Asianet Suvarna News Asianet Suvarna News

ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಸರ್ಕಾರ ಬದ್ಧ: ಶೋಭಾ ಕರಂದ್ಲಾಜೆ

ಡಬಲ್‌ ಎಂಜಿನ್‌ ಸರ್ಕಾರ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿ, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. 

BJP Government is Committed to Women Empowerment Says Shobha Karandlaje gvd
Author
First Published Mar 18, 2023, 10:02 PM IST

ತುಮಕೂರು (ಮಾ.18): ಡಬಲ್‌ ಎಂಜಿನ್‌ ಸರ್ಕಾರ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿ, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ತಾಲೂಕಿನ ನಾಗವಲ್ಲಿ ಸಮೀಪದ ಬಾಣಾವಾರ ಗೇಟ್‌ನಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭೇಟಿ ಬಚಾವೋ, ಭೇಟಿ ಪಡಾವೋ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ನಾರಿಶಕ್ತಿಯ ಅಭ್ಯುದಯಕ್ಕೆ ಕಂಕಣ ಬದ್ಧರಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದುಡಿಯುತ್ತಿದೆ ಎಂದರು.

ರಾಜ್ಯದಲ್ಲಿ ಹೆಣ್ಣು ಮಕ್ಕಳು ಕಡಿಮೆ ಆಗುತ್ತಿದ್ದಾರೆ ಎನ್ನುವುದನ್ನು ಗಮನಿಸಿ 2008ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದರು. ಹೆಣ್ಣು ಮಕ್ಕಳ ಬಗ್ಗೆ ಚಿಂತಿಸುವ ಸರ್ಕಾರ ಎಂದರೆ ಅದು ಬಿಜೆಪಿ ಮಾತ್ರ. ಮೋದಿ ಸರ್ಕಾರ ಉದ್ಯೋಗಸ್ಥ ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ಮಾಡಿದ್ದಾರೆ, ಆರೋಗ್ಯಕ್ಕಾಗಿ ಆಯುಷ್ಮಾನ್‌ ಕಾರ್ಡ್‌ ಅನ್ನು ಜಾರಿಗೆ ತಂದಿದೆ. ಇಲ್ಲಿರುವ ಶಾಸಕರಿಗೆ ಜನರ ಆರೋಗ್ಯದ ಕಾಳಜಿ ಇದೆಯೋ ಇಲ್ಲವೋ ಗೊತ್ತಿಲ್ಲ, ಸುರೇಶ್‌ ಗೌಡರು ಶಾಸಕರಾಗಿದ್ದರೆ ಮನೆಮನೆಗೆ ಯೋಜನೆ ತಲುಪಿಸುತ್ತಿದ್ದರು. ದೇಶದ ಎಲ್ಲ ಮನೆಗಳಿಗೆ ನಲ್ಲಿ ನೀರು ಕೊಡಲು ಮೋದಿ ಅವರು ಗ್ರಾಮಾಂತರ ಕ್ಷೇತ್ರಕ್ಕೆ 150 ಕೋಟಿ ಅನುದಾನ ನೀಡಿದ್ದಾರೆ. 

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟ ಗ್ಯಾರಂಟಿ: ಸಿ.ಟಿ.ರವಿ

ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಎಂಬುದು ಶೂನ್ಯ. ಶಾಸಕರು ಇದ್ದಾರೋ ಇಲ್ಲವೋ ಎಂಬುದೇ ಜನರಿಗೆ ತಿಳಿಯದಾಗಿದೆ. ಕ್ಷೇತ್ರ ಮತ್ತೊಮ್ಮೆ ಅಭಿವೃದ್ಧಿ ಕಾಣಬೇಕಾದರೆ ಸುರೇಶ್‌ಗೌಡ ಶಾಸಕರಾಗುವಂತೆ ನೀವೆಲ್ಲರೂ ಆಶೀರ್ವಾದ ಮಾಡಬೇಕೆಂದು ಶೋಭಾ ಕರಂದ್ಲಾಜೆ ಮನವಿ ಮಾಡಿದರು. ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಮಾತನಾಡಿ, ಹೊನ್ನಾವರ-ಬೆಂಗಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವೆ ಶೋಭಾ ಕರಂದ್ಲಾಜೆ ಕಾರಣ. ಈ ಯೋಜನೆಗೆ ಬಿಎಸ್‌ವೈ ಅವರು ಬೆಂಬಲ ನೀಡಿದ್ದರಿಂದ ಇಂದು ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ದೇಶಕ್ಕೆ ಇಂದು ಮೋದಿ ಹಾಗೂ ಬಿಜೆಪಿ ಅನಿವಾರ್ಯವಾಗಿದೆ. ಹೊರದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವ ಟೀಕಿಸುವ ವ್ಯಕ್ತಿಯಿಂದ ದೇಶವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಕ್ಷೇತ್ರಗಳ ಅಭಿವೃದ್ಧಿಯಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಮಂತ್ರಿಗಳು, ಅಧಿಕಾರಗಳ ಜೊತೆಗೆ ಜಗಳವಾಡಿ, ಕ್ಷೇತ್ರದ ಅಭಿವೃದ್ಧಿಗೆ ಹಣ ತಂದಿದ್ದಾರೆ. ಅವರನ್ನು ಮತ್ತೊಮ್ಮೆ ಕ್ಷೇತ್ರದ ಜನತೆ ಶಾಸಕರಾಗಿ ಮಾಡಿ, ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕಾರಿಯಾಗಬೇಕೆಂದರು. ಮಾಜಿ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ನನ್ನ 10 ವರ್ಷದ ಅವಧಿಯಲ್ಲಿ ಕ್ಷೇತ್ರದ ಜನರಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಆರೋಗ್ಯ ಸೇವೆಗಳಿಗಾಗಿ ಆಸ್ಪತ್ರೆ ಮತ್ತು ಶಾಲೆಗಳನ್ನು ನಿರ್ಮಿಸಿ ಕೊಡಲಾಗಿದೆ. 

