ಬಿಜೆಪಿ ಹಣ, ಹೆಂ ಡ, ಜಾತಿಗಳ ಆಮಿಷಯೊಡ್ಡಿ ಸಂವಿಧಾನದ ಆಶಯವನ್ನೆ ತುಳಿಯುತ್ತಿದೆ. ಪ್ರಜಾಪ್ರಭುತ್ವ ಬಿಜೆಪಿಯಿಂದ ಕುಗ್ಗಿದೆ. ಬಿಜೆಪಿಗೆ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಹೆಸರು ಹೇಳಲು ಯೋಗ್ಯತೆ ಇಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಕುಕನೂರು (ಡಿ.6) : ಬಿಜೆಪಿ ಹಣ, ಹೆಂ ಡ, ಜಾತಿಗಳ ಆಮಿಷಯೊಡ್ಡಿ ಸಂವಿಧಾನದ ಆಶಯವನ್ನೆ ತುಳಿಯುತ್ತಿದೆ. ಪ್ರಜಾಪ್ರಭುತ್ವ ಬಿಜೆಪಿಯಿಂದ ಕುಗ್ಗಿದೆ. ಬಿಜೆಪಿಗೆ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಹೆಸರು ಹೇಳಲು ಯೋಗ್ಯತೆ ಇಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ದ್ಯಾಂಪೂರು, ಕಕ್ಕಿಹಳ್ಳಿ ಮತ್ತಿತರ ಗ್ರಾಮದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಅಭಿವೃದ್ಧಿಯ ಚಿಂತನ-ಮಂಥನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ 17 ಶಾಸಕರಿಗೆ ಆಮಿಷವೊಡ್ಡಿ ಬಿಜೆಪಿ ಸರ್ಕಾರ ರಚಿಸಿತು. ಇದು ಬಿಜೆಪಿಯ ಮನೆ ಮುರಿಯುವ ಕೆಲಸ. ಕೇಸರಿ ಶಾಲು, ಕುಂಕುಮ ಇಟ್ಟುಕೊಂಡು ದೇವರ ಹೆಸರಿನಲ್ಲಿ ಜಯಂತಿ, ಆಚರಣೆ ಎಂದು ಅಭಿವೃದ್ಧಿ ಮರೆತು ಜಾತಿ, ಹಿಂದೂ-ಮುಸ್ಲಿಂ ನಡುವೆ ಕದನ ಹೀಗೆ ಬಿಜೆಪಿ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿದೆ ಎಂದು ತಿವಿದರು.

ಜಾತಿ ರಾಜಕಾರಣಕ್ಕೆ ಕಡಿವಾಣ ಬೀಳಲಿ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

ಮಂಗಲಪಾಂಡೆ, ಝಾನ್ಸಿರಾಣಿ ಲಕ್ಷ್ಮೇಬಾಯಿ, ತ್ಯಾತಾಟೋಪಿ, ಜಾಫರ್‌ಸಾಬ್‌ ಬಹದ್ದೂರ್‌ ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ದರು. ಸದ್ಯ ಏಕತೆ ಮರೆತು ಒಡೆದಾಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ದೂರಿದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ 10 ಡ್ಯಾಂ ಮಾತ್ರ ಇದ್ದವು. ಸದ್ಯ ಭಾರತದಲ್ಲಿ 500 ಡ್ಯಾಂಗಳಿವೆ. ಇವುಗಳನ್ನು ಕಾಂಗ್ರೆಸ್‌ ಕಟ್ಟಿಸಿದೆ. ಬಿಜೆಪಿ ಒಂದು ಡ್ಯಾಂನಾದ್ರೂ ಕಟ್ಟಿಸಿದೆಯಾ? ಪ್ರಧಾನಿ ನರೇಂದ್ರ ಮೋದಿ ನೀರಾವರಿಗೆ ಏನೂ ಮಾಡಿಲ್ಲ. ಕರ್ನಾಟಕ ಪ್ರತಿ ಡ್ಯಾಂ ಸಹ ಕಾಂಗ್ರೆಸ್‌ ಕೊಡುಗೆ. ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ಮೇಲೆ ಭಾರತದ ರುಪಾಯಿ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿದಿದೆ. ಒಂದು ಡಾಲರ್‌ ಬೆಲೆ 10 ವರ್ಷಗಳ ಹಿಂದೆ .42 ಇತ್ತು. ಸದ್ಯ .82 ಆಗಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಎಣ್ಣೆ, ಕಬ್ಬಿಣ, ಗೊಬ್ಬರ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದು ಭಾರತಕ್ಕೆ ಬಿಜೆಪಿ ಕೊಡುಗೆ. ಡಾಲರ್‌ ಮೌಲ್ಯ ಹೆಚ್ಚಳದಿಂದ ಬಂಗಾರ ದರ ಸಹ ದುಪ್ಪಟ್ಟು ಆಗಿದೆ ಎಂದರು.

