ಕಳೆದ ಚುನಾವಣೆಯಲ್ಲಿ ಜನರು ನನ್ನನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿದ ನಂತರ ನಾನು ಕೇವಲ ಕ್ಷೇತ್ರದ ಅಭಿವೃದ್ಧಿಗೆ ಗಮನ ಕೊಟ್ಟಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಿಲ್ಲ. ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗಿಲ್ಲ. ನನ್ನ ಕರ್ತವ್ಯಕ್ಕೆ ಬದ್ಧನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದೆಲ್ಲ ಜನರ ಮುಂದಿದೆ. ಮತ್ತೊಮ್ಮೆ ಆಶೀರ್ವದಿಸಿ ಎಂದು ಕೇಳಲು ನನ್ನ ಕೆಲಸವೇ ಜನರ ಮುಂದಿದೆ: ಲಕ್ಷ್ಮೀ ಹೆಬ್ಬಾಳಕರ 

ಬೆಳಗಾವಿ(ಮಾ.27): ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಯಾವುದೇ ರೀತಿಯ ತಂತ್ರ, ಕುತಂತ್ರ ಮಾಡುವುದು ನನಗೆ ಗೊತ್ತಿಲ್ಲ. ಮಾಡಿರುವ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟು ಜನರ ಆಶೀರ್ವಾದ, ಬೆಂಬಲ ಕೇಳುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿಬಸ್ತವಾಡ ಗ್ರಾಮದ ಲಕ್ಷ್ಮೀ ಪ್ಲಾಟ್‌ ಹಾಗೂ ಸಂತಿಬಸ್ತವಾಡ ಗ್ರಾಮದಿಂದ ತೀರ್ಥಕುಂಡೆ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗಾಗಿ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ವತಿಯಿಂದ ಬಿಡುಗಡೆಯಾದ . 65 ಲಕ್ಷ ವಚ್ಚದಲ್ಲಿ ರಸ್ತೆಗಳ ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬೆಳಗಾವಿಯಲ್ಲಿ ಐವರು ಹಾಲಿ, ಮೂವರು ಮಾಜಿಗಳಿಗೆ ಕಾಂಗ್ರೆಸ್‌ ಮಣೆ

ಕಳೆದ ಚುನಾವಣೆಯಲ್ಲಿ ಜನರು ನನ್ನನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿದ ನಂತರ ನಾನು ಕೇವಲ ಕ್ಷೇತ್ರದ ಅಭಿವೃದ್ಧಿಗೆ ಗಮನ ಕೊಟ್ಟಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಿಲ್ಲ. ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗಿಲ್ಲ. ನನ್ನ ಕರ್ತವ್ಯಕ್ಕೆ ಬದ್ಧನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದೆಲ್ಲ ಜನರ ಮುಂದಿದೆ. ಮತ್ತೊಮ್ಮೆ ಆಶೀರ್ವದಿಸಿ ಎಂದು ಕೇಳಲು ನನ್ನ ಕೆಲಸವೇ ಜನರ ಮುಂದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಆಶ್ಪಕ್‌ ತಹಸೀಲ್ದಾರ್‌, ದೇಮಣ್ಣ ನಾಯ್ಕ, ಬಸು ಬಿರಮುತಿ, ರಾಮನಿಂಗ ಕರ್ಲೇಕರ, ಅಜಯ ಚನ್ನಿಕುಪ್ಪಿ, ರೇಣುಕಾ ಖಾನಾಪೂರಿ, ಸಕ್ಕುಬಾಯಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ವಿರೋಧಿಗಳ ಆಕ್ಷೇಪಕ್ಕೆ ಅವಕಾಶವಿಲ್ಲ:

