Asianet Suvarna News Asianet Suvarna News

ಬಿಜೆಪಿ-ಜೆಡಿಎಸ್‌ನವರಿಗೆ ಅಧಿಕಾರ ಸಿಕ್ಕರೂ ಏನೂ ಮಾಡಲಿಲ್ಲ: ಡಿ.ಕೆ.ಶಿವಕುಮಾರ್

ಇಡೀ ದೇಶದಲ್ಲೇ ಎಲ್ಲೂ ನೀಡದಂತಹ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೀಡಿದೆ. ನುಡಿದಂತೆ ನಡೆದಿದ್ದು, ಇನ್ನೊಮ್ಮೆ ನಿಮ್ಮ ಮುಂದೆ ಬರುವ ಧೈರ್ಯವನ್ನು ನಮ್ಮ ಯೋಜನೆಗಳು ನಮಗೆ ನೀಡಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. 

BJP JDS got power but did nothing Says DK Shivakumar gvd
Author
First Published Mar 4, 2024, 11:03 PM IST

ಚನ್ನಪಟ್ಟಣ (ಮಾ.04): ಇಡೀ ದೇಶದಲ್ಲೇ ಎಲ್ಲೂ ನೀಡದಂತಹ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೀಡಿದೆ. ನುಡಿದಂತೆ ನಡೆದಿದ್ದು, ಇನ್ನೊಮ್ಮೆ ನಿಮ್ಮ ಮುಂದೆ ಬರುವ ಧೈರ್ಯವನ್ನು ನಮ್ಮ ಯೋಜನೆಗಳು ನಮಗೆ ನೀಡಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರ, ಉಳುವವನೇ ಭೂ ಒಡೆಯ, ಬಡವರಿಗೆ ಸೂರು, ಇದೀಗ ಉಚಿತ ವಿದ್ಯುತ್ ಸೇರಿದಂತೆ ಪಂಚ ಗ್ಯಾರಂಟಿಗಳನ್ನು ನೀಡಲಾಗಿದೆ. ಜನರಿಗೆ ನೆರವಾಗುವ ಯೋಜನೆಗಳನ್ನು ನೀಡಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದರು.

ಅಧಿಕಾರ ಸಿಕ್ಕರೂ ಮಾಡಲಿಲ್ಲ: ಬಿಜೆಪಿ-ಜೆಡಿಎಸ್‌ನವರಿಗೆ ಅಧಿಕಾರ ಸಿಕ್ಕಿತ್ತು. ಆದರೆ, ಅಧಿಕಾರ ಸಿಕ್ಕರೂ ಅವರು ಜನರಿಗೆ ಉಪಯೋಗವಾಗುವಂತ ಯಾವುದೇ ಯೋಜನೆಯನ್ನು ನೀಡಲಿಲ್ಲ. ಇದೀಗ ನೋಡಿದರೆ, ಕುಮಾರಸ್ವಾಮಿ, ಯೋಗೇಶ್ವರ್ ಇಬ್ಬರು ತಬ್ಬಾಡುತ್ತಿದ್ದಾರೆ. ಚನ್ನಪಟ್ಟಣಕ್ಕೂ ನನಗೂ ಅವಿನಾಭಾವ ಸಂಬಂಧ ಇದೆ. ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ೪ ಚುನಾವಣೆಯಲ್ಲಿ ವಿರುಪಾಕ್ಷಿಪುರ ಹೋಬಳಿಯ ಜನ ನನನ್ನು ಗೆಲ್ಲಿಸಿದ್ದಾರೆ ಎಂದರು.

ಕಾಂಗ್ರೆಸ್‌ ಎಫ್ಎಸ್‌ಎಲ್ ವರದಿ ಒಪ್ಪುವ ಸ್ಥಿತಿಯಲ್ಲಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಗ್ಯಾರಂಟಿ ಬಗ್ಗೆ ಹಗುರ ಮಾತು: ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು. ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕ ಹಿನ್ನೆಲೆಯಲ್ಲಿ ಇಂದು ಇಂತಹ ಕಾರ್ಯಕ್ರಮಗಳನ್ನು ನೀಡಲಾಗಿದೆ. ಗೃಹಲಕ್ಷ್ಮೀ ಯೋಜನೆ ಕುರಿತು ವಿರೋಧ ಪಕ್ಷಗಳವರು ಅತ್ತೆ-ಸೊಸೆಗೆ ಜಗಳ ತಂದಿಡುವ ಯೋಜನೆ ಎಂದರು. ಆದರೆ, ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದರು.

