ವಿಜಯೇಂದ್ರ ಆಯ್ಕೆಯಿಂದ ಯುವ ಪೀಳಿಗೆಗೆ ಬಹಳ ಸಂತೋಷವಾಗಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಅದನ್ನು ಸಮರ್ಥವಾಗಿ ಮಾಡಲಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು(ನ.11): ನಕಲಿ ಗಾಂಧಿ ಕುಟುಂಬದ ಪಾದರಕ್ಷೆ ತಲೆ ಮೇಲೆ ಹೊತ್ತು ಕಾಲು ಸವೆಸಿಕೊಂಡಿರುವ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಈ ಗುಲಾಮರಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುವ ಕಾಲ ಬರಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಬೆಂಗಳೂರಿನ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕ ಬಿ.ವೈವಿಜಯೇಂದ್ರ ಅವರಿಗೆ ಅವಕಾಶ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಜೋತುಬಿದ್ದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಒಬ್ಬ ಹಿರಿಯ ಮುತ್ಸದ್ಧಿ ಮಗ ಎಂಬ ಕಾರಣಕ್ಕೆ ಕಾಂಗ್ರೆಸ್‌ ಆರೋಪ ಮಾಡುತ್ತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಎಣಿಕೆ ಮಾಡಿ ನೋಡಿ ಎಷ್ಟು ಜನ ಶಾಸಕರು ಅವರ ಕುಟುಂಬಗಳಿಂದ ಮಾತ್ರ ಬಂದಿದ್ದಾರೆ? ಎಷ್ಟು ಜನ ಸಚಿವರು ಕುಟುಂಬದ ಸಚಿವರಾಗಿದ್ದಾರೆ ಎಂಬುದನ್ನು ಎಂದು ಮೆಲುಕು ಹಾಕಿ ನೋಡಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ವಿಜಯೇಂದ್ರಗೆ ಸಿಕ್ಕಿರುವುದು ಅಧಿಕಾರ ಅಲ್ಲ, ಜವಾಬ್ದಾರಿ: ಸಿ.ಟಿ.ರವಿ

ಕಾಂಗ್ರೆಸ್‌ನವರ ಬಾಯಲ್ಲಿ ಈ ಮಾತು ಬರಬಾರದು. ಯಾಕೆಂದರೆ ಒಂದು ಕುಟುಂಬದ ಗುಲಾಮಗಿರಿ ಮಾಡುವ ಈ ಕಾಂಗ್ರೆಸ್ಸಿಗರು ಆ ಒಂದು ಕುಟುಂಬದ ಪಾದರಕ್ಷೆ ಹೊತ್ತು ಇಲ್ಲಿಯವರೆಗೂ ಕಾಲು ಸವೆಸಿದ್ದಾರೆ. ಅಂತಹವರು ಬಿಜೆಪಿಯ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಒಬ್ಬ ಉತ್ತಮ ಕಾರ್ಯಕರ್ತನನ್ನು ಗುರುತಿಸಿ ಬಿಜೆಪಿ ಜವಾಬ್ದಾರಿ ಕೊಟ್ಟಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಆಯ್ಕೆ ಒಮ್ಮತದ ಆಯ್ಕೆಯಾಗಿದೆ. ವಿಜಯೇಂದ್ರ ಅವರು ಹಿರಿಯರು, ಕಿರಿಯರು ಎನ್ನುವ ವ್ಯತ್ಯಾಸ ಇಲ್ಲದೆ, ಎಲ್ಲರನ್ನು ಗೌರವಿಸಿ ಜತೆಯಲ್ಲಿ ಕರೆದುಕೊಂಡು ಹೋಗುವ ಗುಣ ಅವರಲ್ಲಿದೆ. ಸಂಘಟನೆಯಲ್ಲಿ ಬಹಳಷ್ಟು ಅನುಭವ ಇದೆ, ಯುವ ಮೋರ್ಚಾದಿಂದ ಹಿಡಿದು ರಾಜ್ಯ ಉಪಾಧ್ಯಕ್ಷರವರೆಗೆ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಯಾವ ರೀತಿ ತಂತ್ರಗಾರಿಕೆ ಮಾಡಬೇಕು, ಯಾವ ರೀತಿ ಗೆಲ್ಲಬೇಕು, ಫಲಿತಾಂಶವನ್ನು ಯಾವ ರೀತಿ ತರಬೇಕು ಎನ್ನುವ ಬುದ್ಧಿವಂತಿಕೆ ಕೂಡ ಅವರಿಗೆ ಇದೆ. ಹೀಗಾಗಿ ಪಕ್ಷಕ್ಕೆ ಬಹಳ ಒಳ್ಳೆಯದಾಗಲಿದೆ. ಅವರ ಆಯ್ಕೆಯಿಂದ ಯುವ ಪೀಳಿಗೆಗೆ ಬಹಳ ಸಂತೋಷವಾಗಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಅದನ್ನು ಸಮರ್ಥವಾಗಿ ಮಾಡಲಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದರು.