ಮೈತ್ರಿ ಆಗುವುದೇ ಶಕ್ತಿ ಹೆಚ್ಚಿಸಿಕೊಳ್ಳಲು, ಈ ಬಗ್ಗೆ ರಾಜ್ಯಾಧ್ಯಕ್ಷರು, ದೇವೇಗೌಡರು ಎಲ್ಲಾ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಧೂಳ್ ಮಾಡಿದಂತೆ ಮುಂದುವರಿದ ಭಾಗ ಇರುತ್ತದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.
ಬೆಂಗಳೂರು (ಅ.04): ಮೈತ್ರಿ ಆಗುವುದೇ ಶಕ್ತಿ ಹೆಚ್ಚಿಸಿಕೊಳ್ಳಲು, ಈ ಬಗ್ಗೆ ರಾಜ್ಯಾಧ್ಯಕ್ಷರು, ದೇವೇಗೌಡರು ಎಲ್ಲಾ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಧೂಳ್ ಮಾಡಿದಂತೆ ಮುಂದುವರಿದ ಭಾಗ ಇರುತ್ತದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆಯನ್ನು ಸ್ವಾಗತಿಸಿದರು. ಜಾತಿಗಣತಿಯಲ್ಲಿ ಬಿಜೆಪಿಯಿಂದ ಗೊಂದಲ ಸೃಷ್ಟಿ ಎಂಬ ಸಚಿವ ಕೃಷ್ಣ ಭೈರೇಗೌಡ ಆರೋಪ ವಿಚಾರವಾಗಿ, ಯಾವುದನ್ನೂ ನೆಮ್ಮದಿಯಿಂದ ಮಾಡಬಾರದು ಎಂಬುದು ಕಾಂಗ್ರೆಸ್ ನಾಯಕರ ಉದ್ದೇಶ. ಅಂತಹ ಮಹಾನುಭಾವರೇ ಕಾಂಗ್ರೆಸ್ನಲ್ಲಿ ಇರುವುದು. ಸಮೀಕ್ಷಾ ಮಾಹಿತಿ ಕಡ್ಡಾಯ ಅಲ್ಲ ಎಂಬ ಆದೇಶ ಕೋರ್ಟ್ ನಿಂದ ಆಗಿದೆ. ಜಾತಿ ಗಣತಿ ಕಾನೂನಾತ್ಮಕವಾಗಿ, ಸಮಾಜಕ್ಕೆ ಪೂರಕವಾಗಿ ಇಲ್ಲ ಎಂದರು.
ಗಣತಿ ಮಾಡುತ್ತಿದ್ದಾರೆ, ಎಲ್ಲರೂ ಭಾಗವಹಿಸಬೇಕು ಅಷ್ಟೇ. ಕಾಂಗ್ರೆಸ್ ದುರುದ್ದೇಶದಿಂದ ಗಣತಿ ಮಾಡುತ್ತಿದ್ದಾರೆ, ನಾವು ಸದುದ್ದೇಶದಿಂದ ಭಾಗವಹಿಸುತ್ತಿದ್ದೇವೆ. ಸೌಲಭ್ಯ ಹಿಂಪಡೆದು ಮೂರು ನಾಮ ಹಾಕಲು ರೆಡಿ ಇದ್ದಾರೆ ಎಂದು ಜನರಿಗೆ ಭಯ ಹುಟ್ಟಿದೆ. ಎಲ್ಲಾ ಸೌಲಭ್ಯಗಳನ್ನು ಹಿಂಪಡೆಯಲು ಮಾಡುತ್ತಿರುವ ಹುನ್ನಾರ ಎಂಬುದು ಸ್ಪಷ್ಟ. ಗಣತಿಗೆ ಕಾನೂನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಕೇಂದ್ರ ಸರ್ಕಾರ ಕಾನೂನಾತ್ಮಕವಾಗಿ ಕಡ್ಡಾಯವಾಗಿ ಮಾಡುವ ಗಣತಿಗೆ ಮಾನ್ಯತೆ ಇದೆ. ನಾವು ಇವರಂತೆ ಎಡವಟ್ಟು ಗಿರಾಕಿಗಳು ಅಲ್ಲ. ಸ್ವ ಇಚ್ಚೆಯ ಮಾಹಿತಿ ಎಂದು ಕೋರ್ಟ್ ಹೇಳಿದ್ದರೂ ನಾವು ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಹೇಳುತ್ತಿದ್ದೇವೆ. ಇವರ ತಪ್ಪಿನಲ್ಲಿ ಇನ್ನೊಂದು ತಪ್ಪು ಆಗುವುದು ಬೇಡ. ಕಾಂಗ್ರೆಸ್ ನವರು ಸಮಾಜಮುಖಿಗಳಲ್ಲ. ಸಮಾಜ ಏನಾದರೂ ಆಗಲಿ, ಅಧಿಕಾರ ಹಿಡಿಯಬೇಕು ಅಷ್ಟೇ ಎಂದು ತಿಳಿಸಿದರು.
