‘ರಾಹುಲ್‌ ಗಾಂಧಿ ನಾಯಕರಲ್ಲ. ಯಾರೂ ಅವರನ್ನು ನಾಯಕ ಎಂದು ಒಪ್ಪಿಕೊಂಡಿಲ್ಲ. ಆದರೆ, ನರೇಂದ್ರ ಮೋದಿ ಅವರನ್ನು ಕರ್ನಾಟಕ ಮತ್ತು ದೇಶದ ಜನತೆ ಒಪ್ಪಿಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 150 ಸ್ಥಾನಗಳನ್ನು ಗೆದ್ದು, ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು.

ಹಾವೇರಿ (ಅ.16): ರಾಹುಲ್‌ ಗಾಂಧಿ ನಾಯಕನಲ್ಲ, ಯಾರೂ ಅವರನ್ನು ನಾಯಕ ಎಂದು ಒಪ್ಪಿಕೊಂಡಿಲ್ಲ. ಆದರೆ, ನರೇಂದ್ರ ಮೋದಿ ಅವರನ್ನು ಕರ್ನಾಟಕ ಮತ್ತು ದೇಶದ ಜನತೆ ಒಪ್ಪಿಕೊಂಡಿದ್ದಾರೆ. ಕರ್ನಾಟಕದಲ್ಲಿ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌ ಹೇಳಿದರು. ಬಿಜೆಪಿ ಸಂಕಲ್ಪ ಸಭೆಯಲ್ಲಿ ಪಾಲ್ಗೊಳ್ಳಲು ಶನಿವಾರ ರಟ್ಟೀಹಳ್ಳಿ ತಾಲೂಕಿನ ಮಾಸೂರಿಗೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. 2023ರ ಚುನಾವಣೆಗೆ ತಯಾರಿ ನಡೆದಿದೆ. 

Add Asianetnews Kannada as a Preferred SourcegooglePreferred

ಕರ್ನಾಟಕದ ಜನತೆ ನರೇಂದ್ರ ಮೋದಿಯವರ ಜೊತೆಗಿದ್ದಾರೆ. ಆದರೆ, ರಾಹುಲ್‌ ಗಾಂಧಿಯನ್ನು ಯಾರೂ ನಾಯಕ ಎಂದು ಒಪ್ಪಿಕೊಂಡಿಲ್ಲ. ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಗೆ ಐತಿಹಾಸಿಕ ಯಶಸ್ಸು ಸಿಕ್ಕಿದೆ. ಗೋವಾ, ಮಣಿಪುರ, ಉತ್ತರಾಖಂಡನಲ್ಲಿ ಗೆಲುವು ಸಿಕ್ಕಿದೆ. ಗುಜರಾತ್‌ ಮತ್ತು ಉತ್ತರಾಂಚಲದಲ್ಲಿಯೂ ನಾವು ಗೆಲ್ಲಲು ಹೋಗುತ್ತಿದ್ದೇವೆ. ರಾಜ್ಯದಲ್ಲೂ 150 ಸ್ಥಾನಗಳನ್ನು ಗೆಲ್ಲುತ್ತೇವೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. 

ಖರ್ಗೆ ಮಾತು ಕಲಬುರಗಿ ಜನಾನೇ ಕೇಳಿಲ್ಲ, ಇನ್ನು ರಾಜಸ್ಥಾನದಲ್ಲಿ ಕೇಳ್ತಾರಾ?: ಅರುಣ ಸಿಂಗ್‌ ವ್ಯಂಗ್ಯ