ಮಹಿಳಾ ಶಕ್ತಿ ಒಂದಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದರೆ, ಇಡೀ ವಿಶ್ವವೇ ತುಮಕೂರು ಗ್ರಾಮಾಂತರ ಕ್ಷೇತ್ರದತ್ತ ತಿರುಗಿ ನೋಡುವಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ. ಕಾಂಗ್ರೆಸ್‌ ಸರ್ಕಾರವಿದ್ದಾಗಲೂ ಸುಮಾರು 500 ಕೋಟಿ ರು. ಗಳ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಿದ್ದೇನೆ. ಆದರೆ ನನ್ನ ಕಾಲದಲ್ಲಿ ಅಭಿವೃದ್ಧಿಗೊಂಡ ಶಾಲೆಗಳ ಶೌಚಾಲಯಗಳಿಗೆ ನೀರಿಲ್ಲ, ಬಳಕೆಗೆ ಯೋಗ್ಯವಿಲ್ಲದಂತಾಗಿವೆ. ಕಂಪ್ಯೂಟರ್‌ ಲ್ಯಾಬ್‌ ಉಪಯೋಗಕ್ಕೆ ಬರುತ್ತಿಲ್ಲ. ನಾಗವಲ್ಲಿಯಲ್ಲಿ ಹೆಣ್ಣು ಮಕ್ಕಳ ಪ್ರಥಮದರ್ಜೆ ಕಾಲೇಜು ತೆರೆದು, ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ಗುರಿ ಹೊಂದಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಅಂಬಿಕಾ ಹುಲಿನಾಯ್ಕರ್‌, ತಾಲೂಕು ಅಧ್ಯಕ್ಷ ರೇಣುಕಮ್ಮ, ಮಹಿಳಾ ಮುಖಂಡರಾದ ತಾರಾಮಣಿ, ಜಿ.ಪಂ.ಮಾಜಿ ಅಧ್ಯಕ್ಷೆ ಶಾರದ ನರಸಿಂಹಮೂರ್ತಿ, ಸುಮಿತ್ರಾದೇವಿ, ಎಲ್ಲಾ ತಾಲೂಕುಗಳ ಮಹಿಳಾ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಜಿ.ಪಂ, ತಾ.ಪಂ. ಹಾಗೂ ಗ್ರಾಪಂಗಳ ಸದಸ್ಯರು ಉಪಸ್ಥಿತರಿದ್ದರು.

ಕ್ರೆಡಿಟ್‌ ತೆಗೆದುಕೊಳ್ಳೋದು ಎಚ್ಡಿಕೆಗೆ ಹೊಸತೇನಲ್ಲ: ಸಿ.ಪಿ.ಯೋಗೇಶ್ವರ್‌

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾಗಿ ಬಿ.ಸುರೇಶಗೌಡ ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಡೀ 224 ಕ್ಷೇತ್ರಗಳಿಗೂ ಮಾದರಿಯಾಗಿವೆ. ಎಲ್ಲಾ ಗ್ರಾಮಗಳಿಗೂ ರಸ್ತೆ, ಸಿಸಿ ಚರಂಡಿಗಳನ್ನು ಮಾಡಿ, ಕ್ಷೇತ್ರವನ್ನು ಮಾದರಿಯಾಗಿದ್ದಾರೆ. ವಿದ್ಯುತ್‌ ಇಲಾಖೆಯಿಂದ 500 ಕೋಟಿ ರು. ತಂದು, ರೈತರ ಎಲ್ಲಾ ಐಪಿ ಸೆಟ್‌ಗಳಿಗೆ ತಲಾ 25 ಕೆ.ವಿ.ಟಿ.ಸಿಗಳನ್ನು ಅಳವಡಿಸಿದ ಏಕೈಕ ಕ್ಷೇತ್ರ ತುಮಕೂರು ಗ್ರಾಮಾಂತರ. ಇದರ ರೂವಾರಿ ಸುರೇಶಗೌಡ ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ.
-ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ

Follow Us:
Download App:
  • android
  • ios