ಯಡಿಯೂರಪ್ಪ ನಾಯಕತ್ವ ಬದಲಾವಣೆ: ಹೊಸ ಸಂದೇಶ ರವಾನಿಸಿದ ಹೈಕಮಾಂಡ್
5 ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆ ರಾಜ್ಯ ಬಿಜೆಪಿ ನಾಯಕತ್ವದ ಕೂಗು ಎದ್ದಿದ್ದು, ಇದಕ್ಕೆ ಹೈಕಮಾಂಡ್ ಹೊಸ ಸಂದೇಶವನ್ನ ರವಾನಿಸಿದೆ. ಏನದು ಸಂದೇಶ? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, [ನ.15] : ಉಪ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ.
5 ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿದೆ. ಬಿಜೆಪಿ ಮಂಡ್ಯದಲ್ಲಿ ಗಮನಾರ್ಹ ಮತಗಳನ್ನು ಪಡೆದುಕೊಂಡಿದ್ದು ಬಿಟ್ಟರೆ ಶಿವಮೊಗ್ಗದಲ್ಲಿ ಗೆದ್ದರೂ ಮತಗಳ ಅಂತರದಲ್ಲಿ ಭಾರೀ ವ್ಯತ್ಯಾಸವಾಗಿದೆ.
ಕೊನೆಯಾಯ್ತಾ ಬಿಎಸ್ವೈ ನಾಯಕತ್ವ, ರಾಜ್ಯ ಬಿಜೆಪಿಗೆ ಹೊಸ ಸಾರಥಿ?
ಇದ್ರಿಂದ ಕೆಲ ನಾಯಕರು ಯಡಿಯೂರಪ್ಪ ನಾಯಕತ್ವಕ್ಕೆ ಅಸಮಧಾನಗೊಂಡಿದ್ದಾರೆ. ನಾಯಕತ್ವದ ಕುರಿತು ಸೊಗಡು ಶಿವಣ್ಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಸಿಟಿ ರವಿ ಮತ್ತು ಸುರೇಶ್ ಕುಮಾರ್ ಇದು ಪಕ್ಷದ ಆತ್ಮಾವಲೋಕನಕ್ಕೆ ಸಕಾಲ ಎಂದು ಹೇಳಿದ್ದರು. ಇದ್ರಿಂದ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಗುಸು-ಗುಸು ಸುದ್ದಿ ಹಬ್ಬಿತ್ತು.
ಆದರೆ, ಇದಕ್ಕೆಲ್ಲ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದ್ದು, ಯಡಿಯೂರಪ್ಪ ನಾಯಕತ್ವ ವಿರುದ್ಧ ಯಾರೂ ದನಿ ಎತ್ತಬಾರದು. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ನಾಯಕರನ್ನು ಬದಲಿಸುವುದು ಸರಿಯಲ್ಲ ಎಂದು ರಾಜ್ಯ ನಾಯಕರಿಗೆ ಹೈಕಮಾಂಡ್ ಖಡಕ್ ಆಗಿ ಹೇಳಿದೆ.
ಯಡಿಯೂರಪ್ಪ ರೀತಿಯ ಮಾಸ್ ಲೀಡರ್ ಸದ್ಯ ರಾಜ್ಯದಲ್ಲಿ ಯಾರು ಕಾಣಿಸುತ್ತಿಲ್ಲ. ಲೋಕಸಭೆ ಚುನಾವಣೆ ಎದುರಿಸುವ ಕುರಿತು ಚಿಂತನೆ ಮಾಡಿ. ಅದನ್ನ ಬಿಟ್ಟು ಪಕ್ಷದೊಳಗೆ ಜಗಳವಿದೆ ಎಂದು ಸಾರಿ ಹೇಳಲು ಹೋಗಬೇಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಖಡಕ್ ಸೂಚನೆ ರವಾನಿಸಿದೆ.