ಕಾಂಗ್ರೆಸ್‌ನ ಇತಿಹಾಸ ಎಲ್ಲಿಯೂ ಮರುಕಳಿಸುತ್ತಿಲ್ಲ. ಕಾಂಗ್ರೆಸ್‌ನದ್ದು ಸೋಲುವ ಇತಿಹಾಸ. ಉತ್ತರಾಖಂಡ, ಗೋವಾ, ಉತ್ತರ ಪ್ರದೇಶ, ಮಣಿಪುರದಲ್ಲಿ ಕಾಂಗ್ರೆಸ್‌ ಸೋತಿದೆ ಎಂದು ಟೀಕಿಸಿದರು. ರಾಹುಲ್‌ ಗಾಂಧಿ ಭಾರತ ಜೋಡೋ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಹುಲ್‌ ಗಾಂಧಿ ಅವರು 13 ದಿನಗಳಿಂದ ಕರ್ನಾಟಕದಲ್ಲಿದ್ದಾರೆ. ಕರ್ನಾಟಕದ ಬಗ್ಗೆ ತಿಳಿದುಕೊಂಡಿರಬಹುದು. ಹೀಗಿರುವಾಗ ಪೇಪರ್‌ ನೋಡದೇ ಭಾಷಣ ಮಾಡೋದಕ್ಕೆ ಏನು ಕಷ್ಟಇದೆ. ಆದರೆ, ರಾಹುಲ್‌ ಗಾಂಧಿ ಕರ್ನಾಟಕವನ್ನು ತಿಳಿದುಕೊಂಡಿಲ್ಲ. 

ಮುಂಜಾನೆಯ ವಾಕಿಂಗ್‌ ಮತ್ತು ಕಸರತ್ತು ಮಾಡಲು ಅವರು ಬಂದಿದ್ದಾರೆ ಎಂದು ಲೇವಡಿ ಮಾಡಿದರು. ಕವಿ ಸರ್ವಜ್ಞ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿದ ಮಹಾನ್‌ ವ್ಯಕ್ತಿ. ಸಮಾಜದಲ್ಲಿನ ಭೇದಭಾವ ತೊಡೆದು ಹಾಕಲು ಅವರು ಶ್ರಮಿಸಿದ್ದರು. ಹಳ್ಳಿಹಳ್ಳಿಗಳಲ್ಲಿ ಓಡಾಡಿ ಜಾಗೃತಿ ಮೂಡಿಸಿದರು. ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದು ನನ್ನ ಸೌಭಾಗ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅರುಣ ಸಿಂಗ್‌ ಹೇಳಿದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಇದ್ದರು.

ಮಾಸೂರಿನಲ್ಲಿ ಸಂಕಲ್ಪ ಸಭೆ: ಬಳಿಕ, ರಟ್ಟಿಹಳ್ಳಿ ತಾಲೂಕಿನ ಮಾಸೂರಿಗೆ ತೆರಳಿ ಕವಿ ಸರ್ವಜ್ಞನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ, ಮಾಸೂರಿನ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಇತರರು ಹಾಜರಿದ್ದರು.

ಕಾಂಗ್ರೆಸ್‌ ಲೀಡರ್‌ಲೆಸ್‌ ಪಾರ್ಟಿ, ಸಿದ್ದು ಡರ್ಟಿ ಪಾಲಿಟಿಕ್ಸ್‌: ಅರುಣ ಸಿಂಗ್‌

ಯತ್ನಾಳ್‌ ಬಗ್ಗೆ ಗರಂ: ಯಡಿಯೂರಪ್ಪನವರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರುತ್ತಿದ್ದರೂ ಬಿಜೆಪಿ ಹೈಕಮಾಂಡ್‌ ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಗರಂ ಆದ ಅರುಣ್‌ಸಿಂಗ್‌, ಕೆಲವರು ಹೀಗೂ ಇರುತ್ತಾರೆ. ಮಾತಾಡೋದೆ ಅವರ ಕೆಲಸ, ಅದು ಅವರ ಹವ್ಯಾಸ. ಯತ್ನಾಳ್‌ ಅವರಿಗೆ ಪಕ್ಷದಿಂದ ಈಗಾಗಲೇ ನೋಟಿಸ್‌ ಜಾರಿಯಾಗಿದೆ. ಆದರೂ ಕಲಿಯುವುದಿಲ್ಲ. ತಿಳಿದುಕೊಳ್ಳಲ್ಲ ಅಂದ್ರೆ ಏನು ಮಾಡೋದು ಎಂದರು.