ಆರ್.ಅಶೋಕ್ ಅವರಷ್ಟು ತಿಳುವಳಿಕೆ ನನಗಿಲ್ಲ. ಅವರು ಶಾಮಿಯಾನ ಹಾಕಿಸಿಕೊಟ್ರೆ ಸಂತೋಷ. ಅಲ್ಲೇ ಕೂತು ನಾವು ಪ್ರತಿಭಟನೆ ಮಾಡ್ತೀವಿ. ಎಲ್ಲಾ ಕಡೆಗಳಲ್ಲೂ ಶಾಮಿಯಾನ ಹಾಕಿಸಿಕೊಡಲಿ: ಡಿ.ಕೆ. ಸುರೇಶ್‌

ರಾಮನಗರ(ಜೂ.17): ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾರ್ಯಕರ್ತರು, ಮುಖಂಡರ ಸಲಹೆ ಪಡೆಯಬೇಕು. ಯಾರೂ ಸೂಕ್ತ ಅಂತ ಅವರು ತೀರ್ಮಾನ ಮಾಡಿದ್ರೆ ಅವರಿಗೆ ಬೆಂಬಲ ಕೊಡ್ತೀನಿ. ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಅನ್ನೊದು ನನ್ನ ಉದ್ದೇಶವಾಗಿದೆ ಅಂತ ಸಂಸದ ಡಿ.ಕೆ.ಸುರೇಶ್ ರಾಜಕೀಯ ವೈರಾಗ್ಯದ ಮಾತುಗಳನ್ನಾಡಿದ್ದಾರೆ. 

Add Asianetnews Kannada as a Preferred SourcegooglePreferred

ಸಂಸದ ಡಿ.ಕೆ.ಸುರೇಶ್ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ವ್ಯಂಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಕುಮಾರಸ್ವಾಮಿ ಅವರಿಗೆ ವ್ಯಂಗ್ಯ ಬಿಟ್ಟು ಬೇರೆ ಏನೂ ಬರಲ್ಲ, ವ್ಯಂಗ್ಯ ಮಾಡಲಿ. ಅಧಿಕಾರದ ದಾಹ ಇದ್ದವರಿಗೆ ರಾಜಕಾರಣ ಬೇಕು. ನನಗಿರುವುದು ಅಭಿವೃದ್ಧಿಯ ದಾಹ. ಇನ್ನೂ ಒಂದು ವರ್ಷ ಸಮಯ ಇದೆ, ನಾನು ಅಭಿವೃದ್ಧಿಗೆ ಗಮನಕೊಟ್ಟಿದ್ದೀನಿ ಅಂತ ಎಚ್‌ಡಿಕೆಗೆ ಟಾಂಗ್ ಕೊಟ್ಟಿದ್ದಾರೆ. 
ಡಿ.ಕೆ.ಸುರೇಶ್ ಸೋಲಿಸಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ಅವರು ಹೊಂದಾಣಿಕೆ ಮಾಡಿಕೊಳ್ಳಲಿ, ಯಾರು ಬೇಕಾದ್ರೂ ನಿಲ್ಲಲಿ. ನನಗಿರೂದು ಒಂದೇ ಮತ, ಪ್ರಧಾನಿಗಿರೋದು ಒಂದೇ ಮತ. ಆ ಮತವನ್ನ ಯಾರಿಗೆ ಹಾಕಬೇಕು ಅಂತ ಜನ ತೀರ್ಮಾನ ಮಾಡ್ತಾರೆ ಅಂತ ತಿಳಿಸಿದ್ದಾರೆ. 

ತಮ್ಮ ಆದ್ರೂ ನನಗೆ ಮಗ ಇದ್ದ ಹಾಗೆ: ಡಿಕೆ ಸುರೇಶ್ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಡಿಕೆ ಶಿವಕುಮಾರ್

ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚುಕೊಳ್ತಿದೆ

ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್‌ ಅವರು, ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದೆ. ಅಕ್ಕಿ ಇರೋದು ಸಾರ್ವಜನಿಕರ ವಿತರಣೆಗೆ. ಆದ್ರೆ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚುಕೊಳ್ತಿದೆ. ಎಷ್ಟೋ ಸಾರಿ ಅಕ್ಕಿ ಕೆಟ್ಟುಹೋಗಿ ನಷ್ಟ ಆಗಿದೆ. ರಾಜ್ಯ ಸರ್ಕಾರ ಉಚಿತವಾಗಿ ಏನೂ ಅಕ್ಕಿ ಕೇಳ್ತಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲೇ ಕೊಡಿ ಅಂತ ಕೇಳ್ತಿದ್ದೇವೆ. ನಾವು ಅಕ್ಕಿ‌ ಕೇಳ್ತಿರೋದು ಬಡವರು, ಹಸಿದವರ ದೃಷ್ಟಿಯಿಂದ ಅನ್ನ ಕೊಡಿ ಅಂತಿದ್ದೇವೆ. ಇದು ಕೇಂದ್ರದ ಕಾರ್ಯಕ್ರಮವೂ ಇರಬಹುದು, ರಾಜ್ಯದ ಕಾರ್ಯಕ್ರಮವೂ ಇರಬಹುದು. ಆಹಾರ ಭದ್ರತಾ ಕಾಯ್ದೆ ತಂದಿದ್ದೆ ಯುಪಿಎ ಸರ್ಕಾರ. ಆ ಕಾಯ್ದೆ ತರದಿದ್ದರೆ ದೇಶದ ಜನರಿಗೆ ಇವರು 5 ಕೆಜಿ ಅಕ್ಕಿ ಕೊಡೊಕೆ ಆಗ್ತಿತ್ತಾ.?. ಹಿಂದೆ ಸಿದ್ದರಾಮಯ್ಯನವರು ಉಚಿತ ಅಕ್ಕಿ ಕೊಟ್ಟಿದ್ರು. ಆಗಲೂ ಬಡವರ ಹಸಿವನ್ನ ನೀಗಿಸಿದ್ದೆವು. ಈಗಲೂ 10ಕೆ.ಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತೆ. ಬಿಜೆಪಿಗೆ ಮತಹಾಕಿದ್ರೂ ಅಕ್ಕಿ, ಜೆಡಿಎಸ್ ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತೆ. ಆದರೆ ಹಸಿದ ವರ್ಗಕ್ಕೆ ಕೇಂದ್ರ ಅನ್ಯಾಯ ಮಾಡ್ತಿದೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ಬಡವರಿಗೆ ಅಕ್ಕಿಕೊಡಿ ಎಂದು ಕೇಂದ್ರದ ವಿರುದ್ಧ ಸಂಸದ ಡಿ.ಕೆ.ಸುರೇಶ್ ಹರಿಹಾಯ್ದಿದ್ದಾರೆ. 