ಖಾತೆಗಳು ಫೈಲ್‌ ಓದಲಾಗದ ಸಚಿವ:

ನಾನು ಕ್ಷೇತ್ರದಲ್ಲಿ ಇರುವುದಿಲ್ಲ ಎಂದು ಸಚಿವ ಹಾಲಪ್ಪ ಆಚಾರ ಟೀಕಿಸುತ್ತಿರುತ್ತಾರೆ. ಹೌದು, ನಾನು ಕ್ಷೇತ್ರದಲ್ಲಿ ಹೆಚ್ಚಿಗೆ ಇರುವುದಕ್ಕಿಂತ ದೆಹಲಿ, ಬೆಂಗಳೂರಿನಲ್ಲಿ ಇದ್ದುಕೊಂಡು ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಎಂಜಿನಿಯರಿಂಗ್‌ ಕಾಲೇಜ್‌, ಕೌಶಲ್ಯ ಕೇಂದ್ರ, 13 ಮೊರಾರ್ಜಿ ವಸತಿ ಶಾಲೆ, ಗುನ್ನಾಳ ಪಾಲಿಟೆಕ್ನಿಕ್‌, ನವೋದಯ ವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಹೀಗೆ ನಾನಾ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸಚಿವ ಹಾಲಪ್ಪ ಆಚಾರ ಕ್ಷೇತ್ರದಲ್ಲೇ ಇದ್ದುಕೊಂಡು ಏನು ಮಾಡಿದ್ದಾರೆ ಹೇಳಿ ನೋಡೋಣ, ಉನ್ನತ ಶಿಕ್ಷಣ ಸಚಿವನಾಗಿದ್ದಾಗ ನಾನು ರಾಜ್ಯಕ್ಕೆ ಅಪಾರ ಶೈಕ್ಷಣಿಕ ಕೊಡುಗೆ ನೀಡಿದ್ದೇನೆ. ಸಚಿವ ಹಾಲಪ್ಪ ಆಚಾರ ಅವರಿಗೆ ರಾಜ್ಯದ ಮೂರು ಇಲಾಖೆಗಳ ಜವಾಬ್ದಾರಿ ಇದೆ. ಆದರೆ ಅವರು ಐದು ದಿನ ಕ್ಷೇತ್ರದಲ್ಲೇ ಇರುತ್ತಾರೆ. ಅಲ್ಲಿ ನೂರಾರು ಪುಟಗಳ ಫೈಲ್‌ ಇರುತ್ತವೆ. ಅವುಗಳನ್ನು ಓದಲಾರದೆ ಇತ್ತ ಓಡಿ ಬರುತ್ತಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಶೂನ್ಯ. ಆದರೆ ಸದ್ಯ ಗುತ್ತಿಗೆದಾರರೇ ಹೇಳುವಂತೆ ಇದು ಶೇ. 40 ಕಮಿಷನ್‌ ಸರ್ಕಾರವಾಗಿದೆ. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುತ್ತೇವೆ. ಜನತೆ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮತ ನೀಡಬೇಕಿದೆ. ಹಿಂದೆ ನಾನು ಸಹ ಸೋತಿದ್ದೆ, ಸೋತರು ಎಂದಿಗೂ ಅಭಿವೃದ್ಧಿ ಮರೆತಿಲ್ಲ ಎಂದರು.

ಈ ವೇಳೆ ಬಿಜೆಪಿ ತೊರೆದು ಮುಖಂಡರಾದ ಪ್ರೇಮಾ ಮುದಗಲ್ಲ ಹಾಗೂ ಶರಣಪ್ಪ ಹಡಪದ ಕಾಂಗ್ರೆಸ್‌ ಸೇರಿದರು. ಯಲಬುರ್ಗಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡು, ಕುಕನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಗೌಡ ಚಂಡೂರು, ಕುಕನೂರು ನಗರ ಘಟಕ ಅಧ್ಯಕ್ಷ ರೆಹೆಮಾನಸಾಬ್‌ ಮಕ್ಕಪ್ಪನವರ್‌, ಪಪಂ ಸದಸ್ಯ ಗುಡ್ನೇಪ್ಪ ನೋಟಗಾರ, ಪ್ರಮುಖರಾದ ಯಂಕಣ್ಣ ಯರಾಶಿ, ಅಶೋಕ ತೋಟದ, ಬಸವರಾಜ ಮಾಸೂರು, ಗಿರಿಯಪ್ಪ ಬೀಡಿನಾಳ, ಶರಣಪ್ಪ ಬೀಡಿನಾಳ, ಈಶಯ್ಯ ಶಿರೂರಮಠ, ಸುರೇಶ ಸದರಿ, ದೇವಪ್ಪ ಮರಡಿ, ಶಿವನಗೌಡ ದಾನರೆಡ್ಡಿ, ಸಂಗಮೇಶ ಗುತ್ತಿ, ಸುಧೀರ ಕೊರ್ಲಹಳ್ಳಿ, ಅರವಿಂದ ಮುಂದಲಮನಿ ಇತರರಿದ್ದರು.

ಅಭಿವೃದ್ಧಿ ಮಾಡುವ ಹುಚ್ಚು ನನ್ನನ್ನು ರಾಜಕೀಯಕ್ಕೆ ಕರೆತಂದಿದೆ; ಬಸವರಾಜ ರಾಯರೆಡ್ಡಿ

ನಾನು ರೈಲ್ವೆ ಯೋಜನೆ ಮಾಡಿಸಿ, ರೈಲು ಓಡುವಂತೆ ಮಾಡಿದ್ದೇನೆ. ಯೋಜನೆ ಮಂಜೂರು ಆದಾಗ ರಾಯರಡ್ಡಿ ರೀಲು ಬಿಡ್ತಾನೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದ್ದರು, ಸದ್ಯ ರೈಲು ಬರುತ್ತಿದೆ.

ಬಸವರಾಜ ರಾಯರಡ್ಡಿ ಮಾಜಿ ಸಚಿವ