ಯತ್ನಾಳ್ ಅವರ ಉಚ್ಚಾಟನೆಯ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದು ಬಿಜೆಪಿಯ ಆಂತರಿಕ ವಿಚಾರ ಎಂದಿದ್ದಾರೆ. ಈ ಘಟನೆಯು ಕರ್ನಾಟಕ ಬಿಜೆಪಿಯಲ್ಲಿ ಬಿಕ್ಕಟ್ಟನ್ನು ತಂದಿದೆ.

ಬೆಂಗಳೂರು (ಮಾ.26): ಯತ್ನಾಳ್ ಉಚ್ಚಾಟನೆ ಅದು ಅವರ ಪಾರ್ಟಿ ವಿಚಾರ. ಆ ಮುತ್ತುರತ್ನಗಳನ್ನ ಪಾರ್ಟಿಯಲ್ಲಾದ್ರೂ ಇಟ್ಟುಕೊಳ್ಳಲಿ ಹೊರಗೆ ಬೇಕಾದ್ರೂ ಬಿಸಾಕಲಿ ನನಗ್ಯಾಕೆ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ‌ ಸರ್ಕಾರದ ಅವಧಿಯಲ್ಲಾದ ಕೋವಿಡ್ ಅಕ್ರಮ ಸಂಬಂಧ ಇಂದು ಡಿಸಿಎಂ ಡಿಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಬಳಿಕ ಮಾತನಾಡಿದರು.

ಕೆಲವರು ಶೋಭೆಗೆ ಒಂದೊಂದು ಆಭರಣ ಇಟ್ಟುಕೊಳ್ತಾರೆ. ಕೆಲವರು ಕಿವಿಯೋಲೆ ಹಾಕಿಕೊಳ್ತಾರೆ, ಕೆಲವರು ಹಣೆಗೆ ಇಟ್ಟುಕೊಳ್ತಾರೆ, ಕೆಲವರಿಗೆ ಕಾಲಿಗೆ ಗೆಜ್ಜೆ ಬೇಕು.. ಅವರಿಗೆ ಏನೇನು ಬೇಕೋ ಹಾಗೆ ಮಾಡಿದ್ದಾರೆ ಅಷ್ಟೇ. ಅವರ ಪಾರ್ಟಿಯಲ್ಲಿ ಏನಾದ್ರೂ ಮಾಡಿಕೊಳ್ಳಲಿ ನನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದರು.

ಯತ್ನಾಳರನ್ನ ಉಚ್ಚಾಟಿಸಿದ್ದು ಯಾಕೆ?

ವಿವಾದಾತ್ಮಕ ಹೇಳಿಕೆಗಳು ಮತ್ತು ಪಕ್ಷದ ವಿರುದ್ಧದ ಚಟುವಟಿಕೆ ಆರೋಪ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಲಾಗಿದೆ. ಮಾರ್ಚ್ 26, 2025 ರಂದು ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿಯು ಈ ಆದೇಶವನ್ನು ಹೊರಡಿಸಿದ್ದು, ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಘೋಷಿಸಿದೆ.

ಇದನ್ನೂ ಓದಿ: ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಬೆಂಬಲಿಗರ ರಾಜೀನಾಮೆ ಪರ್ವ!

ಬಣ ರಾಜಕೀಯ:

ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ತೀವ್ರಗೊಂಡಿರುವ ಸಂದರ್ಭದಲ್ಲಿ, ಯತ್ನಾಳ್ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದ್ದರು. ಪಕ್ಷದ ಒಡಕು, ಬಣ ರಾಜಕೀಯ, ಅಡ್ಜಸ್ಟ್ ಮೆಂಟ್ ರಾಜಕಾರಣದ ಬಗ್ಗೆ ಪದೇ ಪದೇ ಪ್ರಶ್ನಿಸಿದ್ದರು. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿ ಪರಿಗಣಿಸಲ್ಪಟ್ಟಿದೆ. 
ಹಿಂದೆಯೂ ಯತ್ನಾಳ್ ಸ್ವಪಕ್ಷದ ವಿರುದ್ಧ ಧ್ವನಿಯನ್ನು ಎತ್ತುವ ಮೂಲಕ ಪಕ್ಷದೊಳಗೆ ಒಂದು ಬಣವನ್ನು ಸೃಷ್ಟಿಸಿದ್ದರು. ಆದರೆ ಈ ಬಾರಿ, ಅವರ ಹೇಳಿಕೆಗಳು ಮತ್ತು ಕ್ರಮಗಳು ಪಕ್ಷದ ಏಕತೆಗೆ ಧಕ್ಕೆ ತರುತ್ತವೆ ಎಂದು ಭಾವಿಸಿದ ಕೇಂದ್ರೀಯ ನಾಯಕತ್ವವು ಕಠಿಣ ಕ್ರಮಕ್ಕೆ ಮುಂದಾಗಿದೆ.

 ಉದಾಹರಣೆಗೆ, ಯತ್ನಾಳ್ ಅವರು ವಿಜಯೇಂದ್ರ ಅವರ ನಾಯಕತ್ವವನ್ನು "ಅಡ್ಜಸ್ಟ್‌ಮೆಂಟ್ ರಾಜಕೀಯ" ಎಂದು ಕರೆದು, ಪಕ್ಷದಲ್ಲಿ ಭ್ರಷ್ಟಾಚಾರ ಇದೆ ಎಂದು ಆರೋಪಿಸಿದ್ದರು. ಇದು ಪಕ್ಷದ ಮೇಲಿನ ನಂಬಿಕೆಗೆ ಚ್ಯುತಿ ತರುವಂತಹ ಕ್ರಿಯೆ ಎಂದು ಶಿಸ್ತು ಸಮಿತಿ ತೀರ್ಮಾನಿಸಿತು.

ಇದನ್ನೂ ಓದಿ: ಎಲ್ಲಾ ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಪಕ್ಷದ ಪ್ರತಿಕ್ರಿಯೆ ಮತ್ತು ಪರಿಣಾಮ

ಈ ಉಚ್ಚಾಟನೆಯು ಕರ್ನಾಟಕ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯತ್ನಾಳ್ ಅವರ ಬೆಂಬಲಿಗರು ಈ ಕ್ರಮವನ್ನು ಖಂಡಿಸಿದ್ದು, ಪಕ್ಷದ ಆಂತರಿಕ ಜಗಳವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ. ಕೆಲವರು ಇದನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ಬಣದ ವಿರುದ್ಧ ಯತ್ನಾಳ್ ಬಣದ ಸೋಲು ಎಂದು ಪರಿಗಣಿಸಿದ್ದರೆ ಮತ್ತೊಂದೆಡೆ, ಪಕ್ಷದ ಕೇಂದ್ರೀಯ ನಾಯಕತ್ವವು ಶಿಸ್ತು ಕಾಪಾಡುವ ಸಲುವಾಗಿ ಈ ಕ್ರಮ ಅಗತ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದೆ.

ಈ ಘಟನೆಯು ರಾಜ್ಯ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದು ತೋರಿಸಿದೆ. ಮುಂದಿನ ದಿನಗಳಲ್ಲಿ ಯತ್ನಾಳ್ ಅವರು ಏನು ಮಾಡುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.