ಅಶೋಕ್ ಅವರಷ್ಟು ತಿಳುವಳಿಕೆ ನನಗಿಲ್ಲ

ಕಾಂಗ್ರೆಸ್ ಪ್ರತಿಭಟನೆಗೆ ಶಾಮಿಯಾನ ಹಾಕಿಕೊಡ್ತೀವಿ ಎಂಬ ಮಾಜಿ ಸಚಿವ ಆರ್.ಅಶೋಶ್‌ ಹೇಳಿಕೆ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್, ಆರ್.ಅಶೋಕ್ ಅವರಷ್ಟು ತಿಳುವಳಿಕೆ ನನಗಿಲ್ಲ. ಅವರು ಶಾಮಿಯಾನ ಹಾಕಿಸಿಕೊಟ್ರೆ ಸಂತೋಷ. ಅಲ್ಲೇ ಕೂತು ನಾವು ಪ್ರತಿಭಟನೆ ಮಾಡ್ತೀವಿ. ಎಲ್ಲಾ ಕಡೆಗಳಲ್ಲೂ ಶಾಮಿಯಾನ ಹಾಕಿಸಿಕೊಡಲಿ ಅಂತ ಹೇಳಿದ್ದಾರೆ. 

ಹೋಟೆಲ್‌, ಕ್ಲಬ್‌ಗಳಲ್ಲಿ ರಾಜಕೀಯ ಮಾಡಿದರೆ ಮತ ಬರಲ್ಲ: ಸಂಸದ ಡಿ.ಕೆ.ಸುರೇಶ್‌

ರಾಜ್ಯದ ಬಿಜೆಪಿ ಸಂಸದರ ವಿರುದ್ಧವೂ ಕಿಡಿ ಕಾರಿದ ಸಂಸದ ಡಿ.ಕೆ.ಸುರೇಶ್ ಅವರು, ರಾಜ್ಯದ ಯಾವುದೇ ಸಮಸ್ಯೆ ಬಗ್ಗೆ ಅವರು ಧ್ವನಿ ಎತ್ತಿಲ್ಲ. ನಮ್ಮ ರಾಜ್ಯದ ಜಿಎಸ್‌ಟಿ, ಕೃಷ್ಣಾ ಯೋಜನೆ, ಪ್ರವಾಹ ಪರಿಹಾರದ ಬಗ್ಗೆ ಮಾತನಾಡಲ್ಲ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಅಗ್ತಿದೆ. ರಾಜ್ಯದ ಬಿಜೆಪಿ ಸಂಸದರು ಈ ಬಗ್ಗೆ ಮೌನವಾಗಿದ್ದಾರೆ ಅಂತ ಹೇಳಿದ್ದಾರೆ. 

ಬಿಜೆಪಿ ಸರ್ಕಾರದ ಅವಧಿ ಯೋಜನೆಗಳ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್‌, ಅದು ಸರ್ಕಾರದ ಕೆಲಸ ನನಗೆ ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿರೋದನ್ನ ನಾನು ಹೇಳ್ತೆನೆ ಎಂದಷ್ಟೇ ಹೇಳಿದ್ದಾರೆ. 
ಇನ್ನು ಬಿಬಿಎಂಪಿ ಅಧಿಕಾರಿಗಳು ಸಸ್ಪೆಂಡ್ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಹಿಂದೆಯೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೆ. ಲೋಕಾಯುಕ್ತರು ವರದಿ ಕೊಟ್ಟಿದ್ದಾರೆ. ಕಾಮಗಾರಿ ನಡೆಯದೇ ಹಣ ಡ್ರಾ ಮಾಡಿರೋದು ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಾದ್ರೂ ಕೊಡ್ತಿನಿ. 10 ದಿನದ ಮುಂಚೆ ಕೆಲಸ ಮಂಜೂರಾಗುತ್ತೆ‌, 15 ದಿನಕ್ಕೆ ಹಣ ಡ್ರಾ ಆಗುತ್ತೆ. ಅದನ್ನ ಪರಿಶೀಲನೆ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನ ಬಿಜೆಪಿ ಸರ್ಕಾರ ಮುಚ್ಚಿ ಹಾಕಿತ್ತು. ಈಗ ಅದರ ಬಗ್ಗೆ ಕ್ರಮ ಆಗಿದೆ ಹೇಳಿದ್ದಾರೆ.