ಮಹಾರಾಷ್ಟ್ರ ಸರ್ಕಾರದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಲು ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ನಿರ್ಧರಿಸಿದ್ದಾರೆ. ಎಲ್ಲಾ ರಾಜೀಕ ಜವಾಬ್ದಾರಿಗಳಿಂದ ಮುಕ್ತವಾಗಲು ತೀರ್ಮಾನ ಮಾಡಿದ್ದು, ಇದನ್ನು ಪ್ರಧಾನಿ ಮೋದಿ ಅವರಿಗೂ ತಿಳಿಸಿದ್ದೇನೆ ಎಂದಿದ್ದಾರೆ.

ಮುಂಬೈ (ಜ.23): ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಕುರಿತಾಗಿ ಸ್ವತಃ ಭಗತ್‌ ಸಿಂಗ್‌ ಕೋಶಿಯಾರಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ನಾನು ಎಲ್ಲಾ ರಾಜಕೀಯ ಜವಾಬ್ದಾರಿಗಳನ್ನು ಬಿಟ್ಟುಬಿಡಲು ನಿರ್ಧಾರ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಯಕೆಯನ್ನು ವ್ಯಕ್ತಪಡಿಸಿದ್ದೇನೆ' ಎಂದು ಹೇಳಿದ್ದಾರೆ. ಶಿವಾಜಿಯನ್ನು ಹಿಂದಿನ ಕಾಲದ ಐಕಾನ್ ಎಂದು ಕರೆದಿದ್ದಕ್ಕಾಗಿ ಕೋಶಿಯಾರಿ ವಿವಾದಕ್ಕೊಳಗಾಗಿದ್ದರು. ಕಳೆದ ತಿಂಗಳು, ಕೋಶಿಯಾರಿ ಅವರು ಈ ವಿವಾದದ ಬಗ್ಗೆ ಮಾರ್ಗದರ್ಶನ ಕೋರಿ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನೂ ಬರೆದಿದ್ದರು. ಹುದ್ದೆಯಲ್ಲಿ ಮುಂದುವರಿಯಬೇಕೋ ಬೇಡವೋ ಎಂದು ಗೃಹ ಸಚಿವರಿಂದ ಸಲಹೆ ಕೇಳಿದ್ದರು. ಕೋಶಿಯಾರಿ ಅವರು ಡಿಸೆಂಬರ್ 6ರಂದು ಈ ಪತ್ರ ಬರೆದಿದ್ದು, ಕೆಲ ದಿನಗಳ ನಂತರ ಬೆಳಕಿಗೆ ಬಂದಿದೆ.

ರಾಜ್ಯಪಾಲ ಹುದ್ದೆಯನ್ನು ತೊರೆಯುವ ಕುರಿತಾಗಿ ಟ್ವೀಟ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದೆ. ನಾನು ಎಲ್ಲಾ ರಾಜಕೀಯ ಜವಾಬ್ದಾರಿಗಳಿಂದ ಮುಕ್ತನಾಗಲು ಬಯಸುತ್ತೇನೆ ಎಂದು ಅವರಿಗೆ ಹೇಳಿದ್ದೆ. ನನ್ನ ಉಳಿದ ಜೀವನವನ್ನು ಬರವಣಿಗೆ, ಓದುವಿಕೆ ಮತ್ತು ಇತರ ಚಟುವಟಿಕೆಗಳಲ್ಲಿ ಕಳೆಯಲು ನಾನು ಬಯಸುತ್ತೇನೆ ಎಂದು ನಾನು ಅವರಿಗೆ ಹೇಳಿದ್ದೆ. ನಾನು ಯಾವಾಗಲೂ ಪ್ರಧಾನಿಯಿಂದ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ನವೆಂಬರ್ 19 ರಂದು ಔರಂಗಾಬಾದ್‌ನಲ್ಲಿ ನಡೆದ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಶಿವಾಜಿಯನ್ನು ಹಳೆಯ ದಿನಗಳ ಐಕಾನ್ ಎಂದು ಕರೆದಿದ್ದರು. ಕಾರ್ಯಕ್ರಮದಲ್ಲಿ ಕೋಶಿಯಾರಿ ಅವರೊಂದಿಗೆ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೊಸ ಯುಗದ ಐಕಾನ್‌ಗಳು ಎಂದು ಬಣ್ಣಿಸಿದರು. ಈ ಹೇಳಿಕೆಯ ನಂತರ, ಪ್ರತಿಪಕ್ಷಗಳ ನಾಯಕರು ಅವರ ಮೇಲೆ ವಾಗ್ದಾಳಿ ನಡೆಸಿದ್ದಲ್ಲದೆ, ರಾಜೀನಾಮೆಗೆ ಒತ್ತಾಯಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದ ಶಿಂಧೆ ಬಣ ಕೂಡ ಕೋಶಿಯಾರಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿತ್ತು.

