ ವಿವಿಧ ಸೇವೆಗಳನ್ನು ತಲುಪಿಸಿದೆ ಎಂದರು. ಆದರೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಸೂಟ್‌ಕೇಸ್‌ಪಾರ್ಟಿ, ಅಧಿಕಾರ ಇಲ್ಲದಾಗ ಟೂಲ… ಕಿಟ್‌ ಪಾರ್ಟಿಯಾಗಿದೆ ಎಂದು ಕಿಡಿಕಾರಿದರು.

ವಿಜಯನಗರದ ಅಳಿಯ ರಾಮರಾಯ ಸಾಹಸಿಯಾಗಿದ್ದರೂ ಸ್ವಾರ್ಥಿಯಾಗಿದ್ದ. ಜತೆಗೆ ಹೊಗಳುಭಟರ ಮಾತಿಗೆ ಮರಳಾಗುತ್ತಿದ್ದ. ಹಾಗಾಗಿ ಆದಿಲ್‌ಶಾಹಿಗಳು ವಿಜಯನಗರ ಸಾಮ್ರಾಜ್ಯ ಕೊಳ್ಳೆಹೊಡೆಯುವುದು ಸುಲಭವಾಯಿತು ಎಂದು ಸಿ.ಟಿ.ರವಿ ಬರೆದುಕೊಂಡಿದ್ದರು.