ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಪಕ್ಷ ಖಾಲಿ ಆಗಲಿದ್ದು, ಆಗ ಕಾರ್ಯಕರ್ತರ ರಕ್ಷಣೆಗೆ ಯಾರೇ ನಾಯಕರು ಇರುವುದಿಲ್ಲ. ನಮ್ಮ ತತ್ವ, ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್‌ ಸೇರ್ಪಡೆಯಾಗಬಹುದು.

ಮಂಗಳೂರು (ನ.16): ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಪಕ್ಷ ಖಾಲಿ ಆಗಲಿದ್ದು, ಆಗ ಕಾರ್ಯಕರ್ತರ ರಕ್ಷಣೆಗೆ ಯಾರೇ ನಾಯಕರು ಇರುವುದಿಲ್ಲ. ನಮ್ಮ ತತ್ವ, ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್‌ ಸೇರ್ಪಡೆಯಾಗಬಹುದು. ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ನಮ್ಮ ನಾಯಕತ್ವ ಹುಡುಕಿಕೊಂಡು ಪಕ್ಷಕ್ಕೆ ಬರಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯೇಂದ್ರ ಅವರಿಗೆ ಶುಭ ಹಾರೈಸುತ್ತೇನೆ. ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್‌ ಮೇಲೆ ಒಳ್ಳೆಯ ಪರಿಣಾಮವೇ ಆಗಲಿದೆ ಎಂದರು. ವಿಜಯೇಂದ್ರ ಅಧಿಕಾರ ಸ್ವೀಕಾರ ವೇಳೆ ಬಿಜೆಪಿ ಅಸಮಾಧಾನ ಬಹಿರಂಗವಾಗಿದೆ. ಸಿ.ಟಿ.ರವಿ, ಯತ್ನಾಳ್‌, ಸುನಿಲ್ ಕುಮಾರ್‌ ಸಮಾರಂಭಕ್ಕೆ ಗೈರಾಗಿದ್ದಾರೆ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ, ನಾಯಕತ್ವದ ಕೊರತೆ ಕಾರಣಕ್ಕೆ ಬಿಜೆಪಿ ವರಿಷ್ಠರು ವಿಜಯೇಂದ್ರ ಆಯ್ಕೆ ಮಾಡಿದ್ದಾರೆ ಎಂದರು.

ವಿಜಯೇಂದ್ರ ಪಟ್ಟಾಭಿಷೇಕ: ಮತ್ತೊಮ್ಮೆ ಬಿಎಸ್‌ವೈ ಆಶೀರ್ವಾದ ಪಡೆದುಕೊಂಡ ಬಿಜೆಪಿ ರಾಜ್ಯಾಧ್ಯಕ್ಷ!

ಕುಟುಂಬ ರಾಜಕಾರಣ ಟೀಕಿಸಿದ್ದ ಮೋದಿ ಮಾತು ಏನಾಯ್ತು?: ‘ಕೇಂದ್ರ ಬಿಜೆಪಿಯು ಬಿ.ಎಸ್‌. ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲು ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕ ಮಾಡುವ ನಾಟಕ ಆಡಿದೆ. ಜತೆಗೆ ಬಿ.ಎಲ್. ಸಂತೋಷ್‌ ಅವರಿಗೆ ನೀವು ಕೇಶವ ಕೃಪಾದಲ್ಲೇ ಇರಿ ಎಂದು ಸ್ಪಷ್ಟ ಸಂದೇಶ ರವಾನಿಸಿದೆ’ ಎಂದು ಕಾಂಗ್ರೆಸ್‌ ನಾಯಕರು ಲೇವಡಿ ಮಾಡಿದ್ದಾರೆ. ಅಲ್ಲದೆ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ನಿಂತು ಓಲೈಕೆ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಒಪ್ಪುವುದಿಲ್ಲ ಎಂಬ ಮಾತು ಏನಾಯಿತು? ಬಿ.ವೈ. ವಿಜಯೇಂದ್ರ ನೇಮಕದ ಮೂಲಕ ಮೋದಿ ಅವರು ತಮ್ಮ ಮಾತಿನ ಮೇಲೆ ತಾವೇ ನಿಲ್ಲುವುದಿಲ್ಲ ಎಂದು ಸಾಬೀತು ಮಾಡಿದಂತಾಯಿತಲ್ಲವೇ?’ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಶನಿವಾರ ಪ್ರತ್ಯೇಕವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರಾದ ಎಂ.ಬಿ. ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್‌ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಲ್ಲಿ ತೋರಿದ ಧೋರಣೆಯನ್ನು ವ್ಯಂಗ್ಯ ಮಾಡಿದರು. ಸಚಿವ ಎಂ.ಬಿ. ಪಾಟೀಲ್‌ ಮಾತನಾಡಿ ಯಡಿಯೂರಪ್ಪ ಅವರನ್ನ ಬಳಸಿಕೊಳ್ಳಲು ವಿಜಯೇಂದ್ರ ನೇಮಕವೊಂದು ನಾಟಕ. ಬಿಜೆಪಿಗೆ ಯಡಿಯೂರಪ್ಪ ಅಥವಾ ವಿಜಯೇಂದ್ರ ಅವರಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶವಿಲ್ಲ. ಲೋಕಸಭೆ ಚುನಾವಣೆ ಗೆಲ್ಲಲು ಈ ನಾಟಕ ಮಾಡಿದ್ದಾರೆ. ಲಿಂಗಾಯತರು ದಡ್ಡರಿಲ್ಲ, ಎರಡು ಬಾರಿ ಅಧಿಕಾರದಿಂದ ಕೆಳಗಿಳಿಸಿರುವುದನ್ನು ಮರೆತಿಲ್ಲ ಎಂದು ಹೇಳಿದರು.

ಬಿವೈವಿ ಪದಗ್ರಹಣಕ್ಕೆ ಸೋಮಣ್ಣ, ಎಸ್‌ಟಿಎಸ್‌, ರವಿ, ಯತ್ನಾಳ, ಲಿಂಬಾವಳಿ, ಬೆಲ್ಲದ ಚಕ್ಕರ್‌!

ಬಿ.ಎಲ್. ಸಂತೋಷ್‌ಗೆ ಸ್ಪಷ್ಟ ಸಂದೇಶ: ಪ್ರಿಯಾಂಕ್ ಖರ್ಗೆ ಮಾತನಾಡಿ, ವಿಜಯೇಂದ್ರ ನೇಮಕದ ಮೂಲಕ ಮೂಲಕ ಹೈಕಮಾಂಡ್​ ಬಿ.ಎಲ್. ಸಂತೋಷ್​ ಅವರಿಗೆ ನೀವು ಕೇಶವ ಕೃಪಾದಲ್ಲೇ ಇರಿ ಎಂದು ಸ್ಪಷ್ಟ ಸಂದೇಶ ಕಳುಹಿಸಿದೆ. ತನ್ಮೂಲಕ ಯಡಿಯೂರಪ್ಪ ವಿರೋಧಿಗಳ ಮೇಲೆ ಮೋದಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದಾರೆ. ಮತ್ತೊಂದೆಡೆ, ಮೋದಿ ಅವರು ಕೆಂಪು ಕೋಟೆ ಮೇಲೆ ನಿಂತು ಭ್ರಷ್ಟಾಚಾರ, ಓಲೈಕೆ ರಾಜಕಾರಣ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಉಪದೇಶ ಮಾಡುತ್ತಿದ್ದರು. ಇದೀಗ ಯಾವ ನೈತಿಕತೆ ಮೇಲೆ ವಿಜಯೇಂದ್ರ ಅವರನ್ನು ನೇಮಿಸಿದ್ದಾರೆ. ಭ್ರಷ್ಟಾಚಾರ ತಡೆಯಬೇಕು ಎಂದು ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಿದರು. ಅವೆಲ್ಲಾ ನೆನಪಿಲ್ಲವೇ ಎಂದು ಪ್ರಶ್ನಿಸಿದರು.