Asianet Suvarna News Asianet Suvarna News

ಇಂದು ಬಿಜೆಪಿ ಜನಸ್ಪಂದನ ಭರ್ಜರಿ ಶಕ್ತಿ ಪ್ರದರ್ಶನ: 3 ಲಕ್ಷ ಜನ ಭಾಗಿ ನಿರೀಕ್ಷೆ

ಅಸೆಂಬ್ಲಿ ಚುನಾವಣೆಗೆ ರಣಕಹಳೆ, ಕಾಂಗ್ರೆಸ್‌, ಜೆಡಿಎಸ್‌ಗೆ ತಿರುಗೇಟು

BJP Janaspandana will Be Held at Doddaballapur on September 10th grg
Author
First Published Sep 10, 2022, 5:30 AM IST

ಬೆಂಗಳೂರು(ಸೆ.10):   ತನ್ನ ಸರ್ಕಾರದ 3 ವರ್ಷಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಆಡಳಿತಾರೂಢ ಬಿಜೆಪಿಯು ಇಂದು(ಶನಿವಾರ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮೊದಲ ಜನಸ್ಪಂದನ ಕಾರ್ಯಕ್ರಮ ನಡೆಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲು ಸಜ್ಜಾಗಿದೆ.  ಅನಿವಾರ್ಯ ಕಾರಣಗಳಿಂದ ಎರಡು ಬಾರಿ ಮುಂದೂಡಿಕೆಯಾಗಿ ಕೊನೆಗೆ ಮೂರನೇ ಬಾರಿ ನಿಗದಿಯಾಗಿರುವ ಕಾರ್ಯಕ್ರಮ ಬಿಜೆಪಿ ಜತೆಗೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೂ ಮಹತ್ವದ್ದಾಗಿದೆ.

ಕಳೆದ ಹಲವು ದಿನಗಳಿಂದ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನಾಯಕರಿಗೆ ತಿರುಗೇಟು ನೀಡಲು ಈ ಜನಸ್ಪಂದನ ಕಾರ್ಯಕ್ರಮ ಪ್ರಮುಖ ವೇದಿಕೆಯಾಗುವುದು ನಿಶ್ಚಿತವಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಬದಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಮಿಸಲಿದ್ದಾರೆ ಹಾಗೂ ಸಮಾವೇಶದ ಕೇಂದ್ರಬಿಂದುವಾಗಲಿದ್ದಾರೆ.

ಇನ್ನೂ 6 ಭಾಗಗಳಲ್ಲಿ: ಈ ಮೊದಲ ಕಾರ್ಯಕ್ರಮ ಮುಗಿದ ಬಳಿಕ ಸೋಮವಾರದಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನ ನಂತರ ರಾಜ್ಯದ ಸುಮಾರು ಆರು ಭಾಗಗಳಲ್ಲಿ ಇಂಥದ್ದೇ ಬೃಹತ್‌ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲು ಬಿಜೆಪಿ ನಿರ್ಧರಿಸಿದೆ. ಡಿಸೆಂಬರ್‌ ಒಳಗೆ ಈ ಎಲ್ಲ ಸಮಾವೇಶಗಳನ್ನು ಮುಗಿಸಿದ ಬಳಿಕ ಹೊಸ ವರ್ಷದ ಜನವರಿಯಿಂದ ಚುನಾವಣೆಯ ಸಿದ್ಧತೆಗೆ ಅಡಿಯಿಡಲಿದೆ.

Bharat Jodo Yatra: ರಾಹುಲ್‌ ಜತೆ 60 ಕಂಟೇನರ್‌ಗಳ ಯಾತ್ರೆ, ತಂಗಲು ಮಂಚ, ಸ್ನಾನಗೃಹ, ಎಸಿ ವ್ಯವಸ್ಥೆ..!

ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಎರಡು ವರ್ಷಗಳ ಅವಧಿ ಮತ್ತು ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಒಂದು ವರ್ಷದ ಅವಧಿಯ ಸಾಧನೆಗಳನ್ನು ಜನರ ಮುಂದಿಡುವುದರ ಜತೆಗೆ ಮುಂದಿನ ದಿನಗಳಲ್ಲಿ ತಮ್ಮ ಸರ್ಕಾರ ಏನೇನು ಮಾಡಲಿದೆ ಎಂಬುದರ ಸ್ಥೂಲ ಚಿತ್ರಣವನ್ನೂ ಹೇಳುವ ಉದ್ದೇಶ ಬಿಜೆಪಿ ನಾಯಕರಿಗಿದೆ.

ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಪಕ್ಷದ ಸಂಘಟನೆ ಹಳೆಯ ಮೈಸೂರು ಭಾಗದಲ್ಲೇ ತುಸು ದುರ್ಬಲವಾಗಿದೆ. ಹಾಗಾಗಿಯೇ ಈ ಭಾಗದಲ್ಲೇ ಜನಸ್ಪಂದನದ ಮೊದಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಲಪಡಿಸುವುದಕ್ಕೆ ಬೇಕಾದ ತಂತ್ರ ರೂಪಿಸಲು ಬಿಜೆಪಿ ತೀರ್ಮಾನಿಸಿದೆ. ಸುಮಾರು 3 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ.

ಕುಂಬಳಕಾಯಿ ಕಳ್ಳರು ಎಲ್ಲೆಡೆ ಇದ್ದರೆ ನಾನೇನ್‌ ಮಾಡ್ಲಿ: ದಳಪತಿಗಳಿಗೆ ಸುಮಲತಾ ತಿರುಗೇಟು

ಸುಧಾಕರ್‌ ನೇತೃತ್ವ:

ಈ ಮೊದಲ ಜನಸ್ಪಂದನ ಕಾರ್ಯಕ್ರಮದ ಜವಾಬ್ದಾರಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಕಳೆದ ಹಲವು ದಿನಗಳಿಂದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸತತವಾಗಿ ಸಂಚರಿಸಿ ಸಂಘಟನೆ ಮಾಡಿದ್ದಾರೆ.

ನಡ್ಡಾ ಬದಲು ಸ್ಮೃತಿ 

ಕಾರ್ಯಕ್ರಮದ ಉದ್ಘಾಟನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗಮಿಸಬೇಕಿತ್ತು. ಆದರೆ, ಸಮಾವೇಶ ಎರಡು ಬಾರಿ ಮುಂದೂಡಿಕೆಯಾಗಿ ಶನಿವಾರ ನಿಗದಿಯಾಗಿದ್ದರಿಂದ ನಡ್ಡಾ ಅವರಿಗೆ ಪೂರ್ವನಿಗದಿತ ಕಾರ್ಯಕ್ರಮಗಳು ಇರುವುದರಿಂದ ಆಗಮಿಸುತ್ತಿಲ್ಲ. ಅವರ ಬದಲಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ. ಇನ್ನುಳಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಹಲವು ಸಚಿವರು, ರಾಜ್ಯದ ಸಚಿವರು, ಶಾಸಕರು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ.
 

Follow Us:
Download App:
  • android
  • ios