ನನ್ನ ರಾಜಕೀಯ ವಿರೋಧಿಗಳು ರಾಜಕೀಯಕ್ಕೆ ಮಾತ್ರ ನನ್ನ ಬಗ್ಗೆ ಆಕ್ಷೇಪಗಳನ್ನು ಹುಡುಕಬೇಕೇ ಹೊರತು ಅಭಿವೃದ್ಧಿ ವಿಷಯದಲ್ಲಿ ಆಕ್ಷೇಪ ವ್ಯಕ್ತಪಡಿಸಲು ಯಾವುದೇ ಅವಕಾಶವಿಲ್ಲ. ಶಾಸಕತ್ವದ ಮೊದಲ ಅವಧಿಯಲ್ಲೇ ಇದನ್ನು ಸಾಧಿಸಲು ಆಶೀರ್ವದಿಸಿದ ಜನತೆಗೆ ಎಲ್ಲ ಶ್ರೇಯಸ್ಸು ಸಲ್ಲುತ್ತದೆ ಎಂದು ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ.ಎಚ್‌.ಗ್ರಾಮದ ಸಿದ್ಧೇಶ್ವರ ನಗರ ಹಾಗೂ ರಜಾಕ್‌ ಕಾಲೋನಿಯ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ರಸ್ತೆಗಳ ನಿರ್ಮಾಣಕ್ಕೆ ಲಕ್ಷ್ಮೇ ಹೆಬ್ಬಾಳಕರ ಅವರು ಲೋಕೋಪಯೋಗಿ ಇಲಾಖೆಯಿಂದ . 46 ಲಕ್ಷ ಬಿಡುಗಡೆ ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ಜಾತಿ, ಧರ್ಮ, ರಾಜಕೀಯ ಎಲ್ಲವನ್ನೂ ಬದಿಗಿಟ್ಟು ಕೇವಲ ಅಭಿವೃದ್ಧಿಯನ್ನೇ ಗುರಿಯಾಗಿರಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅವಸಾನದತ್ತ ಸಾಗಿದೆ: ರಮೇಶ ಜಾರಕಿಹೊಳಿ

ಈ ಅಭಿವೃದ್ಧಿ ಅಭಿಯಾನದಲ್ಲಿ ಮಕ್ಕಳು, ಮಹಿಳೆಯರು ಎನ್ನದೆ ಎಲ್ಲರನ್ನೂ ಸಮಾನವಾಗಿ ಕಂಡು ಸ್ಪಂದಿಸಿದ್ದೇನೆ. ತಾರತಮ್ಯಕ್ಕೆ ಎಲ್ಲೂ ಅವಕಾಶ ನೀಡಿಲ್ಲ. ಜನಸಾಮಾನ್ಯರ ಮಧ್ಯೆ ಸಾಮಾನ್ಯಳಾಗಿ ಬೆರೆತು ಕ್ಷೇತ್ರದ ಬೆಳವಣಿಗೆಯಲ್ಲಿ ತೊಡಗಿದ್ದೇನೆ. ಮಂಕುಬೂದಿ ರಾಜಕೀಯ ಮಾಡುವ ಬದಲು ಮನಸ್ಸುಗಳನ್ನು ಬೆಸೆದು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿದರು.

ಇದನ್ನು ಮನಗಂಡಿದ್ದರಿಂದಲೇ ಇಂದು ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯೇ ಇಲ್ಲದಂತೆ ಜನತೆ ನನ್ನನ್ನು ಬೆಂಬಲಿಸುತ್ತಿರುವುದಕ್ಕೆ ಸದಾ ಋುಣಿಯಾಗಿರುತ್ತೇನೆ. ಮುಂಬರುವ ಚುನಾವಣೆಯಲ್ಲಿ ಜನತೆ ಯಾವುದೇ ಭಾವನಾತ್ಮಕತೆ ಕೆದಕುವ ಮಾತುಗಳಿಗೆ ಮರುಳಾಗದೆ ನನ್ನ ಅವಧಿಯಲ್ಲಾದ ಅಭಿವೃದ್ಧಿ ನೋಡಿ ಆತ್ಮಸಾಕ್ಷಿಯಿಂದ ಬೆಂಬಲಿಸಿದರೆ ಸದೈವ ಈ ಕ್ಷೇತ್ರದ ಸೇವಕಿಯಾಗಿ ಸಮೃದ್ಧ, ಸುಸಜ್ಜಿತ ವ್ಯವಸ್ಥೆಯ ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಕಟಿಬದ್ಧಳಾಗಿರುತ್ತೇನೆ ಎಂದು ಹೇಳಿದರು.