ರಸ್ತೆ ಗುಂಡಿ ಮುಚ್ಚಲು ಹಣ ಬಿಡುಗಡೆ ಬಗ್ಗೆ ಡಿಸಿಎಂ ಟ್ವೀಟ್ ವಿಚಾರವಾಗಿ, ನೀವು ಗುಂಡಿ ಮುಚ್ಚದೇ ನಮ್ಮ ಮೇಲೆ ಆರೋಪ ಮಾಡುತ್ತಿದ್ದೀರಿ. 750 ಕೋಟಿ ಗುಂಡಿ ಮುಚ್ಚಲು ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಯಾವ ಹಣ, ಎಲ್ಲಿಂದ ಬಿಡುಗಡೆ ಆಗಿದೆ, ಟೆಂಡರ್ ಆಗಿದ್ಯಾ? ಯಾರು ಕೆಲಸ ಮಾಡಿದ್ದಾರೆ ಅಂತಾ ಮಾಹಿತಿ ಕೊಡಬೇಕು. ಬರೀ ಬಾಯಿಯಲ್ಲಿ ಮಾತ್ರ ಹಣ ಬಿಡುಗಡೆ ಮಾಡಿದ್ದೀರಾ...? ನಮ್ಮ ತೆರಿಗೆ ನಮ್ಮ ಹಕ್ಕು. ತೆರಿಗೆ ಮೇಲೆ ತೆರಿಗೆ ಆಗಿ ಜನರ ಸುಲಿಗೆ ಆಗಿದೆ. ನೀವು ಅಧಿಕಾರಕ್ಕೆ ಬಂದ ಬಳಿಕ ಒಂದೂವರೆ ಲಕ್ಷ ಕೋಟಿ ಹೆಚ್ಚು ಹಣ ವಸೂಲಿ ಮಾಡಿದ್ದೀರಿ. ವಸೂಲಿ ಮಾಡಿ ಬೆಂಗಳೂರಿಗೆ ನಿಮ್ಮ ಕೊಡುಗೆ ಏನು ಎಂಬುದಕ್ಕೆ ಉತ್ತರ ಕೊಡಿ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಗುತ್ತಿಗೆದಾರರು ನೇರ ಆರೋಪ ಮಾಡಿದರೂ ನಿಮ್ಮ ಬಳಿ ಉತ್ತರ ಇಲ್ಲ. ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಬಗ್ಗೆ ಉತ್ತರ ಕೊಡಿ ಎಂದು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಐ ಲವ್ ಮಹಮದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದು ಶಾಂತಿ ಕದಡುವ ಪ್ರಯತ್ನ. ರಾಜ್ಯ ಸರ್ಕಾರ ನಿಷ್ಕ್ರಿಯ ಆಗಿದೆ. ಸರ್ಕಾರವೇ ಇದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಮಾಡ್ತಿದೆ. ವ್ಯವಸ್ಥೆ ಹಾಳು ಮಾಡುವ ಪ್ರಯತ್ನ. ಇದು ಷಡ್ಯಂತ್ರ. ಇದರಲ್ಲಿ ಅಮಾಯಕರು ಬಲಿಯಾಗೋದು ಬೇಡ. ಶಾಂತಿ ಕಾಪಾಡಿಕೊಳ್ಳಬೇಕು ಅಂತ ಮನವಿ ಮಾಡ್ತೇವೆ. ಸಮಾಜವನ್ನು ನಿರ್ನಾಮ ಮಾಡುವ ಪ್ರಯತ್ನ. ಗೃಹ ಸಚಿವರೇ ನೀವು ಎಚ್ಚರವಾಗಿದ್ದರೆ ತಪ್ಪಿತಸ್ಥರ ಮೇಲೆ ಕ್ರಮವಹಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೊದಲು ಜಿಎಸ್ಟಿ ಕೌನ್ಸಿಲ್ ಸಭೆಗೆ ಹೋಗಲು ಹೇಳಿ
ಕೇಂದ್ರ ಸರ್ಕಾರ ಜಿಎಸ್ಟಿ ಪಾಲು ಕೊಡುತ್ತಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ, ಕಾಂಗ್ರೆಸ್ನವರು ನಾಲ್ಕೂವರೆ ಲಕ್ಷ ಕೋಟಿ ಬಜೆಟ್ನಲ್ಲಿ ಬೆಂಗಳೂರಿಗೆ ಎಷ್ಟು ಕೊಟ್ಟಿದ್ದಾರೆ ಅಂತಾ ಸ್ವಲ್ಪ ಮಾತಾಡಲಿ. ಕೇಂದ್ರ ಸರ್ಕಾರದ ಯೋಜನೆಗಳನ್ನೇ ತೆಗೆದುಕೊಳ್ಳುತ್ತಿಲ್ಲ ನೀವು. ಪ್ರಿಯಾಂಕ್ ಖರ್ಗೆಯವರೇ ನಿಮ್ಮ ಸಿಎಂಗೆ ಮೊದಲು ಜಿಎಸ್ಟಿ ಕೌನ್ಸಿಲ್ ಸಭೆಗೆ ಹೋಗಲು ಹೇಳಿ. ಹೋಗಿ ಯಾವ ಮಾನದಂಡ ನಿಗದಿ ಮಾಡಬೇಕು ಅಂತಾ ಮಾತಾಡಲಿ ಎಂದು ಅಶ್ವಥ್ ನಾರಾಯಣ ಸವಾಲು ಹಾಕಿದರು.
