* ಕರ್ನಾಟಕ ವಿಧಾನಪರಿಷತ್ ಚುನಾವಣೆ* ಬಿ.ವೈ. ವಿಜಯೇಂದ್ರಗೆ ಬಿಗ್​ ಶಾಕ್​ ಕೊಟ್ಟ ಬಿಜೆಪಿ ಹೈಕಮಾಂಡ್​* ವಿಜಯೇಂದ್ರ ಅವರ ಆಸೆಗೆ ತಣ್ಣೀರು

ಬೆಂಗಳೂರು, (ಮೇ.24): ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಬಿಜೆಪಿ ಕೊನೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್‌ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಅಳೆದುತೂಗಿ ಬಿಜೆಪಿ ಹೈಕಮಾಂಡ್‌ ಇಂದು(ಮಂಗಳವಾರ) ನಾಮಪತ್ರ ಸಲ್ಲಿಕೆ ಕೊನೆ ದಿನದಂದು ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ್ದು, ಬೇರೆ-ಬೆರೆ ವರ್ಗಗಳ ಆಧಾರದ ಮೇಲೆ ಅಚ್ಚರಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. 

Add Asianetnews Kannada as a Preferred SourcegooglePreferred

 ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಕೇಶವ ಪ್ರಸಾದ್, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಚಲುವಾದಿ ನಾರಾಯಣಸ್ವಾಮಿ ಹಾಗೂ ಮಹಿಳಾ ಕೋಟಾದಡಿಯಲ್ಲಿ ಮಂಜುಳಾಗೆ ಮಣೆ ಹಾಕಿದೆ. ಪ್ರಮುಖವಾಗಿ ಕೊನೆ ಕ್ಷಣಲ್ಲಿ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್‌ ಕೈತಪ್ಪಿದೆ.

ಹೌದು.....ವಿಧಾನ ಪರಿಷತ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ಬಿ.ವೈ. ವಿಜಯೇಂದ್ರ ಅವರ ಆಸೆಗೆ ಬಿಜೆಪಿ ಹೈಕಮಾಂಡ್​ ತಣ್ಣಿರೆರಚಿದೆ. ಕೊನೆ ಕ್ಷಣದಲ್ಲಿ ವಿಜಯೇಂದ್ರ ಅವರನ್ನ ಹೈಕಮಾಂಡ್ ಕಡೆಗಣಿಸಿದೆ.

MLC Election: ವಿಜಯೇಂದ್ರಗೆ ಪರಿಷತ್‌ ಟಿಕೆಟ್‌: ಸಿಎಂ ಶಿಫಾರಸು

ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ರಾಜ್ಯ ಬಿಜೆಪಿ ಉಪಾದ್ಯಕ್ಷ ಬಿವೈ ವಿಜಯೇಂದ್ರ ಅವರ ಹೆಸರು ಮುಂಚೂಣಿಯಲ್ಲಿತ್ತು. ಅಲ್ಲದೇ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಹ ವಿಜಯೇಂದ್ರ ಅವರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಿತ್ತು. ಅಲ್ಲದೇ ಸಂಸದೀಯ ಮಂಡಳಿಯಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಸಮಾಲೋಚನೆ ಮಾಡಲಾಗಿತ್ತು. ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಿತ್ತು. ಈ ವೇಳೆ ವಿಜಯೇಂದ್ರಗೆ ಟಿಕೆಟ್ ಕೊಡುವುದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಅಂತಿಮವಾಗಿ ವಿಜಯೇಂದ್ರ ಅವರ ಹೆಸರನ್ನು ಕೈಬಿಟ್ಟಿದೆ. 

ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಬಿಎಸ್​ವೈ ಪ್ರಚಾರ ಗಮನದಲ್ಲಿ ಇಟ್ಟುಕೊಂಡು ವಿಜಯೇಂದ್ರಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿ ವಾದ ಮಾಡಲಾಗಿತ್ತು. ಆದರೆ ವಿಜಯೇಂದ್ರಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿದಂತಾಗಲಿದೆ. ಇದನ್ನೇ ಕಾಂಗ್ರೆಸ್ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ ಎಂದು ಕೆಲವರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಬೇಕಾದರೆ ಮುಂದಿನ ವಿಧಾನಸಭೆಗೆ ಟಿಕೆಟ್ ಕೊಡೋಣ ಪಕ್ಷಕ್ಕೆ ಲಾಭವಾಗಲಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಟಿಕೆಟ್​ ಕೈತಪ್ಪಿದೆ ಎಂದು ತಿಳಿದುಬಂದಿದೆ. 

ವಿಜಯೇಂದ್ರ ಆಸೆಗೆ ತಣ್ಣೀರು
ಯೆಸ್..ರಾಜ್ಯ ಬಿಜೆಪಿ ಕೋರ್ ಕಮಿಟಿ ತಮ್ಮ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ಫುಲ್ ಖುಷ್ ಆಗಿದ್ದರು, ಅಲ್ಲದೇ ಖುದ್ದು ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನ ಭೇಟಿ ಮಾಡಿ ನಗು ಮುಖದಲ್ಲೇ ವಾಪಸ್ ಆಗಿದ್ದರು. ಇದರಿಂದ ಅವರಿಗೆ ಟಿಕೆಟ್ ಫಿಕ್ಸ್ ಅಂತಾಲೇ ಅವರ ಅಭಿಮಾನಿಗಳು ಫುಲ್ ಖಷಿಯಾಗಿದ್ದರು. ಅಲ್ಲದೇ ಪರಿಷತ್‌ಗೆ ಆಯ್ಕೆ ಮೂಲಕ ಬೊಮ್ಮಾಯಿ ಸಂಪುಟ ಸೇರುತ್ತಾರೆ ಎನ್ನಲಾಗಿತ್ತು. ಇದು ವಿಜಯೇಂದ್ರ ಆಸೆ ಕೂಡ ಆಗಿತ್ತು. ಆದ್ರೆ, ಅಂತಿಮವಾಗಿ ಎಲ್ಲಾ ಉಲ್ಟಾ ಆಗಿದ್ದು, ವಿಜಯೇಂದ್ರ ಆಸೆಗೆ ಹೈಕಮಾಂಡ್ ತಣ್ಣೀರು ಸುರಿದಿದೆ. ಇದರಿಂದ ವಿಜಯೇಂದ್ರ ಹಾಗೂ ಅವರ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.