ಶಕ್ತಿ ಯೋಜನೆಯಿಂದ ದೇವಾಲಯಗಳಿಗೆ ಜನ ಹೋಗುವುದು ಹೆಚ್ಚಾಗಿದೆ. ಇದರಿಂದ ಹೋಟೆಲ್‌ಗಳ ವ್ಯಾಪಾರ ವೃದ್ಧಿಯಾಗಿದೆ. ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಲು ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ರಕ್ತ ಮತ್ತು ಹಣ ಸರ್ಕ್ಯೂಲೇಟ್ ಆಗುತ್ತಿರಬೇಕು. ಆ ನಿಟ್ಟಿನಲ್ಲಿ ಯೋಜನೆಗಳಿಂದ ಲಾಭವಾಗಿದೆ. ದೇವರು ವರ ಅಥವಾ ಶಾಪ ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ಕೊಟ್ಟ ಅವಕಾಶ ಬಳಸಿಕೊಂಡು ನಿಮ್ಮ ಸೇವೆ ಮಾಡುವ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು. ವಿದ್ಯುತ್ ಸಮಸ್ಯೆ ಪರಿಹರಿಸಲು ೪೦ ಸ್ಟೇಷನ್ ಮಾಡಿಸಿದ್ದೇನೆ. ಅದು ಹಾಸನ, ಮಂಡ್ಯದಲ್ಲಿ ಇದೆಯಾ, ಇದು ನೀವು ನೀಡಿದ ಅಧಿಕಾರದಿಂದ ಸಾಧ್ಯವಾಗಿದೆ. 

ನಿಮ್ಮ ಬದುಕು ಹಸನಾಗಿಸಲು ನಾವು ಬದ್ಧರಾಗಿದ್ದೇವೆ. ಯಾರೂ ಕೊನೆಯವರೆಗೆ ರಾಜನಾಗಿ, ಶ್ರೀಮಂತನಾಗಿ ಇರಲು ಸಾಧ್ಯವಿಲ್ಲ. ನಿಮ್ಮನ್ನು ಸಬಲರಾಗಿಸುವ ಉದ್ದೇಶದಿಂದ ಪ್ರತಿತಿಂಗಳು ಐದಾರು ಸಾವಿರ ಪಡೆಯುವಂತ ಕಾರ್ಯಕ್ರಮ ನೀಡಲಾಗಿದೆ ಎಂದರು. ಇಂದು ಈ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ತಾಯಂದಿರು ಬಂದಿರುವುದೇ ನನ್ನ ಪುಣ್ಯ, ಇಲ್ಲಿ ಎಷ್ಟೋ ತಾಯಂದಿರು ನಿಮ್ಮ ಯೋಜನೆಗಳು ನಮಗೆ ತಲುಪುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದಕ್ಕಿಂತ ಇನ್ನೇನು ಬೇಕು. ಸಾಧನೆ ಮಾಡಿದ ತೃಪ್ತಿ ಇದೆ. ಯಾರು ಒಂದಾದರೂ ಚಿಂತೆ ಇಲ್ಲ. ಜೆಡಿಎಸ್-ಬಿಜೆಪಿ ಒಂದಾದರೂ ಚಿಂತೆ ಇಲ್ಲ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸುತ್ತೇವೆ ಎಂದರು.

ಸರ್ಕಾರದ ಸೌಲಭ್ಯದಿಂದ ಜನರ ಕುಂದು ಕೊರತೆ ನಿವಾರಣೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಸುಧಾಮದಾಸ್, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಕೆ.ರಾಜು, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್, ಚನ್ನಪಟ್ಟಣ ಉಸ್ತುವಾರಿ ದುಂತೂರು ವಿಶ್ವನಾಥ್, ರಾಮಣ್ಣ ಇತರರಿದ್ದರು.

Follow Us:
Download App:
  • android
  • ios