ವಿವಾದಾತ್ಮಕ ಹೇಳಿಕೆಯ ನಂತರ ಶಿವಸೇನೆ ಸಂಸದ ಸಂಜಯ್ ರಾವುತ್, ಭಗತ್ ಸಿಂಗ್ ಕೋಶಿಯಾರಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದುರ. ರಾಜ್ಯದಲ್ಲಿ ರಾಜ್ಯಪಾಲ ಸ್ಥಾನ ಘನತೆ ಕಳೆದುಕೊಂಡಿದೆ ಎಂದರು. ಅವರನ್ನು ರಾಜ್ಯಪಾಲರನ್ನಾಗಿ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಮಹಾರಾಷ್ಟ್ರವನ್ನು ಗೇಲಿ ಮಾಡಿದ್ದಾರೆ ಎಂದು ಟೀಕಿಸಿದ್ದರು. ರಾಜ್ಯಪಾಲರನ್ನು ಬಿಜೆಪಿಯಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಮಂಗಳವಾರ ಒತ್ತಾಯಿಸಿದ್ದಾರೆ. 'ರಾಜ್ಯಪಾಲರಿಗೆ ಇತಿಹಾಸ ಗೊತ್ತಿಲ್ಲ. ಅವರನ್ನು ರಾಜ್ಯದಿಂದ ಹೊರಗೆ ಕಳುಹಿಸಬೇಕು' ಎಂದು ಹೇಳಿದ್ದರು.

Add Asianetnews Kannada as a Preferred SourcegooglePreferred

ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಕೋಶಿಯಾರಿ ಅವರು ಮುಂಬೈನ ಆರ್ಥಿಕ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು ಇಲ್ಲಿ ವಾಸಿಸುತ್ತಿರುವ ರಾಜಸ್ಥಾನಿಗಳು ಮತ್ತು ಗುಜರಾತಿಗಳಿಂದ ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು. ಮಹಾರಾಷ್ಟ್ರದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಹೊರಹಾಕಿ. ಆಗ ನಿಮ್ಮ ಬಳಿ ಯಾವುದೇ ಹಣ ಉಳಿಯುವುದಿಲ್ಲ ಎಂದು ಕೋಶಿಯಾರಿ ಹೇಳಿದ್ದರು. ಆಗ ಮುಂಬೈಯನ್ನು ಯಾರೂ ಆರ್ಥಿಕ ರಾಜಧಾನಿ ಎಂದು ಕರೆಯುವುದಿಲ್ಲ ಎಂದು ಹೇಳಿದ್ದರು.

ಔರಂಗಜೇಬ್‌ ಪೋಸ್ಟರ್‌ನೊಂದಿಗೆ ಹಲವರಿಂದ ಡ್ಯಾನ್ಸ್‌: 8 ಮಂದಿ ವಿರುದ್ಧ ಕೇಸ್‌ ದಾಖಲು

ಗುಜರಾತಿಗಳು ಮತ್ತು ರಾಜಸ್ಥಾನಿಗಳ ಕುರಿತು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿಕೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದರು. ಮಹಾರಾಷ್ಟ್ರದಲ್ಲಿ ರಾಜ್ಯಪಾಲರು ಎಲ್ಲವನ್ನೂ ಆನಂದಿಸಿದ್ದಾರೆ ಎಂದು ಉದ್ಧವ್ ಹೇಳಿದ್ದಾರೆ. ಈಗ ಆ ಕೊಲ್ಹಾಪುರಿ ಚಪ್ಪಲಿಗಳನ್ನೂ ನೋಡುವ ಸಮಯ ಬಂದಿದೆ ಎಂದಿದ್ದರು.